ಮೈಸೂರು ಮೌನ
ಮೈಸೂರು

ಮೈಸೂರು ಮೌನ

October 27, 2020

ಮೈಸೂರು, ಅ.26(ಆರ್‍ಕೆಬಿ)- ಕೋವಿಡ್-19 ಕಾರಣದಿಂದಾಗಿ ಸರಳ ದಸರಾ ಹಿನ್ನೆಲೆಯಲ್ಲಿ ಜಂಬೂಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತಗೊಳಿಸಿದ್ದ ರಿಂದ ಸೋಮವಾರ ಮೈಸೂರಿನತ್ತ ಹೆಚ್ಚು ಜನ ಬರಲಿಲ್ಲ. ಗ್ರಾಮಾಂತರ ಮತ್ತು ನಗರ ಸಾರಿಗೆ ಬಸ್‍ಗಳೆಲ್ಲವೂ ಎಂದಿನಂತೆಯೇ ಓಡಾಡಿದರೂ ಜನರ ಒತ್ತಡ ಇರಲಿಲ್ಲ.

ಪ್ರತೀ ವರ್ಷ ದಸರಾ ವಿಜಯದಶಮಿ ಜಂಬೂಸವಾರಿ ದಿನದಂದು ಮೈಸೂರಿಗೆ ಲಕ್ಷಾಂತರ ಮಂದಿ ಬಂದು ಸೇರುತ್ತಿದ್ದರು. ನಗರದ ತುಂಬೆಲ್ಲಾ ಜನ, ವಾಹನ. ಯಾವ ರಸ್ತೆಗಳಲ್ಲೂ ಜನರು ಪ್ರವಾಹದೋಪಾದಿಯಲ್ಲಿ ಬರುತ್ತಿದ್ದರು. ಆದರೆ ಈ ಬಾರಿಯ ವಿಜಯದಶಮಿ ಮೆರವಣಿಗೆಗೆ ಮೈಸೂರಲ್ಲಿ ಅಂತಹ ವಾತಾವರಣ ಕಂಡು ಬರಲಿಲ್ಲ. ಜಂಬೂಸವಾರಿ ಮೆರವಣಿಗೆ ಸಾಗುವ ಅರಮನೆಯಿಂದ ಬನ್ನಿಮಂಟಪ ಮೈದಾನ ದವರೆಗಿನ ರಸ್ತೆಯ ಇಕ್ಕೆಲಗಳಲ್ಲೂ ಮೆರವಣಿಗೆ ಕಣ್ತುಂಬಿಕೊಳ್ಳಲು ಮೊದಲೇ ಆಸನ ಹಿಡಿದು ಬಿರು ಬಿಸಿಲಲ್ಲೂ ಗಂಟೆಗಂಟಲೆ ಕಾದು ಕುಳಿತುಕೊಳ್ಳುವ ಜನರು ಕಾಣಲಿಲ್ಲ. ಮೈಸೂರಿನ ರಸ್ತೆಗಳು ಹೆಚ್ಚಿನ ಜನಸಂದಣಿ ಕಾಣದೇ ಬಿಕೋ ಎನ್ನುತ್ತಿದ್ದವು.

