ಮಳೆ, ನೆರೆಯಿಂದ ಕೋಟ್ಯಾಂತರ  ನಷ್ಟಕ್ಕೆ ಕಾರಣವಾಯ್ತು.
News

ಮಳೆ, ನೆರೆಯಿಂದ ಕೋಟ್ಯಾಂತರ ನಷ್ಟಕ್ಕೆ ಕಾರಣವಾಯ್ತು.

September 14, 2022

ಬೆಂಗಳೂರು, ಸೆ.13(ಕೆಎಂಶಿ)-ಹವಾಮಾನ ಇಲಾಖೆಯ ಮುನ್ಸೂಚನೆ ಕಡೆಗಣಿಸಿದ ಪರಿಣಾಮವೇ ರಾಜ್ಯದಲ್ಲಿ ಭಾರೀ ಮಳೆ ಹಾಗೂ ನೆರೆಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಪ್ರತಿ ಪಕ್ಷದ ನಾಯಕ ಸಿದ್ದ ರಾಮಯ್ಯ ವಿಧಾನಸಭೆಯ ಲ್ಲಿಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಅತಿವೃಷ್ಟಿ ಕುರಿತಂತೆ ನಿಯಮ 69ರಡಿ ಮಾತನಾಡಿದ ಅವರು, ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾದ್ದರಿಂದ ಭಾರೀ ದುಷ್ಪರಿಣಾಮ ಎದುರಿಸಬೇಕಾಯಿತು. ಈ ಬಗ್ಗೆ ಇಲಾಖೆ ಮಾಹಿತಿ ನೀಡಿದ್ದರೂ ಅದನ್ನು ಪರಿಗಣಿಸದೇ ಜನರನ್ನು ಸಂಕಷ್ಟಕ್ಕೆ ದೂಡಿದ್ದೀರಿ ಎಂದು ಆರೋಪಿಸಿದರು. ಮಳೆ ಮತ್ತು ನೆರೆ ಯಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ತಕ್ಷಣವೇ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾದ್ದರಿಂದ ನೂರಾರು ಮಂದಿ ಪ್ರಾಣ ಕಳೆದುಕೊಂಡರು, ಸಾವಿರಾರು ಜಾನು ವಾರುಗಳು ಸಾವಿಗೀಡಾಗಿವೆ.

ಲಕ್ಷಾಂತರ ಎಕರೆ ಭೂಮಿಯಲ್ಲಿದ್ದ ಬೆಳೆಯನ್ನು ರೈತ ಕಳೆದುಕೊಂಡಿದ್ದು, ಇದಕ್ಕೆಲ್ಲ ಸರ್ಕಾರವೇ ಹೊಣೆ. ಸರ್ಕಾರದ ಬೇಜವಾಬ್ದಾರಿಯಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 29 ಜಿಲ್ಲೆಗಳಲ್ಲಿ ಪ್ರವಾಹ ಬಂದು ರೈತರ ಬೆಳೆಗಳು, ಮನೆ ಕುಸಿದು, ಜನ-ಜಾನುವಾರುಗಳು ಮೃತಪಟ್ಟಿವೆ. ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂದರು. ಮುಂದಿನ ದಿನಗಳಲ್ಲಿ ಭೀಕರ ಸಮಸ್ಯೆ ಉಂಟಾಗ ಬಹುದೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿತ್ತು. ಈ ಕುರಿತಂತೆ ನಾನು ಕೂಡ ಸರ್ಕಾರಕ್ಕೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದೆ. ಕಳೆದ ವರ್ಷವು ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಸದನದ ಗಮನ ಸೆಳೆದರು.

ಜೋಳ ಶೇ.24.5, ಕಬ್ಬು ಶೇ.6.1 ಹಾಗೂ ಹತ್ತಿ ಬೆಳೆ ಹೆಚ್ಚಾಗಬಹುದೆಂದು ಹವಾಮಾನ ತಜ್ಞರು ಹೇಳಿದ್ದಾರೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಕಡಿಮೆಯಾಗಿ, ಬಯಲು ಸೀಮೆಯಲ್ಲಿ ವ್ಯಾಪಕ ಮಳೆಯಾಗಿದೆ. ಸರ್ಕಾರಕ್ಕೆ ಇದರ ಬಗ್ಗೆ ಮಾಹಿತಿ ಇದೆ. ನಾನು ಬೆಂಗಳೂರಿನ ಮಹದೇವಪುರದಲ್ಲಿ ಮಳೆಹಾನಿ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದೆ. ಅಲ್ಲಿ ರಸ್ತೆ ಮೇಲೆ ಕಾಲಿಡಲು ಸಾಧ್ಯವಾಗದೆ ದೋಣಿ ಮೇಲೆ ಹೋಗುವ ಪರಿಸ್ಥಿತಿ ಇತ್ತು. ಪರಿಸ್ಥಿತಿ ಇಷ್ಟು ಹದಗೆಡುತ್ತದೆ ಎಂದು ಊಹೆ ಮಾಡಲು ಸಾಧ್ಯವಿರಲಿಲ್ಲ ಎಂದರು.

