ಮೈಸೂರು, ನ.3(ಎಂಟಿವೈ)- ಉದ್ಯೋಗ ಸೇರಿ ದಂತೆ ವಿವಿಧ ಕಾರಣಗಳಿಗೆ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ಕನ್ನಡ ಕಲಿಯಲೇ ಬೇಕಾದ ಇಕ್ಕಟ್ಟು ಸೃಷ್ಟಿಸುವ ಮೂಲಕ ಎಲ್ಲರೂ ಕನ್ನಡ ಭಾಷೆ ಕಲಿಯುವಂತೆ ಮಾಡಬೇಕಾದ ಅಗತ್ಯವಿದೆ ಎಂದು ಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಸಲಹೆ ನೀಡಿದರು.
ಮೈಸೂರಿನ ಸಂತ ಫಿಲೋಮಿನಾ ಪದವಿ ಕಾಲೇ ಜಿನಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವ ಕಾರ್ಯ ಕ್ರಮದಲ್ಲಿ ಆನ್ಲೈನ್ ಮೂಲಕ ಪ್ರಧಾನ ಭಾಷಣ ಮಾಡಿದ ಅವರು, ತಂತ್ರಜ್ಞಾನ ಸ್ವೀಕರಿಸಿ ಸರಿಯಾಗಿ ಬಳಸಿಕೊಳ್ಳುವ ಮೂಲಕ ಕನ್ನಡ ಕಟ್ಟುವ ಕೆಲಸವಾಗ ಬೇಕು. ಹುಸಿ ನಿರಾಕರಣೆಗೆ ಅವಕಾಶ ಕೊಡಬಾ ರದು. ಎಲ್ಲ ಜ್ಞಾನವನ್ನೂ ವಶಪಡಿಸಿಕೊಂಡು, `ಕನ್ನಡ ಕಟ್ಟುವ ಬಗೆ’ಯನ್ನು ಯೋಚಿಸಬೇಕು. ಇತ್ತೀಚಿನ ದಿನ ಗಳಲ್ಲಿ ಉದ್ಯೋಗ, ವ್ಯವಹಾರ, ಶಿಕ್ಷಣ ಸೇರಿದಂತೆ ವಿವಿಧ ಕಾರಣಗಳಿಗಾಗಿ ಹೊರ ರಾಜ್ಯಗಳಿಂದ ನಮ್ಮ ನಾಡಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ಕರ್ನಾ ಟಕದಲ್ಲಿ ಸೇವೆ ಸಲ್ಲಿಸುವ ಅನ್ಯಭಾಷಿಗರ ಸಂಖ್ಯೆಯೂ ಹೆಚ್ಚಾಗಿದೆ. ನಾಡಿಗೆ ಬಂದವರು ಕಡ್ಡಾಯವಾಗಿ ಕನ್ನಡ ಕಲಿಯಬೇಕಾಗಿದೆ. ಇದಕ್ಕಾಗಿ ಹೊರಗಿನವರು ಅನಿವಾರ್ಯವಾಗಿ ಕನ್ನಡ ಭಾಷೆ ಕಲಿಯಲೇಬೇಕಾ ದಂತಹ ಇಕ್ಕಟ್ಟು ಸೃಷ್ಟಿಸಬೇಕು. ಆಗ ತಾವಾಗಿಯೇ ಕನ್ನಡ ಕಲಿಯಲು ಮುಂದಾಗುತ್ತಾರೆ ಎಂದರು.