ಟೌನ್‍ಹಾಲ್ ಬಳಿಯ ಚಾಮರಾಜ ವೃತ್ತ, ಕೆ.ಆರ್.ಸರ್ಕಲ್, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ವೃತ್ತ, ಹಳೇ ಆರ್‍ಎಂಸಿ ವೃತ್ತ, ಅಬ್ದುಲ್ ಕಲಾಂ ವೃತ್ತ ಸೇರಿ ದಂತೆ ಮೆರ ವಣಿಗೆ ಸಾಗುವ ಇಕ್ಕೆಲಗಳಲ್ಲೂ ಮೆರವಣಿಗೆ ವೇಳೆ ಕೇಳಿ ಬರುತ್ತಿದ್ದ ಕೇಕೆ, ಶಿಳ್ಳೆ, ಕೂಗು, ಆಲಾಪ ಯಾವುದೂ ಕೇಳಿ ಬರಲಿಲ್ಲ. ಬ್ಯಾರಿಕೇಡ್ ತಳ್ಳಿ ಮುನ್ನುಗ್ಗಲು ಯತ್ನಿಸು ತ್ತಿದ್ದ ವಾತಾವರಣವೇ ಇರಲಿಲ್ಲ. ಹಿಂದಿನಿಂದ ಜನರ ತಳ್ಳಾಟದ ನಡುವೆ ಬ್ಯಾರಿಕೇಡ್ ಮಧ್ಯೆ ಸಿಲುಕಿ ಮಹಿಳೆಯರು, ಮಕ್ಕಳ ಚೀರಾಟ, ಅರಚಾಟ ಕೇಳಿ ಬರಲಿಲ್ಲ. ಪೊಲೀ ಸರು ಎಚ್ಚರಿಕೆ ನೀಡಿದ್ದರೂ ಅಪಾಯವನ್ನು ಲೆಕ್ಕಿಸದೆ ಮರಗಳ ಮೇಲೆ, ಕಟ್ಟಡಗಳ ಮೇಲೆ ನಿಂತು ಮೆರವಣಿಗೆ ವೀಕ್ಷಿಸುವ ಜನರು ಕಂಡು ಬರಲಿಲ್ಲ. ಹಬ್ಬದ ಸಂಭ್ರಮದಲ್ಲಿ ವೈನ್‍ಸ್ಟೋರ್‍ಗಳಲ್ಲಿ ಕಂಠಪೂರ್ತಿ ಕುಡಿದು ತೂರಾಡುವ ಅಥವಾ ಚಿತ್ತಾಗಿ ಅಲ್ಲೊಬ್ಬ ಇಲ್ಲೊಬ್ಬ ಬಿದ್ದು, ಮೈಮರೆತ ವರೂ ಯಾರೂ ಕಾಣಲಿಲ್ಲ. ಕರ್ಣಕಠೋರ ಪೀಪಿಗಳ ಸದ್ದು ಕೇಳಿ ಬರಲಿಲ್ಲ. ಹಸಿವನ್ನೂ ಮರೆತು ಸುಡು ಬಿಸಿಲಲ್ಲಿ ಮೆರವಣಿಗೆ ವೀಕ್ಷಿಸುವಾಗ ತಳ್ಳಾಟ, ನೂಕಾಟದಲ್ಲಿ ಕಂಡು ಬರುತ್ತಿದ್ದ ನೂರಾರು ಮಂದಿಯ ಚಪ್ಪಲಿಗಳ ರಾಶಿ ಇಂದು ಕಾಣಬರಲಿಲ್ಲ. ಮೆರವಣಿಗೆ ವೇಳೆ ಬಿಸಿಲ ನಡುವೆ ಬಳಲುವ ಕಲಾವಿದರಿಗೆ, ಜನರಿಗೆ ಮೆರವಣಿಗೆ ಉದ್ದಕ್ಕೂ ನೀರು, ಮಜ್ಜಿಗೆ, ಪಾನಕ, ಜ್ಯೂಸ್ ಇತ್ಯಾದಿ ವಿತರಿಸುವ ಯಾವ ಪ್ರಸಂಗವೂ ಕಂಡು ಬರಲಿಲ್ಲ.

ಆಹಾರ ಪ್ರಿಯರಿಗೆ ನಿರಾಶೆ: ದಸರಾ ಮಹೋತ್ಸವದ ಮತ್ತೊಂದು ಪ್ರಮುಖ ಅತ್ಯಾಕರ್ಷಣೆ ಎಂದರೆ 10 ದಿನಗಳ ಕಾಲ ನಡೆಯುವ ಆಹಾರ ಮೇಳ. ಆದರೆ ಈ ಬಾರಿ ಆಹಾರ ಮೇಳ ಇಲ್ಲದಿದ್ದರಿಂದ ಬಂಬೂ ಬಿರಿಯಾನಿ ಘಮಲು ಬರಲಿಲ್ಲ. ಆಹಾರ ಪ್ರಿಯರಿಗೆ ವಿವಿಧ ಖಾದ್ಯಗಳನ್ನು ಸವಿಯುವ ಭಾಗ್ಯವೂ ದೊರೆಯಲಿಲ್ಲ. ಒಟ್ಟಾರೆ ಕೊರೊನಾ ಸೋಂಕು ಈ ಬಾರಿಯ ದಸರಾ ಮೇಲೆ ಕರಿ ನೆರಳು ಬೀರಿದ್ದರಿಂದ ಹೆಚ್ಚು ಜನರು ಮೈಸೂರಿನತ್ತ ಬರದೇ ಮನೆಯಲ್ಲೇ ಕುಳಿತು ಟಿವಿಗಳಲ್ಲಿ ಅರಮನೆ ಆವರಣದಲ್ಲಿ ನಡೆದ ಜಂಬೂಸವಾರಿ ಮೆರವಣಿಗೆಯನ್ನು ವೀಕ್ಷಿಸಿ ಖುಷಿಪಟ್ಟರು.

 

Translate »