ಸುಂಟಿಕೊಪ್ಪ ಸಂತೆ ಬಂದ್ ; ವರ್ತಕರು, ಪೊಲೀಸರ ವಾಗ್ವಾದ
ಕೊಡಗು

ಸುಂಟಿಕೊಪ್ಪ ಸಂತೆ ಬಂದ್ ; ವರ್ತಕರು, ಪೊಲೀಸರ ವಾಗ್ವಾದ

March 16, 2020

ಸುಂಟಿಕೊಪ್ಪ,ಮಾ.15-ಸುಂಟಿಕೊಪ್ಪ ಪಟ್ಟಣಕ್ಕೆ ಸಂತೆ ದಿನವಾದ ಭಾನುವಾರ ಕೊರೊನಾ ಭೀತಿಯ ಮಿಶ್ರ ಪ್ರತಿಕ್ರಿಯೆಯಿಂದ ವ್ಯಾಪಾರಸ್ಥರು, ಗ್ರಾಹಕರು ಹಾಗೂ ಇಲ್ಲಿನ ಗ್ರಾಮ ಪಂಚಾಯಿತಿ, ಪೊಲೀಸರ ನಡುವೆ ಕೆಲಕಾಲ ಗೊಂದಲ ಉಂಟಾಯಿತು. ಮಾ.14ರ ಸಂಜೆ 5.30 ಗಂಟೆಗೆ ಗ್ರಾ.ಪಂ.ನಿಂದ ಭಾನುವಾರ ಸಂತೆ ವ್ಯಾಪರ ರದ್ದುಗೊಳಿಸಲಾಗಿದೆ. ವ್ಯಾಪಾರಸ್ಥರು ಗ್ರಾಹಕರು ಸಹಕರಿಸಬೇ ಕೆಂದು ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸಲಾಗಿತ್ತು. ಸುಂಟಿಕೊಪ್ಪ ಸಂತೆಗೆ ಪಿರಿಯಾಪಟ್ಟಣ, ಕೊಣನೂರು, ಹುಣಸೂರು, ಹೆಬ್ಬಾಲೆ, ಕುಶಾಲನಗರ, ಮಾದಾಪುರ, ಗರ್ವಾಲೆ, ಸೂರ್ಲಬ್ಬಿ ಮೊದಲಾದ ಕಡೆಗಳಿಂದ ತರಕಾರಿ, ಬಟ್ಟೆ, ದಿನಸಿ ವ್ಯಾಪಾರಕ್ಕೆ ಕಳೆದ 50 ದಶಕಗಳಿಂ ದಲ್ಲೂ ಬರುತ್ತಿದ್ದು, ಏಕಾಏಕಿ ಯಾಗಿ ಸಂತೆ ಬಂದ್ ಮಾಡಿದ್ದರ ಬಗ್ಗೆ ಮಾಹಿತಿ ಇಲ್ಲದೆ ಬಂದ ವ್ಯಾಪಾರಸ್ಥರಿಗೆ ಪರದಾಡುವಂತಾಯಿತು.

