ನಿರ್ವಹಣೆ ಕೊರತೆಯಿಂದ ಶಿಥಿಲಗೊಳ್ಳುತ್ತಿದೆ `ಮೈಸೂರಿನ ರಂಗಾರ್ಚಾಲು ಪುರಭವನ’
ಮೈಸೂರು

ನಿರ್ವಹಣೆ ಕೊರತೆಯಿಂದ ಶಿಥಿಲಗೊಳ್ಳುತ್ತಿದೆ `ಮೈಸೂರಿನ ರಂಗಾರ್ಚಾಲು ಪುರಭವನ’

February 21, 2022

ಮೈಸೂರು,ಫೆ.20-ಶಿಥಿಲಗೊಂಡು ದುಸ್ಥಿತಿಗೆ ಒಳಗಾಗಿ ರುವ ಪಾರಂಪರಿಕ ಕಟ್ಟಡಗಳ ಪಾಲಿಗೆ ಮೈಸೂರಿನ ರಂಗಾ ಚಾರ್ಲು ಪುರಭವನ ಬಹುತೇಕ ಸೇರ್ಪಡೆಗೊಂಡಿದ್ದು, ನಿರ್ವಹಣೆಯ ಕೊರತೆ, ದುರಸ್ತಿಗೆ ನ್ಯಾಯಾಲಯದಲ್ಲಿ ಪ್ರಕರಣದ ಅಡ್ಡಿಯಿಂದಾಗಿ ಮೈಸೂರು ಮಹಾನಗರ ಪಾಲಿಕೆ ಕೈಕಟ್ಟಿ ಕೂರಬೇಕಾದ ತ್ರಿಶಂಕು ಸ್ಥಿತಿಗೆ ಸಿಲುಕಿದೆ.

ಈ ಹಿಂದೆ ಪುರಭವನದ ಕಟ್ಟಡ ಹಾಗೂ ಆವರಣ ದಲ್ಲಿ ಮಲ್ಪಿಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಾಣಕ್ಕಾಗಿ ಗುತ್ತಿಗೆ ಪಡೆದಿದ್ದ ಹೈದ್ರಾಬಾದ್ ಮೂಲದ ಛಾಬ್ರಿಯಾ ಅಸೋಸಿಯೇಟ್ಸ್ ಮಾಡಿದ ಯಡವಟ್ಟು, ನ್ಯಾಯಾಲಯ ದಲ್ಲಿರುವ ಪ್ರಕರಣ ಇತ್ಯರ್ಥಗೊಳಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಇಲ್ಲದ ಇಚ್ಛಾಶಕ್ತಿಯಿಂದಾಗಿ ಇದೀಗ ಮೈಸೂರಿನ ಪ್ರಮುಖ ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿರುವ ಸಂಗೀತ, ಕಲೆ, ನಾಟಕದ ವೈಭವಕ್ಕೆ ಮೆರುಗು ನೀಡುತ್ತಿದ್ದ ಪುರಭವನದ ಕಟ್ಟಡ ಲ್ಯಾನ್ಸ್‍ಡೌನ್ ಹಾಗೂ ದೇವರಾಜ ಮಾರುಕಟ್ಟೆಯಂತೆ ಸೊರಗುವ ಸ್ಥಿತಿಗೆ ದೂಡ ಲ್ಪಟ್ಟಿದೆ. ಹಂತಹಂತವಾಗಿ ಕುಸಿಯುವ ಹಂತಕ್ಕೆ ತಲುಪಿರುವ ಪುರಭವನಕ್ಕೆ ತ್ವರಿತಗತಿಯಲ್ಲಿ ಕಾಯಕಲ್ಪ ನೀಡದೇ ಇದ್ದರೆ ಮೈಸೂರಿನ ಜನತೆ ರಾಜರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಮತ್ತೊಂದು ಕಟ್ಟಡವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

