ಜೆಡಿಎಸ್ ಸತ್ವಪರೀಕ್ಷೆಗೀಡುಮಾಡಿದ ಸಿದ್ದರಾಮಯ್ಯ
News

ಜೆಡಿಎಸ್ ಸತ್ವಪರೀಕ್ಷೆಗೀಡುಮಾಡಿದ ಸಿದ್ದರಾಮಯ್ಯ

May 31, 2022

ಬೆಂಗಳೂರು, ಮೇ 30 (ಕೆಎಂಶಿ)- ವಿಧಾನಸಭೆಯಿಂದ ರಾಜ್ಯಸಭೆಗೆ ಜೂನ್ ಹತ್ತರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಜೆಡಿಎಸ್ ಪಕ್ಷ ಬಿಜೆಪಿಯ ಬಿ-ಟೀಮ್ ಎಂದು ಸಾಬೀತು ಮಾಡಲು ಹೊರಟಿದೆ.

ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಡರಾತ್ರಿ ನಡೆಸಿದ ರಾಜಕೀಯ ಚಾಣಕ್ಯತನಕ್ಕೆ ತಮ್ಮ ಪಕ್ಷದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಒಂದೇ ಕಲ್ಲಿನಲ್ಲಿ ಹೊಡೆದುರುಳಿಸುವ ತಂತ್ರ ರೂಪಿಸಿದ್ದಾರೆ.

