ಮೈಸೂರು,ಜು.23-ಐಆರ್ಸಿಟಿಸಿ ವೆಬ್ಸೈಟ್ ಮೂಲಕ ರೈಲ್ವೇ ಇ-ಟಿಕೆಟ್ ಬುಕ್ ಮಾಡಿ, ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಚಿಕ್ಕಮಗಳೂರಿನ ವ್ಯಕ್ತಿಯನ್ನು ರೈಲ್ವೆ ಸಂರಕ್ಷಣಾ ಪಡೆ(ಆರ್ಪಿಎಫ್) ಬಂಧಿಸಿದೆ.
ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ಪಡೆ ಕ್ರೈಂ ವಿಂಗ್ ಸಬ್ ಇನ್ಸ್ಪೆಕ್ಟರ್ ಎಸ್.ಕೃಷ್ಣೋಜಿರಾವ್ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಚಿಕ್ಕಮಗಳೂರಿನ ಟೆಕ್ಸ್ಟೈಲ್ಸ್ ಮೇಲೆ ದಾಳಿ ನಡೆಸಿ, ಮನೀಶ್ ಜೈನ್ನನ್ನು ಬಂಧಿಸಿದ್ದಾರೆ. ಈತ ತನ್ನ ವೈಯಕ್ತಿಕ ಖಾತೆ ಮೂಲಕ ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ಟಿಕೆಟ್ಗಳನ್ನು ಕಾಯ್ದಿರಿಸಿ, ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಎಂಬುದು ಪರಿಶೀಲನೆಯಲ್ಲಿ ತಿಳಿದುಬಂದಿದೆ. ಆರೋಪಿಯಿಂದ ಸುಮಾರು 24,800 ರೂ. ಬೆಲೆಯ 23 ಟಿಕೆಟ್ಗಳು, ಮೊಬೈಲ್ ವಶಪಡಿಸಿಕೊಳ್ಳ ಲಾಗಿದ್ದು, ರೈಲ್ವೆ ಸ್ಪೆಷಲ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಅವರ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ. ಕೆಲ ದಿನಗಳ ಹಿಂದೆ ಕಡೂರು ತಾಲೂಕಿನ ಪುಟ್ಟಸ್ವಾಮಿ ಎಂಬಾತನನ್ನು ಬಂಧಿಸಿ, 17 ಸಾವಿರ ಬೆಲೆಯ ಟಿಕೆಟ್ಗಳು ಹಾಗೂ ಕೃತ್ಯಕ್ಕೆ ಬಳಿಸಿದ್ದ ಮೊಬೈಲ್ ವಶಪಡಿಸಿಕೊಳ್ಳಲಾಗಿತ್ತು.