138 ವರ್ಷದ ಇತಿಹಾಸ: ಮೈಸೂರು ಸಂಸ್ಥಾನದಲ್ಲಿ 1881 ರಿಂದ 1902ರವರೆಗೆ ಅರಸರಾಗಿ ಆಳ್ವಿಕೆ ನಡೆಸಿದ ಚಾಮರಾಜ ಒಡೆಯರ್ ಅವರ ಅಧಿಕಾರಾವಧಿಯಲ್ಲಿ ಮೈಸೂರು ಸಂಸ್ಥಾನ ಮೊದಲ ದಿವಾನರಾಗಿ ಉತ್ತಮ ಸೇವೆ ಸಲ್ಲಿಸಿದ್ದ ಸಿ.ವಿ.ರಂಗಾ ಚಾರ್ಲು ಅವರ ಸ್ಮರಣಾರ್ಥ ಪುರಭವನದ ಕಟ್ಟಡವನ್ನು ನಿರ್ಮಿಸಲಾಗಿತ್ತು. ಗ್ರೀಕ್-ರೋಮನ್ ಶೈಲಿಯಲ್ಲಿ ನಿರ್ಮಿಸ ಲಾಗಿರುವ ಈ ಕಟ್ಟಡವು 4 ದೊಡ್ಡ ಕಂಬಗಳಿಂದ ಕೂಡಿದ್ದು, ಕಟ್ಟಡಕ್ಕೆ ಮೆರಗು ನೀಡಿದೆ. 1881ರಲ್ಲಿ ಆರಂಭವಾದ ಕಟ್ಟಡ ನಿರ್ಮಾಣ ಕಾಮಗಾರಿ 1884ರಲ್ಲಿ ಪೂರ್ಣಗೊಂಡಿತ್ತು. ಈ ಕಟ್ಟಡವನ್ನು ಮುಖ್ಯ ಇಂಜಿನಿಯರ್
ಆಗಿದ್ದ ಕೆ(ಕುಮಾರಪುರಂ).ಶೇಷಾದ್ರಿ ಅಯ್ಯರ್ ವಿನ್ಯಾಸಗೊಳಿಸಿದ್ದಾರೆ. 138 ವರ್ಷ ಸಂದಿರುವ ಪುರಭವನದ ಕಟ್ಟಡ ಶಿಥಿಲಾವಸ್ಥೆಗೆ ಜಾರಿರುವುದು ಮೈಸೂರು ನಗರದ ಪಾರಂಪರಿಕತೆಗೆ ದೊಡ್ಡ ಮಟ್ಟದ ನಷ್ಟವಾಗಿದೆ.

ಏನೋ ಮಾಡಲು ಹೋಗಿ: ಮೈಸೂರಿನ ಪುರಭವನದ ಕಟ್ಟಡಕ್ಕೆ ಕಾಯಕಲ್ಪ ನೀಡಲು ಮೈಸೂರು ನಗರ ಪಾಲಿಕೆ ಮುಂದಾಗಿತ್ತು. ಅದಕ್ಕಾಗಿ ಹೈದ್ರಾಬಾದ್ ಮೂಲದ ಛಾಬ್ರಿಯಾ ಅಸೋಸಿಯೇಟ್ಸ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಇದರೊಂದಿಗೆ ಪುರಭವನದ ಆವರಣ ದಲ್ಲಿ 18.28 ಕೋಟಿ ರೂ ವೆಚ್ಚದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿತ್ತು. 2011ರ ಏಪ್ರಿಲ್ 29ರಂದು ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಾಣ ಹಾಗೂ ಪುರಭವನದ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ನಿಯಮಾನುಸಾರ ಈ ಕಟ್ಟಡವನ್ನು 2012ರ ಏಪ್ರಿಲ್ ತಿಂಗಳಲ್ಲಿ ಪೂರ್ಣಗೊಳಿಸಬೇಕಾ ಗಿತ್ತು. ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸದ ಛಾಬ್ರಿಯಾ ಅಸೋಸಿಯೇಟ್ಸ್ ಸಂಸ್ಥೆ ಹೆಚ್ಚುವರಿ ಅನುದಾನ ನೀಡುವಂತೆ ಪಾಲಿಕೆಗೆ ಮನವಿ ಸಲ್ಲಿಸಿತ್ತು. ಇದಕ್ಕೆ ಪಾಲಿಕೆ ಒಪ್ಪದ ಕಾರಣ, ಗುತ್ತಿಗೆ ಪಡೆದಿದ್ದ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಆ ಸಂಸ್ಥೆ ಎರಡು ಪ್ರಕರಣ ಹೂಡಿತ್ತು. ಅದರಲ್ಲಿ ಒಂದು ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡಕ್ಕೆ ಸಂಬಂಧಿಸಿದ್ದಾಗಿದ್ದರೆ, ಮತ್ತೊಂದು ಪುರಭವನದ ಕಟ್ಟಡಕ್ಕೆ ಸಂಬಂಧಿಸಿದ್ದಾಗಿತ್ತು. ಈ ಪ್ರಕರಣಗಳಿಂದಲೇ ಪುರಭವನದ ಕಟ್ಟಡ ದುಸ್ಥಿತಿಗೆ ದೂಡಲು ಕಾರಣವಾಗಿದೆ.