ಖರ್ಗೆ ಅವರ ಆಪ್ತ ಹಾಗೂ ಕಾಂಗ್ರೆಸ್‍ನ ಮಾಜಿ ಮುಖಂಡ, ಉದ್ಯಮಿ ಕುಪೇಂದ್ರ ರೆಡ್ಡಿ ಅವರನ್ನು ಪಕ್ಷ ದಿಂದ ಕಣಕ್ಕಿಳಿಸಲು ಜೆಡಿಎಸ್ ಮುಂದಾಗಿದೆ. ಕುಪೇಂದ್ರ ರೆಡ್ಡಿ ಕಣಕ್ಕಿಳಿದರೆ ಬಿಜೆಪಿಯು ತನ್ನ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿತ್ತು. ಆದರೆ ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಬಿಜೆಪಿ ತನ್ನ ನಿಲುವನ್ನು ಬದಲಾವಣೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕಣಕ್ಕಿಳಿಯುವುದರಿಂದ ಬಿಜೆಪಿಯ ಮೂರನೇ ಅಭ್ಯರ್ಥಿ ಅಚ್ಚರಿ ಗೆಲುವು ಸಾಧಿಸಲು ಅವಕಾಶವಿದೆ. ಇದನ್ನು ಮನಗಂಡೇ ಸಿದ್ದರಾಮಯ್ಯ ಜೆಡಿಎಸ್ ಅವಕಾಶವನ್ನು ತಪ್ಪಿಸಬೇಕು ಎಂಬ ಕಾರಣಕ್ಕೆ ತಮಗೆ ಸಾಧ್ಯವಿಲ್ಲದಿದ್ದರೂ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಧಾನಸಭೆಯಲ್ಲಿ 69 ಶಾಸಕ ಬಲವನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಒಬ್ಬ ಅಭ್ಯರ್ಥಿಯನ್ನು ರಾಜ್ಯಸಭೆಗೆ ಕಳಿಸಲು ಶಕ್ತವಾಗಿದೆಯಾದರೂ, ಜೈರಾಮ್ ರಮೇಶ್ ಹಾಗೂ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಿ ಹೊಸ ರಣ ತಂತ್ರ ಹೆಣೆದಿದೆ. ಶಾಸಕ ಬಲದಲ್ಲಿ 45 ಮತಗಳು ಮೊದಲ ಅಭ್ಯರ್ಥಿ ಜೈರಾಮ್ ರಮೇಶ್ ಅವರ ಗೆಲುವಿಗೆ ಸಾಕಾಗುತ್ತವೆಯಾದರೂ, ಉಳಿದಂತೆ 24 ಮತ ಗಳು ಅದರ ಬಳಿ ಹೆಚ್ಚುವರಿಯಾಗಿ ಉಳಿಯುತ್ತವೆ. ಈ ಮತಗಳಿಂದ ಅದರ 2ನೇ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಗೆಲ್ಲಲು ಸಾಧ್ಯವೇ ಇಲ್ಲವಾದರೂ, ಅವ ರನ್ನು ಉದ್ದೇಶಪೂರ್ವಕವಾಗಿ ಕಣಕ್ಕಿಳಿಸಲಾಗಿದ್ದು ಮೊದಲನೆಯದಾಗಿ, ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಲು ತನಗೆ ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶ ರವಾ ನಿಸಲಾಗಿದೆ. ಅದೇ ಕಾಲಕ್ಕೆ ಜೆಡಿಎಸ್ ಪಕ್ಷ ತನಗಿರುವ 32 ಮತಗಳ ಬೆಂಬಲ ದೊಂದಿಗೆ ಅಭ್ಯರ್ಥಿ ಕಣಕ್ಕಿಳಿಸಿದರೂ, ಅದು ಗೆಲುವಿಗೆ ಕಾಂಗ್ರೆಸ್ ಇಲ್ಲವೇ ಬಿಜೆಪಿಯ ಹೆಚ್ಚುವರಿ ಮತಗಳನ್ನು ಪಡೆಯಬೇಕಾದ ಅನಿವಾರ್ಯತೆ ಇದೆ. ಆದರೆ ಈಗ ಇಂತಹ ಸಾಧ್ಯತೆಗಳಿಗೆ ಕಾಂಗ್ರೆಸ್ ಪಕ್ಷ ಬ್ರೇಕ್ ಹಾಕಿದೆ. ಹೀಗಾಗಿ ತನ್ನ ಅಭ್ಯರ್ಥಿಯ ಗೆಲುವಿಗಾಗಿ ಜೆಡಿಎಸ್ ಪಕ್ಷ ಒಂದೋ ಬಿಜೆಪಿಯ ಮೊರೆ ಹೋಗಬೇಕು. ಇಲ್ಲವೇ ಬಿಜೆಪಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸಿದರೆ ಅವರನ್ನು ಬೆಂಬಲಿಸುವ ಒತ್ತಡಕ್ಕೆ ಸಿಲುಕಿಕೊಳ್ಳುತ್ತದೆ. ಒಂದು ವೇಳೆ ಅದು ತನ್ನ ಗೆಲುವಿ ಗಾಗಿ ಬಿಜೆಪಿಯ ಬೆಂಬಲ ಪಡೆದರೂ, ಅಥವಾ ತಾನು ಸ್ಪರ್ಧಿಸದೆ ಬಿಜೆಪಿಯ 3ನೇ ಅಭ್ಯರ್ಥಿಯನ್ನು ಬೆಂಬಲಿಸಿದರೂ ಕಾಂಗ್ರೆಸ್ ಪಕ್ಷದ ರಣತಂತ್ರ ಯಶಸ್ವಿಯಾಗುತ್ತದೆ. ಜೆಡಿಎಸ್ ಪಕ್ಷ ಕೋಮುವಾದಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಹೀಗಾಗಿ ಅದು ಬಿಜೆಪಿಯ ಬಿ ಟೀಮ್ ಎಂದು ರಾಜ್ಯದ ಜನರ ಮುಂದೆ ಹೇಳಲು ಕೈ ಪಾಳೆಯಕ್ಕೆ ಅನುಕೂಲವಾಗುತ್ತದೆ. ಹೀಗೆ ಜೆಡಿಎಸ್ ಪಕ್ಷಕ್ಕೂ, ಬಿಜೆಪಿಗೂ ಸಂಬಂಧವಿದೆ ಎಂಬುದನ್ನು ಸಾಬೀತು ಮಾಡಿ ಜಗಜ್ಜಾಹೀರು ಮಾಡಿದರೆ ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ವಿರೋಧಿ ಮತಗಳನ್ನು ಕ್ರೋಢೀಕರಿಸಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ.

Translate »