ಜ.15ರಿಂದ ಸಪ್ತಪದಿ ಯೋಜನೆಗೆ ಮರು ಚಾಲನೆ
ಮೈಸೂರು

ಜ.15ರಿಂದ ಸಪ್ತಪದಿ ಯೋಜನೆಗೆ ಮರು ಚಾಲನೆ

January 7, 2021

ಬೆಂಗಳೂರು,ಜ.6-ಕೊರೊನಾ ಸೋಂಕು ಮತ್ತು ಲಾಕ್‍ಡೌನ್‍ನಿಂದಾಗಿ ಸ್ಥಗಿತ ಗೊಳಿಸಿದ್ದ ‘ಸಪ್ತಪದಿ’ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮರುಚಾಲನೆ ನೀಡಲು ಮುಜರಾಯಿ ಇಲಾಖೆ ತೀರ್ಮಾನಿಸಿದ್ದು, ಇದೇ 15 ಮತ್ತು 20ರಂದು ರಾಜ್ಯಾದ್ಯಂತ ಸಪ್ತಪದಿ ಕಾರ್ಯಕ್ರಮ ನಡೆಯಲಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಫೆಬ್ರವರಿ 17 ಮತ್ತು 27 ರಂದು ರಾಜ್ಯಮಟ್ಟದಲ್ಲಿ ನಡೆಯಲಿದೆ. ಅಲ್ಲದೆ, ಇನ್ನು ಮುಂದೆ ಪ್ರತಿ ತಿಂಗಳೂ ಸಪ್ತಪದಿ ಕಾರ್ಯಕ್ರಮ ಜಿಲ್ಲಾ ಮಟ್ಟದಲ್ಲಿ ನಡೆಯಲಿದೆ. ಆಗಮ ಪಂಡಿತರು ದಿನಾಂಕ ನಿಗದಿ ಮಾಡುತ್ತಾರೆ ಎಂದು ಹೇಳಿದರು.

ವಧುವಿಗೆ 40 ಸಾವಿರ ರೂ. ಮೌಲ್ಯದ ಮಾಂಗಲ್ಯ ನೀಡಲಾಗುವುದು. ಕಾವೇರಿ ಎಂಪೆÇೀರಿಯಂ ಮೂಲಕ ಮಾಂಗಲ್ಯ ಖರೀದಿಸಲು ತೀರ್ಮಾನಿಸಲಾಗಿದೆ. ಇನ್ನು ಮುಂದೆ ಮುಜರಾಯಿ ಇಲಾಖೆಯದು ಇ-ಆಡಳಿತವಾಗಿರಲಿದೆ. ಕಡತ ವಿಲೇವಾರಿ, ಕಾಗದ ಪತ್ರಗಳ ವ್ಯವಹಾರ ಡಿಜಿಟಲ್ ರೂಪದಲ್ಲೇ ನಡೆಯಲಿದೆ.

ಇದರಿಂದ ಆಡಳಿತದಲ್ಲಿ ಪಾರದರ್ಶಕತೆಯ ಜತೆಗೆ ಆಡಳಿತಕ್ಕೆ ಚುರುಕೂ ಸಿಗುತ್ತದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಇದರಿಂದಾಗಿ ಯಾವುದೇ ಕಡತಗಳು ಬಾಕಿ ಉಳಿಯುವ ಪ್ರಶ್ನೆಯೇ ಇಲ್ಲ. ರಾಜ್ಯದ ಯಾವುದೇ ಮೂಲೆಯಿಂದ ಒಂದು ಬಟನ್ ಕ್ಲಿಕ್ ಮಾಡಿದರೆ ಸಾಕು ಕಡತಗಳು ರವಾನೆ ಆಗುತ್ತವೆ. ತಕ್ಷಣವೇ ಅವುಗಳನ್ನು ಪರಿಶೀಲಿಸಬಹುದು. ಕಡತಗಳ ಕಾಣೆ ಆಗುವುದನ್ನು ತಪ್ಪಿಸಲು ಇದರಿಂದ ಸಾಧ್ಯ ಎಂದು ಅವರು ಹೇಳಿದರು.

ಇಂದು ಕಾರ್ಯಾಗಾರ: ಜಿಲ್ಲಾ ಮಟ್ಟದ ಧಾರ್ಮಿಕ ಪರಿಷತ್ ಸದಸ್ಯರಿಗೆ ಗುರುವಾರ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಧರ್ಮಸ್ಥಳದ ಡಿ.ವಿರೇಂದ್ರ ಹೆಗ್ಗಡೆ, ಆರ್ಟ್ ಆಫ್ ಲಿವಿಂಗ್‍ನ ರವಿಶಂಕರ ಗುರೂಜಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಈ ಕಾರ್ಯಾಗಾರದಲ್ಲಿ ಮುಖ್ಯವಾಗಿ, ದೇವಸ್ಥಾನಗಳಲ್ಲಿ ಪೂಜಾ ಪದ್ಧತಿ, ಆಡಳಿತ, ಸ್ವಚ್ಛತೆ ಕಾಪಾಡುವ ಕುರಿತು ತಜ್ಞರು ಮಾತನಾಡಲಿದ್ದಾರೆ ಎಂದು ಶ್ರೀನಿವಾಸ ಪೂಜಾರಿ ವಿವರಿಸಿದರು.

 

Translate »