ಬೆಂಗಳೂರು, ಮೇ 20- ಇಂದು ಮಧ್ಯಾಹ್ನ ಭಾರೀ ನಿಗೂಢ ಶಬ್ಧವೊಂದು ರಾಜ್ಯ ರಾಜಧಾನಿ ಬೆಂಗಳೂರನ್ನು ತಲ್ಲಣಗೊಳಿಸಿದೆ. ಮಧ್ಯಾಹ್ನ 1.24ರ ವೇಳೆಯಲ್ಲಿ ಪೂರ್ವ ಬೆಂಗಳೂರಿನಲ್ಲಿ ಭಾರಿ ಸದ್ದು ಕೇಳಿ ಬಂದಿದೆ. ಈ ಶಬ್ಧಕ್ಕೆ ಬೆಚ್ಚಿದ ಜನರು ಮನೆಯಿಂದ ಹೊರ ಬಂದಿದ್ದಾರೆ. ಹಳೇ ಏರ್ಪೋರ್ಟ್ ರಸ್ತೆ, ದೊಮ್ಮಲೂರು, ಮಾರತ್ಹಳ್ಳಿ, ಕೋರಮಂಗಲ, ಇಂದಿರಾನಗರ, ಹೆಬ್ಬ ಗೊಡಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಪೂರ್ವ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಈ ನಿಗೂಢ ಶಬ್ಧ ಕೇಳಿ ಬಂದಿದೆ. ಇದರ ಹಿಂದೆಯೇ ಹಲವಾರು ಊಹಾಪೋಹಗಳು ಹುಟ್ಟಿಕೊಂಡವು.
ಭೂಕಂಪನದಿಂದ ಈ ಶಬ್ಧ ಬಂದಿದೆ ಎಂದು ಕೆಲವರು ಹೇಳಿದರೆ, ವಾಯುಪಡೆಯ ಸುಖೋಯ್ ಯುದ್ಧ ವಿಮಾನದ ಹಾರಾಟ ದಿಂದ ಸದ್ದು ಬಂದಿದೆ ಎಂದು ಮತ್ತೆ ಕೆಲವರು ಹೇಳುತ್ತಿದ್ದರು. ಈ ಮಧ್ಯೆ ಬೆಂಗ ಳೂರು ಹಾಗೂ ಸುತ್ತಮುತ್ತ ಭೂಕಂಪ ಸಂಭವಿಸಿಲ್ಲ. ವಿಕ್ಟರ್ ಮಾಪನದಲ್ಲಿ ದಾಖ ಲಾಗಿಲ್ಲ ಎಂದು ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಅಧಿಕಾರಿಗಳು ತಿಳಿಸಿದರೆ, ಇಂದು ಸುಖೋಯ್ ಯುದ್ಧ ವಿಮಾನದ ಹಾರಾಟವೇ ನಡೆದಿಲ್ಲ ಎಂದು ಭಾರತೀಯ ವಾಯುಪಡೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮತ್ತೊಂದೆಡೆ ಹೆಚ್ಎಎಲ್ ಅಥವಾ ಎಎಸ್ಟಿಇಯಿಂದ ಯಾವುದೋ ವಿಮಾನ ಪರೀಕ್ಷಾರ್ಥ ವಾಗಿ ಹಾರಾಟ ನಡೆಸಿರಬಹುದು ಎಂಬ ಮಾತುಗಳೂ ಕೇಳಿ ಬಂದಿವೆ. ಆದರೆ, ಈ ಬಗ್ಗೆ ಹೆಚ್ಎಎಲ್ ಮತ್ತು ಎಎಸ್ಟಿಇ ರಾತ್ರಿವರೆಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ರಾತ್ರಿ ವೇಳೆಗೆ ಎಸ್ಟಿಇ (ಏರ್ಕ್ರಾಫ್ಟ್ ಅಂಡ್ ಸಿಸ್ಟಂ ಟೆಸ್ಟಿಂಗ್ ಎಸ್ಟಾಬ್ಲಿಷ್ಮೆಂಟ್) ನಿಂದ ಪರೀಕ್ಷಾರ್ಥವಾಗಿ ಹಾರಾಟ ನಡೆಸಿದ ಜೆಟ್ ವಿಮಾನದಿಂದ ಈ ಶಬ್ಧ ಬಂದಿದೆ ಎಂದು ರಾತ್ರಿ ವೇಳೆಗೆ ರಕ್ಷಣಾ ಇಲಾಖೆ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಈ ವಿಮಾನವು ನಗರದ ಹೊರವಲಯದ ಸೀಮಿತ ವಾಯು ನೆಲೆಯಲ್ಲೇ ಹಾರಾಟ ನಡೆಸಿದೆ. ಈ ವಿಮಾನದ ಸಾನಿಕ್ ಬೂಮ್ (ದೊಡ್ಡ ಘರ್ಜನೆ) 65ರಿಂದ 80 ಕಿಮೀ ವ್ಯಾಪ್ತಿಯಲ್ಲಿ ಕೇಳಿಸುತ್ತದೆ ಎಂದು ತಿಳಿಸಿದ್ದಾರೆ.