ಮೈಸೂರು, ಜು. 7 (ಆರ್ಕೆ)- ಸರ್ಕಾರಿ ರಾಜಕಾಲುವೆ ಒತ್ತುವರಿ ಮಾಡಿ ಅದರ ಮೇಲೆ ನಿರ್ಮಿಸುತ್ತಿದ್ದ ಕಟ್ಟಡವನ್ನು ತಹಸೀಲ್ದಾರ್ ನೇತೃತ್ವದಲ್ಲಿ ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ಇಂದು ಬೆಳಿಗ್ಗೆ ನೆಲಸಮಗೊಳಿಸಲಾಗಿದೆ.
ಮೇಟಗಳ್ಳಿ ಸರ್ವೆ ನಂಬರ್ 143ರಲ್ಲಿ ಬರುವ ಕುಂಬಾರಕೊಪ್ಪಲಿನ ಶ್ರೀ ಆದಿಶಕ್ತಿ ದೇವಸ್ಥಾನದ ಹಿಂಭಾಗದಲ್ಲಿರುವ ರಾಜಕಾಲುವೆ ಒತ್ತುವರಿ ಮಾಡಿ ಅಲ್ಲಿ ಮನೆ ನಿರ್ಮಿಸಲಾಗುತ್ತಿದ್ದು, ಆ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದ ಹಿಂದೆಯೇ ರೆವಿನ್ಯೂ ಇನ್ಸ್ಪೆಕ್ಟರ್ಗಳ ಮೂಲಕ ಮೌಖಿಕವಾಗಿ ಎಚ್ಚರಿಸಲಾಗಿತ್ತಾದರೂ, ತೆರವು ಗೊಳಿಸದ ಕಾರಣ, ಮೈಸೂರು ತಾಲೂಕು ತಹಸೀ ಲ್ದಾರ್ ರಕ್ಷಿತಾ ಅವರು, ಮೇಟಗಳ್ಳಿ ಠಾಣೆ ಪೊಲೀ ಸರ ಬಂದೋಬಸ್ತ್ನೊಂದಿಗೆ ಕಾರ್ಯಾಚರಣೆ ನಡೆಸಿ, ಜೆಸಿಬಿ ಮೂಲಕ ನಿರ್ಮಾಣ ಹಂತದಲ್ಲಿದ್ದ ಕಟ್ಟಡವನ್ನು ಮಂಗಳವಾರ ಬೆಳಿಗ್ಗೆ ನೆಲಸಮ ಗೊಳಿಸಿದರು. ರಾಜಕಾಲುವೆ ಒತ್ತುವರಿ ಮಾಡಿರು ವುದರಿಂದ ಭಾರೀ ಮಳೆ ಸುರಿದಾಗ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ರಸ್ತೆಯಲ್ಲಿ ಹರಿಯುತ್ತಿದ್ದುದರಿಂದ ಗ್ರಾಮಸ್ಥರು ಹಲವು ಬಾರಿ ದೂರು ನೀಡಿದ್ದರು ಎಂದು ತಹಸೀಲ್ದಾರ್ ರಕ್ಷಿತಾ ತಿಳಿಸಿದ್ದಾರೆ.
ಜೊತೆಗೆ ಅಕ್ಕಪಕ್ಕದ ನಾಲ್ಕೈದು ಮಂದಿಯೂ ಕಾಲುವೆ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿಕೊಂಡಿದ್ದರು. ಅವುಗಳನ್ನೂ ಒಡೆದು ಹಾಕಿ ಮತ್ತೆ ಗೋಡೆ ನಿರ್ಮಿಸಿದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಸ ಲಿದ್ದು, ಮೈಸೂರು ನಗರ ಮತ್ತು ತಾಲೂಕಿನಾ ದ್ಯಂತ ರಾಜಕಾಲುವೆ, ಮಳೆ ನೀರು ಚರಂಡಿ, ಕೆರೆ, ಸ್ಮಶಾನದಂತಹ ಸರ್ಕಾರಿ ಜಾಗ ಒತ್ತುವರಿ ಮಾಡಿದ್ದರೆ ಮುಲಾಜಿಲ್ಲದೆ ತೆರವುಗೊಳಿಸುವು ದಾಗಿ ರಕ್ಷಿತಾ ತಿಳಿಸಿದ್ದಾರೆ. ರೆವಿನ್ಯೂ ಇನ್ಸ್ಪೆಕ್ಟರ್ ಪ್ರಶಾಂತ್, ಪಾಲಿಕೆ ವಲಯಾಧಿಕಾರಿ ವೀರೇಶ್, ಮುಡಾ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮನು ಹಾಗೂ ಇತರ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಹಾಜರಿದ್ದರು.