1956ರಲ್ಲಿ ವಿಶಾಲ ಕರ್ನಾಟಕ ರಚನೆಯಾಗಿ, ವಿವಿಧೆಡೆ ಚದುರಿ ಹೋಗಿದ್ದ ಕನ್ನಡಿಗರೆಲ್ಲಾ ಒಂದೆಡೆ ಸೇರಿ ಕರುನಾಡು ಉದಯವಾಯಿತು. ಒಂದು ಭಾಷೆಯ ಜನರು ಒಂದೆಡೆ ಸೇರುವುದು ಬಹಳ ಮುಖ್ಯ. ಭಾಷೆ ಯನ್ನು ಯಾವಾಗಲೂ ಬಳಸುವುದರಿಂದಲೇ ಅದು ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತದೆ. ನಾವು ಕನ್ನಡಿಗರು ಔದಾರ್ಯದ ಹೆಸರಿನಲ್ಲಿ ಕನ್ನಡವನ್ನು ಬಳಸದೇ ಇದ್ದರೆ, ಮಾತೃಭಾಷೆ ಬಳಕೆಯಿಂದ ಮುಜುಗರವಾಗು ತ್ತದೆ ಎಂಬ ಭಾವ ಇದ್ದರೆ, ಕನ್ನಡ ಭಾಷೆಗೆ ಅಗಾಧ ವಾದ ನಷ್ಟವನ್ನುಂಟು ಮಾಡುತ್ತದೆ ಎಂದು ವಿಷಾದಿಸಿದರು.
ಭಾಷೆಗೆ ಸ್ಥಾಯಿ ಗುಣವಿದೆ. ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದೆ. ವರ್ತಮಾನದ ಕನ್ನಡ ಕುರಿತು ಗಾಬರಿ ಬೇಡ. ಅದು ಕರುಣಾಜನಕ ಸ್ಥಿತಿಯಲ್ಲಿದೆ ಎಂದು ಯೋಚಿಸ ಬೇಕಿಲ್ಲ. ಎಲ್ಲ ಭಾಷೆಗಳಲ್ಲಿಯೂ ಏರುಪೇರು, ಅಡೆತಡೆ ಇರುತ್ತವೆ. ಕನ್ನಡ ಶಾಲೆಗಳು ಮುಚ್ಚುತ್ತಿರುವ ಕುರಿತು ಆತಂಕ ಇದೆ. ಆದರೆ ಎಲ್ಲ ಕ್ಷೇತ್ರಗಳಲ್ಲಿ ಕನ್ನಡದ ಕೆನೆ ಇದೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಕನ್ನಡ ದವÀರೇ ಆಗಿದ್ದು, ಮಾತೃಭಾಷೆ ಬಳಸಲು ಹಿಂದೇಟು ಹಾಕುವವರಿಗೆ ಪ್ರೇರಣೆಯಾಗಿದ್ದಾರೆ ಎಂದರು.
ಕಾಲೇಜಿನ ರೆಕ್ಟರ್ ಮ್ಯಾನೇಜರ್ ಫಾ.ಬರ್ನಾಡ್ ಪ್ರಕಾಶ್ ಬಾರ್ನಿಸ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮ ದಲ್ಲಿ ವೈಸ್ ರೆಕ್ಟರ್ ಮರಿಯಾ ಗ್ಸೇವಿಯರ್, ಕ್ಯಾಂಪಸ್ ಆಡಳಿತಾಧಿಕಾರಿ ಫಾ.ಜಾನ್ ಪೌಲ್, ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಸದೆಬೋಸ್, ಇತಿಹಾಸ ವಿಭಾ ಗದ ಮುಖ್ಯಸ್ಥ ಪ್ರೊ. ಪ್ರಕಾಶ್ ಅರಳಪ್ಪ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮೇರಿ ನಿವೇ ದಿತಾ, ಪ್ರಾಂಶುಪಾಲರಾದ ರುತ್ ಶಾಂತಕುಮಾರಿ, ಪರೀಕ್ಷಾ ನಿಯಂತ್ರಣಾಧಿಕಾರಿ, ಪ್ರೊ.ಡಾಮಿನಿಕ್ ಬ್ರಿಟ್ಟೋ ರಾಯನ್, ಶೈಕ್ಷಣಿಕ ಸಂಯೋಜಕರಾದ ಪ್ರೊ. ಆಗ್ನೆಸ್, ಸಂಶೋಧನಾ ಸಂಯೋಜಕರಾದ ಪ್ರೊ. ಆಲ್ಫೋನ್ಸ್ ಡಿಸೋಜಾ ಉಪ ಪ್ರಾಂಶುಪಾಲರಾದ ಪ್ರೊ.ಸಂಜಯ್ ನಾಯರ್ ಇನ್ನಿತರರಿದ್ದರು.