ಮೈಸೂರು,ಜೂ.24-ಮುಕ್ತ ಮತ್ತು ದೂರ ಶಿಕ್ಷಣವನ್ನು ಸಂಪೂರ್ಣ ವಾಗಿ ಕರ್ನಾಟಕ ರಾಜ್ಯ ಮುಕ್ತ ವಿವಿಗೆ ವಹಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಸ್ವಾಗತಿಸಿ, ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, 1996ರಿಂದಲೂ ನೆನೆಗುದಿಗೆ ಬಿದ್ದಿದ್ದ ಸಾರ್ವಜನಿಕರ ಅಹವಾಲನ್ನು ರಾಜ್ಯ ಸರ್ಕಾರ ಒಪ್ಪಿ ಕರ್ನಾಟಕ ರಾಜ್ಯ ಮುಕ್ತ ವಿವಿಗಳ ಅಧಿನಿಯಮಕ್ಕೆ ತಿದ್ದುಪಡಿ ತಂದು ಮುಕ್ತ ವಿವಿಗೆ ಮಾತ್ರ ಮುಕ್ತ ಹಾಗೂ ದೂರ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸಲು ಅಧಿಕಾರ ಕೊಟ್ಟಿರುವುದು ಸ್ವಾಗತಾರ್ಹ ಎಂದಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ, ಕಾರ್ಯ ಕ್ರಮಗಳ ಗುಣಮಟ್ಟ, ವಿವಿ ನಡೆಸಲು ಬೇಕಾಗುವ ಧನ ಸಹಾಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉನ್ನತ ಶಿಕ್ಷಣದ ಸಂಖ್ಯೆ ಏರಿಕೆ ಮುಂತಾದ ಉದ್ದೇಶಗಳ ಸಫಲತೆಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಬಹುದು ಎಂದು ಅವರು ತಿಳಿಸಿದ್ದಾರೆ.

ಮೈಸೂರು