ಇದೊಂದು ರಾಷ್ಟ್ರೀಯ ವಿಪತ್ತು  ಅಂತ ಘೋಷಣೆ ಮಾಡಿ ಸರ್ವಪಕ್ಷ ಸಭೆಯಲ್ಲಿ ಸಿದ್ದರಾಮಯ್ಯ ಸಲಹೆ
News

ಇದೊಂದು ರಾಷ್ಟ್ರೀಯ ವಿಪತ್ತು ಅಂತ ಘೋಷಣೆ ಮಾಡಿ ಸರ್ವಪಕ್ಷ ಸಭೆಯಲ್ಲಿ ಸಿದ್ದರಾಮಯ್ಯ ಸಲಹೆ

April 21, 2021

ಬೆಂಗಳೂರು,ಏ.20-ಸರ್ವಪಕ್ಷ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದ ರಾಮಯ್ಯ ಮಾತನಾಡಿ, ಕೊರೊನಾ ಸೋಂಕಿಗೆ ಒಳಗಾಗಿರುವ ಸಿಎಂ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಬೇಗ ಗುಣ ವಾಗಲಿ ಎಂದು ಹಾರೈಸಿದರು. ಅಲ್ಲದೆ, ರಾಜ್ಯಪಾಲರು ಈ ಸಭೆ ಕರೆದಿದ್ದು ಸಂವಿಧಾನಬಾಹಿರ. ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ರಾಜ್ಯಪಾಲರು ಈ ಸಭೆ ಕರೆದಿದ್ದು ಸರಿಯಲ್ಲ ಅನ್ನುವ ಭಾವನೆ ನನ್ನದು ಎಂದು ಹೇಳಿದರು.

ತಾಂತ್ರಿಕ ಸಲಹಾ ಸಮಿತಿ ಕೊಟ್ಟ ಶಿಫಾರಸ್ಸನ್ನು ಸರ್ಕಾರ ಪರಿಗಣಿಸಿಲ್ಲ. ತಜ್ಞರು ಸಲಹೆ ಕೊಟ್ಟ ಮೇಲೆ ಸರ್ವಪಕ್ಷ ಸಭೆ ಕರಿಬೇಕಿತ್ತು. ಸರ್ಕಾರವೇ ತಜ್ಞರ ಸಮಿತಿ ಮಾಡಿದೆ. ತಜ್ಞರು ಕೊಟ್ಟ ವರದಿ ತೆಗೆದುಕೊಳ್ಳದೆ ಇರುವುದು ದೊಡ್ಡ ಅಪರಾಧ. ತಜ್ಞರ ವರದಿ ಬಂದ ತಕ್ಷಣ ಸರ್ಕಾರ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆದರೆ ಆಗಲಿಲ್ಲ. ಇವತ್ತು ಬೆಡ್, ವೆಂಟಿಲೇಶನ್, ಆಕ್ಸಿಜನ್ ಸಿಗ್ತಾ ಇಲ್ಲ. ಇದು ವಾಸ್ತವದ ಸಂಗತಿ. ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಆಕ್ಸಿಜನ್ ಇಲ್ಲದೆ ತೀರಿಕೊಂಡರು. ಇದಕ್ಕಿಂತ ಉದಾಹರಣೆ ಬೇಕಾ? ಸರ್ಕಾರ ಏನೇ ಹೇಳಿದರೂ ಕೊರೊನಾ ಎದುರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರ ತನ್ನ ವಿಫಲತೆ ಒಪ್ಪಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಮೋದಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಪ್ರಚಾರ ಮಾಡ್ತಾರೆ. ಲಕ್ಷಾಂತರ ಜನ ಸೇರಿದ್ದಾರೆ ಅಂತ ಭಾಷಣದಲ್ಲಿ ಹೇಳ್ತಾರೆ. ಕರ್ನಾಟಕದಲ್ಲಿ ಕೂಡ ಉಪ ಚುನಾವಣೆ ನಡೆಸಿದರು. ನಾವು ಕೂಡ ಉಪ ಚುನಾವಣೆಯಲ್ಲಿ ಭಾಗವಹಿಸಿದ್ದೆವು. ಈ ಚುನಾವಣೆ ನಡೆಯದಿದ್ದರೆ ಸಂವಿಧಾನದ ಬಿಕ್ಕಟ್ಟು ಉಂಟಾಗುತ್ತಿರಲಿಲ್ಲ ಎಂದು ಹೇಳಿದರು.