ಮಾತು ಮುಂದುವರೆಸಿದ ಸಿದ್ದರಾಮಯ್ಯ, ಕಳೆದ ವರ್ಷ ಪ್ರವಾಹ ಉಂಟಾಗಿ ಅನೇಕ ಕಡೆ ಬೆಳೆ ಕೊಚ್ಚಿ ಹೋಗಿ, ಮನೆಗಳು ಉರುಳಿಬಿದ್ದಿವೆ. ಸರ್ಕಾರ ಈವರೆಗೂ ಸಮೀಕ್ಷೆಯನ್ನೂ ನಡೆಸಲಿಲ್ಲ. ಅವರಿಗೆ ಒಂದು ವರ್ಷವಾದರೂ ಪರಿಹಾರ ಕೊಟ್ಟಿಲ್ಲ ಎಂದು ಆರೋಪಿಸಿದರು. ಈ ವೇಳೆ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಸದನಕ್ಕೆ ತಪ್ಪು ಮಾಹಿತಿ ನೀಡಬೇಡಿ. ನಾನು ಬೆಳೆಹಾನಿ ಸಮೀಕ್ಷೆ ನಡೆಸಿ ಯಾರ್ಯಾರಿಗೆ ಎಷ್ಟು ನಷ್ಟವಾಗಿದೆಯೋ ಅಂತಹ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಮಾಡಿದ್ದೇನೆ ಎಂದರು. ಇಡೀ ದೇಶದಲ್ಲಿ ಎನ್‍ಡಿಆರ್‍ಎಫ್ ನಿಯಮಾವಳಿಯನ್ನು ಮೀರಿ ಅತೀ ಹೆಚ್ಚು ಪರಿಹಾರ ನೀಡಿದ ಏಕೈಕ ಸರ್ಕಾರ ಕರ್ನಾಟಕ. ಇದಕ್ಕೆ ನೀವು ನಮಗೆ ಅಭಿನಂದನೆ ಸಲ್ಲಿಸಬೇಕು ಎಂದರು. ಆದರೆ ಅಶೋಕ್ ಅವರ ಮಾತನ್ನು ಸಿದ್ದರಾಮಯ್ಯ ಒಪ್ಪಲಿಲ್ಲ. ಅನೇಕ ಕಡೆ ಮನೆಗಳನ್ನು ಕಟ್ಟಿಕೊಟ್ಟಿಲ್ಲ. ಮಳೆ ಹಾನಿ ಪರಿಹಾರ ಪಡೆಯಲು ಜನರು ಇಲಾಖೆಯಿಂದ ಇಲಾಖೆಗೆ ಅಲೆಯುತ್ತಿದ್ದಾರೆ ಇದು ನಿಮ್ಮ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಹಿಂದಿನ ಯಾವುದೇ ಸರ್ಕಾರಗಳು ಕೊಡದಿರುವಷ್ಟು ಪರಿಹಾರವನ್ನು ನಾವು ಕೊಟ್ಟಿದ್ದೇವೆ. ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ನಿಯಮಾವಳಿಯನ್ನು ಮೀರಿ ಹೆಚ್ಚಿನ ಪರಿಹಾರ ನೀಡಿದ ಏಕೈಕ ರಾಜ್ಯ ಎಂದರೆ ಕರ್ನಾಟಕ. ನಿಮ್ಮ ಸರ್ಕಾರದ ಅವಧಿಯಲ್ಲಿ ಪರಿಹಾರ ಕೊಟ್ಟಿದ್ದರೆ ಈ ಪರಿಸ್ಥಿತಿ ಬರುತ್ತಿತ್ತೇ ಎಂದು ತಿರುಗೇಟು ನೀಡಿದರು.

Translate »