ಗಾಜಿಯಾಬಾದ್, ಆ.23- ದೇಶದ ಪ್ರಥಮ ಕೋವಿಡ್ ಲಸಿಕೆ ವರ್ಷಾಂತ್ಯಕ್ಕೆ ದೊರೆ ಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಹೇಳಿದ್ದಾರೆ. ಸ್ವದೇಶಿ ನಿರ್ಮಿತ ಕೋವಿಡ್-19 ಲಸಿಕೆ ಯೊಂದು 3ನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿದ್ದು, ಈ ವರ್ಷಾಂತ್ಯಕ್ಕೆ ಲಸಿಕೆ ಅಭಿವೃದ್ಧಿಯಾಗುವ ವಿಶ್ವಾಸ ಹೊಂದಿರುವುದಾಗಿ
ಅವರು ಹೇಳಿದ್ದಾರೆ. ಎನ್ಡಿಆರ್ಎಫ್-10 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆಯೊಂದನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ವಿರುದ್ಧದ ಎಂಟು ತಿಂಗಳ ಹೋರಾಟದಲ್ಲಿ ದೇಶದಲ್ಲಿ ಶೇ.75 ರಷ್ಟು ಉತ್ತಮ ಚೇತರಿಕೆ ಪ್ರಮಾಣವಿದೆ. ಒಟ್ಟಾರೆ 2.2 ಮಿಲಿಯನ್ ರೋಗಿಗಳು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಮತ್ತೆ ಏಳು ಲಕ್ಷ ಸೋಂಕಿತರು ಶೀಘ್ರದಲ್ಲಿಯೇ ಗುಣಮುಖರಾಗಲಿದ್ದಾರೆ ಎಂದರು.
ಆರಂಭದಲ್ಲಿ ಪುಣೆಯಲ್ಲಿ ಕೇವಲ ಒಂದು ಪ್ರಯೋಗಾಲವನ್ನು ಪ್ರಾರಂಭಿಸಲಾಗಿತ್ತು. ಆದರೆ, ಈಗ ಪ್ರಯೋಗಾಲಯಗಳು ಮತ್ತು ಪರೀಕ್ಷಾ ಸಾಮಥ್ರ್ಯ ಕೂಡಾ ಹೆಚ್ಚಾಗಿದೆ. ಪ್ರಸ್ತುತ ದೇಶದಲ್ಲಿ 1500 ಪರೀಕ್ಷಾ ಪ್ರಯೋಗಾಲಯಗಳಿದ್ದು, ಶುಕ್ರವಾರ ಒಂದು ಮಿಲಿಯನ್ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ತಿಳಿಸಿದರು. ನಿನ್ನೆ ಒಂದೇ ದಿನ ದೇಶದಲ್ಲಿ 63,631 ಸೋಂಕಿತರು ಗುಣಮುಖರಾಗಿದ್ದಾರೆ. ಚೇತರಿಕೆ ಪ್ರಮಾಣ ಶೇ. 74.69ರಷ್ಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.