ಅವಿಭಕ್ತ ಕುಟುಂಬದ ಯಜಮಾನನಿಗೆ ಆಸ್ತಿ  ಮಾರಾಟದ ಹಕ್ಕಿದೆ
News, ಮೈಸೂರು

ಅವಿಭಕ್ತ ಕುಟುಂಬದ ಯಜಮಾನನಿಗೆ ಆಸ್ತಿ ಮಾರಾಟದ ಹಕ್ಕಿದೆ

December 16, 2021

ನವದೆಹಲಿ: ಹಿಂದೂ ಅವಿಭಕ್ತ ಕುಟುಂಬದ ನಿರ್ವಹಣೆಯ ಹೊಣೆ ಹೊತ್ತಿರುವ ವ್ಯಕ್ತಿಯು (ಯಜಮಾನ) ಆ ಕುಟುಂಬದ ಆಸ್ತಿಯನ್ನು ಮಾರಾಟ ಮಾಡಲು ಕರಾರು ಮಾಡಿಕೊಳ್ಳುವುದಕ್ಕೆ ಕುಟುಂಬದ ಇತರರು (ಕುಟುಂಬದ ಆಸ್ತಿಯಲ್ಲಿ ಸಮಪಾಲು ಹೊಂದಿರುವ ಇತರರು) ತಡೆ ಒಡ್ಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಂಗಳ ವಾರ ಹೇಳಿದೆ. ಹಿಂದೂ ಅವಿಭಕ್ತ ಕುಟುಂಬದ ನಿರ್ವ ಹಣೆ ಮಾಡುವ ವಯಸ್ಕ ವ್ಯಕ್ತಿಯು ಕುಟುಂಬದ ಆಸ್ತಿಯ ನಿರ್ವಹಣೆಯ ಹಕ್ಕು ಹೊಂದಿದ್ದಾರೆ ಎಂಬು ದನ್ನು ಈ ಹಿಂದೆಯೂ ಹಲವು ಬಾರಿ ಹೇಳಲಾಗಿದೆ ಎಂದು ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಸಂಜೀವ್ ಕುಮಾರ್ ಅವರ ಪೀಠವು ಹೇಳಿದೆ. ಕುಟುಂಬದ ಆಸ್ತಿಯನ್ನು ಮಾರಾಟ ಮಾಡುವ ಕರಾರು ಮಾಡಿಕೊಳ್ಳಲು ಕುಟುಂಬದ ನಿರ್ವಾಹಕರಿಗೆ ಹಕ್ಕು ಇದೆ ಎಂಬುದು ಹಿಂದೆಯೇ ಸಾಬೀತಾಗಿದೆ. ಈ ವಿಚಾರದಲ್ಲಿ ಮತ್ತೆ ತಕರಾರಿಗೆ ಅವಕಾಶ ಇಲ್ಲ. ಆದರೆ, ಮಾರಾಟದ ನಂತರ, ಮಾರಾಟವು ಕಾನೂನುಬದ್ಧ ಅಗತ್ಯಕ್ಕಾಗಿ ನಡೆದಿಲ್ಲ ಅಥವಾ ಕುಟುಂಬದ ಹಿತಕ್ಕಾಗಿ ನಡೆದಿಲ್ಲದಿದ್ದರೆ ಅದನ್ನು ಪ್ರಶ್ನಿಸುವುದಕ್ಕೆ ಅವಕಾಶ ಇದೆ ಎಂದು ಪೀಠವು ಹೇಳಿದೆ. ಕಾನೂನುಬದ್ಧ ಕಾರಣಕ್ಕೆ ಅಥವಾ ಇಡೀ ಕುಟುಂಬದ ಹಿತದ ಕಾರಣಕ್ಕೆ ಕೈಗೊಳ್ಳುವ ನಿರ್ಧಾರವು ಕುಟುಂಬದಲ್ಲಿ ಇರುವ ಅಪ್ರಾಪ್ತ ವಯಸ್ಸಿನವರು ಮತ್ತು ವಿಧವೆಯರು ಸೇರಿದಂತೆ ಅವಿಭಜಿತ ಕುಟುಂಬದ ಎಲ್ಲರ ಹಿತಾಸಕ್ತಿಯನ್ನೂ ಒಳಗೊಂಡಿರುತ್ತದೆ ಎಂದು ಪೀಠ ಹೇಳಿದೆ.