ಈಗ ಕಠಿಣ ನಿರ್ಬಂಧ ಹಾಕಬೇಕು. ಕಫ್ರ್ಯೂಯಿಂದ ಏನೂ ಪ್ರಯೋಜನ ಇಲ್ಲ. 144 ಸೆಕ್ಷನ್ ಹಾಕಿದರೆ ಒಳ್ಳೆಯದು. ಕಾಯಿಲೆ ತಡೆಗಟ್ಟಲು ಸಾಧ್ಯ. ಆರೋಗ್ಯ ಮಂತ್ರಿ ನಿರ್ಣಯಗಳನ್ನು ಸಿಎಂ ಕೇಳ್ತಾ ಇಲ್ಲ. ಹೀಗಾಗಿ ಸಿಎಂದು ಒಂದು ದಾರಿ, ಸಚಿವರದು ಒಂದು ದಾರಿಯಾಗಿದೆ. ಆದ್ದರಿಂದ ನಿಯಂತ್ರಣ ಮಾಡಲು ಸಾಧ್ಯ ವಾಗುತ್ತಿಲ್ಲ. ಸಮಸ್ಯೆ ಬಗೆಹರಿಸುವುದು ಸಿಎಂ ಮತ್ತು ಆರೋಗ್ಯ ಮಂತ್ರಿಗಳಿಗೆ ಮಾತ್ರ ಕೆಲಸವಲ್ಲ. ಇವತ್ತು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕೆಲಸ ಮಾಡುತ್ತಿಲ್ಲ. ಯಾರು ಕೂಡ ಅವರ ಜಿಲ್ಲೆಗಳಲ್ಲಿ ಸಭೆ ಕೂಡ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಅಲ್ಲಿಯೇ ಇದ್ರೆ ರೋಗ ನಿಯಂತ್ರಿಸಬಹುದು. ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಬಹುದು ಎಂದು ಜಿಲ್ಲಾ ಉಸ್ತುವಾರಿಗಳನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಮುಂದೂಡಿ. ಚುನಾವಣಾ ಆಯೋಗದ ಜತೆ ಚರ್ಚೆ ಮಾಡಿ, ಎಲೆಕ್ಷನ್ ಮುಂದೂಡಿ. ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ಟೆಸ್ಟ್ ಕಡ್ಡಾಯ ಮಾಡಿ. ತಜ್ಞರ ಶಿಫಾರಸ್ಸಿನಂತೆ ಲಾಕ್ ಡೌನ್ ಮಾಡಿ ಅನ್ನಲ್ಲ. ಆದರೆ ನೀವು ತಜ್ಞರ ಸಮಿತಿ ಹೇಳಿದ ಹಾಗೆ ಕೆಲವೊಂದು ಮಾಡಿ. ಬೇರೆ ದೇಶಗಳಿಂದ ಬರುವ ವಿಮಾನ ರದ್ದು ಮಾಡಿ. ಹೆಲ್ತ್ ತುರ್ತು ಪರಿಸ್ಥಿತಿ ಅಂತ ಡಿಕ್ಲೇರ್ ಮಾಡಿ. ಇದೊಂದು ರಾಷ್ಟ್ರೀಯ ವಿಪತ್ತು ಅಂತ ಘೋಷಣೆ ಮಾಡಿ ಎಂದು ಸಲಹೆ ನೀಡಿದರು.

Translate »