ಮಾರುಕಟ್ಟೆಗೆ ಬಾಡಿಗೆ ವಾಹನದಲ್ಲಿ ತಂದಿದ್ದ ತರಕಾರಿ ದಿನಸಿ ಈರುಳ್ಳಿ ಪದಾರ್ಥಗಳನ್ನು ವರ್ತಕರು ಕೆಳಗಿಳಿಸಲು ಮುಂದಾ ದಾಗ ಗ್ರಾ.ಪಂ.ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಸುಂಟಿಕೊಪ್ಪ ಠಾಣಾಧಿಕಾರಿ ತಿಮ್ಮಪ್ಪ ಹಾಗೂ ಸಿಬ್ಬಂದಿಗಳು ಇಂದು ಸಂತೆ ನಡೆಸುವಂತಿಲ್ಲ, ಜಿಲ್ಲಾಧಿಕಾರಿಗಳ ಆದೇಶ ಇದೆ. ವಾಪಾಸ್ಸು ಸಾಮಾಗ್ರಿ ಗಳನ್ನು ಕೊಂಡ್ಯೊಯ್ಯುವಂತೆ ಹೇಳಿದರು. ಇವರ ಮಾತಿಗೆ ವ್ಯಾಪಾರಸ್ಥರು ಕಿಮ್ಮತ್ತು ನೀಡದೆ ಕೂಲಿ ಕಾರ್ಮಿಕರ ಸಹಾಯ ದಿಂದ ಮಾರುಕಟ್ಟೆಗೆ ಮೊದಲೇ ಜೋಡಿಸಿಟ್ಟಿದ್ದ ಪರಿಕರಕ್ಕೆ ತರಕಾರಿ, ದಿನಸಿ ಪದಾರ್ಥಗಳನ್ನು ಸಾಗಿಸಲು ಮುಂದಾದರು. ಈ ವೇಳೆ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಆಕ್ಷೇಪ ವ್ಯಕ್ತಪಡಿಸಿ, ನಮ್ಮ ಮಾತಿಗೆ ಬೆಲೆ ಇಲ್ಲವೇ, ಕೂಡಲೇ ಸಾಮಾಗ್ರಿಗಳನ್ನು ವಾಪಾಸು ತೆಗೆದುಕೊಂಡು ಹೋಗಿ ಎಂದು ಹೇಳಿದರು. ಈ ಸಂದರ್ಭ ಸುಂಟಿಕೊಪ್ಪ ಠಾಣಾಧಿಕಾರಿ ಹಾಗೂ ವ್ಯಾಪಾರಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಕೆರಳಿದ ಸ್ಥಳೀಯ ಗ್ರಾಮಸ್ಥರು ಪಂಚಾಯಿತಿ ಅಧ್ಯಕ್ಷೆ ಹಾಗೂ ಠಾಣಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ವ್ಯಾಪಾರಸ್ಥರು ತಂದ ಸಾಮಾಗ್ರಿಗಳನ್ನು ಟ್ರ್ಯಾಕ್ಟರ್‍ನಲ್ಲಿ ತುಂಬಿಸಿ ಗುಂಡಿ ತೆಗೆದು ಮುಚ್ಚಿಸಲಾಗುವುದು ಎಂದು ಠಾಣಾಧಿಕಾರಿ ಬೆದರಿಕೆ ಹಾಕಿದ ಘಟನೆಯೂ ನಡೆಯಿತು. ಗ್ರಾ.ಪಂ. ಅಧ್ಯಕ್ಷರ ಅಪ್ಪಣೆ ಮೇರೆ ಟ್ರ್ಯಾಕ್ಟರ್ ತಂದು ನಿಲ್ಲಿಸಲಾಯಿತು. ಪೌರ ಕಾರ್ಮಿ ಕರು, ವ್ಯಾಪಾರಸ್ಥರು ಸಂತೆಗೆ ತಂದಿದ್ದ ಸಾಮಾಗ್ರಿಗಳನ್ನು ಟ್ರ್ಯಾಕ್ಟರ್‍ಗೆ ತುಂಬಿಸಲು ಮುಂದಾದಾಗ ವ್ಯಾಪಾರಸ್ಥರು ಹಾಗೂ ಸ್ಥಳೀಯ ನಾಗರಿಕರು ಪ್ರತಿಭಟನೆ ನಡೆಸಿದರು. ತಡವಾಗಿ ಸ್ಥಳಕ್ಕೆ ಬಂದ ಗ್ರಾ.ಪಂ. ಪಿಡಿಓ ವೇಣುಗೋಪಾಲ್ ಕೂಡ ಅಸಹಾಯಕರಾಗಿ ಸಂತೆಯಿಂದ ಹಿಂತೆರಳಿದರು. ಬಳಿಕ ಸುಂಟಿಕೊಪ್ಪ ಮಾರುಕಟ್ಟೆಯಲ್ಲಿ ಎಂದಿನಂತೆ ಸಂತೆ ವ್ಯಾಪಾರ ವಹಿವಾಟು ನಡೆಯಿತು.ವಿರಾಜಪೇಟೆಯಲ್ಲಿ ಸುಗ್ಗಿ ಸಂಭ್ರಮ

Translate »