‘ಕಾನೂನುಬದ್ಧ ಅಗತ್ಯ ಎಂಬುದನ್ನು ಸ್ಥಾಪಿಸಲು ನಿರ್ದಿಷ್ಟ ನೆಲೆಗಳೇನೂ ಇಲ್ಲ. ಕಾನೂನುಬದ್ಧ ಅಗತ್ಯ ಎಂಬುದು ಆಯಾ ಪ್ರಕರಣದ ಸತ್ಯಾಂಶಗಳ ಮೇಲೆ ಅವಲಂಬಿ ಸಿರುತ್ತದೆ. ಕಾನೂನುಬದ್ಧ ಅಗತ್ಯವೇ ಎಂಬುದನ್ನು ನಿರ್ಧರಿಸುವಲ್ಲಿ ಮತ್ತು ಅದನ್ನು ಹೇಗೆ ಈಡೇರಿಸಬೇಕು ಎಂಬುದರಲ್ಲಿ ಕುಟುಂಬದ ನಿರ್ವಾಹಕನಿಗೆ ವ್ಯಾಪಕವಾದ ವಿವೇಚನಾಧಿಕಾರ ಇರುತ್ತದೆ. ಕಾನೂನುಬದ್ಧ ಅಗತ್ಯ ಅಥವಾ ಇಡೀ ಪರಿವಾರದ ಹಿತಕ್ಕಾಗಿ ನಿರ್ಧಾರ ಕೈಗೊಳ್ಳುವ ನಿರ್ವಾಹಕರ ಅಧಿಕಾರವು ಸಿಂಧುವಾದುದು ಮತ್ತು ಇತರ ಪಾಲುದಾರರು ಈ ಅಧಿಕಾರಕ್ಕೆ ಬದ್ಧರಾಗಿರಬೇಕು’ ಎಂದು ಪೀಠವು ವಿವರಿಸಿದೆ.

ಮಗನಿಗೆ ಪ್ರಶ್ನಿಸುವ ಹಕ್ಕಿಲ್ಲ: ಹಿರಿಯೂರು ತಾಲೂಕಿನ ಬಗ್ಗನಾಡು ಕಾವಲ್ ಗ್ರಾಮದಲ್ಲಿದ್ದ ಕೃಷಿ ಜಮೀನನ್ನು ಮಾರಾಟ ಮಾಡಲು ಅವಿಭಕ್ತ ಕುಟುಂಬದ ನಿರ್ವಾಹಕ ಕೆ. ವೇಲುಸ್ವಾಮಿ ಅವರು ಬೀರೆಡ್ಡಿ ದಶರಥರಾಮಿ ರೆಡ್ಡಿ ಅವರ ಜತೆ 2006ರ ಡಿಸೆಂಬರ್ 8ರಂದು ಕರಾರು ಮಾಡಿಕೊಂಡಿದ್ದರು. 29 ಲಕ್ಷಕ್ಕೆ ಜಮೀನು ಮಾರಲು ಒಪ್ಪಂದ ಆಗಿತ್ತು. 4 ಲಕ್ಷ ಮುಂಗಡವನ್ನೂ ವೇಲುಸ್ವಾಮಿ ಪಡೆದುಕೊಂಡಿದ್ದರು.
ವೇಲುಸ್ವಾಮಿ ಅವರ ಮಗ ಮಂಜುನಾಥ್ ಅವರು ಮಾರಾಟ ಕರಾರಿನ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದರು. ಮಾರಾಟಕ್ಕೆ ತಮ್ಮ ಒಪ್ಪಿಗೆ ಅಗತ್ಯ ಎಂದು ಅವರು ವಾದಿಸಿದ್ದರು. ಅವಿಭಕ್ತ ಕುಟುಂಬದ ನಿರ್ವಾಹಕರಾಗಿರುವ ವೇಲುಸ್ವಾಮಿಗೆ ಮಾರಾಟದ ಹಕ್ಕು ಇದೆ ಎಂದು ಸ್ಥಳೀಯ ನ್ಯಾಯಾಲಯ ಹೇಳಿತ್ತು. ಅದರ ವಿರುದ್ಧ ಮಂಜುನಾಥ್ ಅವರು ಕರ್ನಾಟಕ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ವೇಲುಸ್ವಾಮಿ ಮಾಡಿಕೊಂಡಿರುವ ಕರಾರು ಜಾರಿ ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ಆದರೆ, ಕುಟುಂಬದ ನಿರ್ವಾಹಕರಾಗಿರುವ ವೇಲುಸ್ವಾಮಿಗೆ ಜಮೀನು ಮಾರಲು ಹಕ್ಕು ಇದೆ ಎಂದು ಸುಪ್ರೀಂಕೋರ್ಟ್ ಈಗ ಹೇಳಿದೆ.

Translate »