ಮಲ್ಕುಂಡಿ,ಏ.(ಚನ್ನಪ್ಪ)-ಕಲುಷಿತ ನೀರು ಸೇವಿಸಿ ಮಕ್ಕಳು ಸೇರಿದಂತೆ 20 ಮಂದಿಗೆ ವಾಂತಿ-ಭೇದಿ ಕಾಣಿಸಿಕೊಂಡಿರುವ ಘಟನೆ ಸಮೀಪದ ಹುರಾ ಗ್ರಾಪಂ ವ್ಯಾಪ್ತಿಯ ಸಿದ್ದೆಗೌಡನಹುಂಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಓವರ್ಹೆಡ್ ಟ್ಯಾಂಕ್ನಿಂದ ಶುಕ್ರವಾರ ಸರಬರಾಜಾದ ನೀರು ಸೇವನೆಯಿಂದ ಸುಮಾರು 20 ಮಂದಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ವಿಷಯ ತಿಳಿದು ಹುರ ಗ್ರಾಮದ ಆರೋಗ್ಯ ಕೇಂದ್ರದ ಡಾ. ಜಗದೀಶ್ ಗ್ರಾಮದಲ್ಲೇ ತಾತ್ಕಾಲಿಕವಾಗಿ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡಿದರು. ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ಹುರಾ ಆರೋಗ್ಯ ಸಮುದಾಯದ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಗ್ರಾಮದಲ್ಲಿ ಸಮರ್ಪಕ ಚರಂಡಿಯ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ಪೈಪ್ಲೈನ್ ಸೇರಿ ಕುಡಿಯುವ ನೀರಿನ ಟ್ಯಾಂಕ್ಗೆ ಸರಬರಾಜಾಗಿ ಘಟನೆ ಸಂಭವಿಸಿದ್ದು, ಇದಕ್ಕೆ ಜನಪ್ರತಿನಿಧಿಗಳು ಹಾಗೂ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ. ಪ್ರತಿ 15 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದ್ದು, ಕೂಡಲೇ ಓವರ್ಹೆಡ್ ಟ್ಯಾಂಕ್ ಸ್ವಚ್ಛಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.