ಮೈಸೂರು, ಮೇ 28(ಎಂಟಿವೈ)- ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ದುರಾಡಳಿತ ನಡೆಸುತ್ತಿದ್ದು, ಲಕ್ಷಾಂತರ ಜನ ಸಂಕಷ್ಟಕ್ಕೆ ತುತ್ತಾಗುವಂತಾಗಿದೆ. ಸುಳ್ಳನ್ನೇ ಬಂಡವಾಳ ವಾಗಿಸಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿಯನ್ನು ಕಟ್ಟಿಹಾಕಲು ದೇಶದಲ್ಲಿ ವಿದ್ಯುನ್ಮಾನ ಮತಯಂತ್ರ ರದ್ದು ಮಾಡಬೇಕು. ಕಾಂಗ್ರೆಸ್ನ ಸೋಷಿಯಲ್ ಮೀಡಿಯಾ ಘಟಕ ಬಲಪಡಿಸಬೇಕಿದೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾ ರಂಭಕ್ಕೆ ಪೂರ್ವಭಾವಿಯಾಗಿ ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳ ವಿರುದ್ಧ ಅಪಪ್ರಚಾರ ಮಾಡಿ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಅಭಿವೃದ್ಧಿಗೆ, ಜನೋಪಯೋಗಿ ಕಾರ್ಯಕ್ರಮ ರೂಪಿಸುವುದಕ್ಕೆ ಆದ್ಯತೆ ನೀಡುವಲ್ಲಿ ವಿಫಲವಾಗಿದೆ. ದೇಶವನ್ನೇ ಬಿಜೆಪಿ ಹಾಳು ಮಾಡುತ್ತಿದೆ ಎಂದು ಟೀಕಿಸಿದರು. ದೇಶದಲ್ಲಿ ಕೊರೊನಾ ಸೋಂಕು ವ್ಯಾಪಿಸಲು ಕೇಂದ್ರದ ವೈಫಲ್ಯವೇ ಕಾರಣ. ವಿಶ್ವದ ಹಲವು ರಾಷ್ಟ್ರಗಳು ಸೋಂಕಿನಿಂದ ತತ್ತರಿಸುತ್ತಿದ್ದರೂ ನಮ್ಮ ದೇಶದಲ್ಲಿ ಆರಂಭದಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ವಿದೇಶದಿಂದ ಬಂದವರನ್ನು ಕಟ್ಟುನಿಟ್ಟಾಗಿ ಕ್ವಾರಂಟೈನ್ಗೆ ಒಳಪಡಿಸಲಿಲ್ಲ. ಲಾಕ್ಡೌನ್ ನಡುವೆ ಕೈಗೊಂಡ ತಪ್ಪು ನಿರ್ಧಾರದಿಂದ ದೇಶದ ಜನತೆ ಸಮಸ್ಯೆಗೆ ಸಿಲುಕುವಂತಾಯಿತು ಎಂದು ಎಂ.ಕೆ.ಸೋಮಶೇಖರ್ ಆರೋಪಿಸಿದರು.
ದೇಶದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರ ಸ್ಥಿತಿ ಶೋಚನೀಯ. ಈ ವರ್ಗವನ್ನು ಕಾಪಾಡುವ ಜವಾಬ್ದಾರಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ನುಣುಚಿಕೊಂಡಿವೆ. ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ಪ್ಯಾಕೇಜ್ ಬೋಗಸ್. ಅದರಲ್ಲಿ ಕಾರ್ಮಿಕರ ಪಿಎಫ್ ಹಣವನ್ನು ಹಿಂಪಡೆ ಯಲು ಅನುಮತಿ ನೀಡಿರುವುದು, ಈ ಹಿಂದೆ ಆರ್ಬಿಐ ಘೋಷಿಸಿದ್ದ 50 ಸಾವಿರ ಕೋಟಿ ಸೇರಿದಂತೆ ಈ ಹಿಂದಿನ ಯೋಜನೆಗಳು, ಬಜೆಟ್ ನಲ್ಲಿ ಪ್ರಸ್ತಾಪಿಸಿದ ಯೋಜನೆಗಳನ್ನೆಲ್ಲಾ ಸೇರಿಸಲಾಗಿದೆ. ಆ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಸಂಚು ನಡೆಸಿದೆ ಎಂದು ದೂರಿದರು.
ಮುಂಬರುವ ದಿನಗಳಲ್ಲಿ ಪಕ್ಷ ಸಂಘಟಿಸಲು ಕಾಂಗ್ರೆಸ್ನ ಸಾಮಾ ಜಿಕ ಜಾಲತಾಣ ಘಟಕ ಬಲಪಡಿಸಬೇಕು. ಬಿಜೆಪಿ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಹರಡುವ ಮೂಲಕÀ ರಾಜಕೀಯ ಲಾಭ ಪಡೆದು ಕೊಂಡಿದೆ. ಈ ನಿಟ್ಟಿನಲ್ಲಿ ಬಿಜೆಪಿ ಹೇಳುವ ಸುಳ್ಳಿನ ಬಗ್ಗೆ ಮನವರಿಕೆ ಮಾಡಿಕೊಡಲು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಘಟಕ ಇನ್ನಷ್ಟು ಬಲಿಷ್ಠವಾಗಬೇಕು. ಮುಂದೆ ಯಾವುದೇ ಚುನಾವಣೆ ನಡೆದರೂ ಇವಿಎಂ ಬಳಸದಂತೆ ಹೋರಾಡಬೇಕು. ಇವಿಎಂನಲ್ಲಿ ಗೋಲ್ಮಾಲ್ ನಡೆಸುತ್ತಿರುವು ದರಿಂದಲೇ ಬಿಜೆಪಿಗೆ ವರದಾನವಾಗುತ್ತಿದೆ. ಬ್ಯಾಲೆಟ್ ಪೇಪರ್ ಪದ್ಧತಿ ಜಾರಿಗೆ ತಂದರೆ ಕಾಂಗ್ರೆಸ್ಗೆ ಮತ್ತೆ ಅಧಿಕಾರ ಲಭಿಸಲಿದೆ ಎಂದರು