ನ್ಯಾಯಾಲಯದಲ್ಲಿದ್ದ ಪ್ರಕರಣ ಇತ್ಯರ್ಥವಾಗಿರುವುದರಿಂದ ಇದೀಗ ಎರಡನೇ ಹಂತದಲ್ಲಿ ಮಲ್ಪಿಲೆವೆಲ್ ಪಾರ್ಕಿಂಗ್ ಕಟ್ಟಡದ ಕಾಮಗಾರಿ ಆರಂಭಿಸಲಾಗಿದೆ. ಆದರೆ, ಪುರ ಭವನದ ಕಟ್ಟಡವನ್ನು ದುರಸ್ತಿ ಮಾಡುವುದಕ್ಕೆ ಇನ್ನೂ ಕ್ರಮ ಕೈಗೊಂಡಿಲ್ಲ. ನ್ಯಾಯಾ ಲಯದಲ್ಲಿ ಪುರಭವನದ ಕಟ್ಟಡಕ್ಕೆ ಸಂಬಂಧಿಸಿದ ಪ್ರಕರಣ ಇತ್ಯರ್ಥವಾಗಿದೆಯೇ ಅಥವಾ ಇನ್ನು ವಿಚಾರಣೆ ಹಂತದಲ್ಲಿದೆಯೇ? ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಅಧಿಕಾರಿಯೊಬ್ಬರು ಕಟ್ಟಡದ ದುರಸ್ತಿಗಾಗಿ ಶೀಘ್ರವೇ ಅಂದಾಜು ಪಟ್ಟಿ ತಯಾರಿಸ ಲಾಗುವುದು ಎಂದು ಸ್ಪಷ್ಟಪಡಿಸಿದರೆ, ಪುರಭವನದ ಸಮಿತಿ ಅಧ್ಯಕ್ಷ, ಪಾಲಿಕೆ ಸದಸ್ಯ ರಮೇಶ್ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದ ಕೂಡಲೇ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಟ್ಟಡದ ದುರಸ್ತಿಗೆ ಸಂಬಂಧಿಸಿದಂತೆ ಪಾಲಿಕೆಯಲ್ಲಿ ಸ್ಪಷ್ಟತೆ ಇಲ್ಲದಂತೆ ಕಾಣುತ್ತದೆ.

ಸೋರುತ್ತಿದೆ ಮಾಳಿಗೆ: ಪುರಭವನದ ಕಟ್ಟಡದ ಮೇಲ್ಚಾವಣಿಯಿಂದ ಮಳೆ ನೀರು ಸೋರಲಾರಂಭಿಸಿದ್ದು, ಕಟ್ಟಡದ ಗೋಡೆ ದುರ್ಬಲಗೊಳ್ಳುತ್ತಿದೆ. ಇದರಿಂದ ಮೇಲ್ಚಾವಣಿ ಯಿಂದ ಗಾರೆ ಚಕ್ಕೆ ಕುಸಿಯುತ್ತಿದೆ. ಮೇಲ್ಚಾವಣಿ ಪೂರ್ಣ ಪ್ರಮಾಣದಲ್ಲಿ ಕುಸಿಯಬಹು ದೆಂಬ ಆತಂಕದಿಂದ ಕಬ್ಬಿಣದ ಸಲಾಕೆಗಳಿಂದ ಸೆಂಟ್ರಿಂಗ್ ಕಟ್ಟಿ ತಾತ್ಕಾಲಿಕ ಭದ್ರತೆ ಒದಗಿಸಲಾಗಿದೆ. ಇದರಿಂದ ಕಬ್ಬಿಣದ ಸಲಾಕೆಗಳೇ ಮೇಲ್ಚಾವಣಿಯ ಭಾರ ಹೊರುತ್ತಿವೆ.

ಗೆದ್ದಲು ತಿಂದ ಮರ: ಮೇಲ್ಚಾವಣಿಗೆ ಕೆಲವೆಡೆ ಬಳಸಲಾದ ಮರ, ಬಾಗಿಲು, ಕಿಟಕಿ ಬಾಗಿಲುಗಳ ವಾಸ್ಕಾಲ್‍ಗಳು ಗೆದ್ದಲು ಪಾಲಾಗುತ್ತಿವೆ. ಇದರಿಂದ ಕಿಟಕಿ ಹಾಗೂ ಬಾಗಿಲುಗಳು ಮುರಿದು ಬೀಳುವಂತಾಗಿವೆ. ಪುರಭವನದ ವೇದಿಕೆಗೆ ಹೊಂದಿಕೊಂ ಡಂತೆ ಬಲಬದಿಯಲ್ಲಿರುವ ಬಾಗಿಲುಗಳೇ ಗೆದ್ದಲುಹುಳುಗಳ ಪಾಲಾಗುತ್ತಿದೆ.

ಇತ್ಯರ್ಥವಾದ ಬಳಿಕ ಕಾಮಗಾರಿ ಆರಂಭ: ಪುರಭವನದ ಸಮಿತಿ ಅಧ್ಯಕ್ಷ ರಮೇಶ್ ಮಾತನಾಡಿ, ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಇತ್ಯರ್ಥವಾದರೆ ಪುರಾತತ್ವ ಇಲಾಖೆಯಿಂದಲೇ ದುರಸ್ತಿ ಕಾಮಗಾರಿ ನಡೆಸ ಲಾಗುತ್ತದೆ. ಅದಕ್ಕೆ ಬೇಕಾದ ಅನುದಾನವನ್ನು ಮಾತ್ರ ಪಾಲಿಕೆ ನೀಡುತ್ತದೆ. ಈಗಾಗಲೇ ಪುರಭವನದ ಕಟ್ಟಡ ದುರಸ್ತಿ, ಲೈಟಿಂಗ್ಸ್, ವೈರಿಂಗ್, ಮುಂಭಾಗದ ಉದ್ಯಾನವನ ನಿರ್ಮಾಣಕ್ಕೆ ಅಂದಾಜು 7-8 ಕೋಟಿ ರೂ.ಗಳಲ್ಲಿ ಯೋಜನೆ ತಯಾರಿಸಲಾಗಿದೆ. ಪುರಭವ ನದ ಕಟ್ಟಡ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪಾಲಿಕೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು

Translate »