ನಾಡಿನ ಸಂತ, ನಡೆದಾಡುವ ದೇವರು, ಜ್ಞಾನಯೋಗಿ…ಸಿದ್ದೇಶ್ವರ ಸ್ವಾಮೀಜಿ ಅಸ್ತಂಗತ
News

ನಾಡಿನ ಸಂತ, ನಡೆದಾಡುವ ದೇವರು, ಜ್ಞಾನಯೋಗಿ…ಸಿದ್ದೇಶ್ವರ ಸ್ವಾಮೀಜಿ ಅಸ್ತಂಗತ

January 3, 2023

ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ಧೇಶ್ವರ ಶ್ರೀಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ನಡೆಸಿದ ಮನವೊಲಿಕೆ ಪ್ರಯತ್ನಕ್ಕೆ ಶ್ರೀಗಳು ಒಪ್ಪದ ಕಾರಣ ಆಶ್ರಮದಲ್ಲೇ ಬಿಎಲ್‍ಡಿಇ ಆಸ್ಪತ್ರೆಯ ತಜ್ಞ ವೈದ್ಯರು ಅಗತ್ಯ ಚಿಕಿತ್ಸೆ ನೀಡುತ್ತಿದ್ದರು. ಎರಡು ದಿನಗಳಿಂದ ಉಸಿರಾಟಕ್ಕೆ ಆಮ್ಲಜನಕದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು 20 ದಿನಗಳಿಂದ ಆಹಾರ ತ್ಯಜಿಸಿದ್ದ ಶ್ರೀಗಳು ಸೋಮವಾರ ಬೆಳಗ್ಗೆ ಸ್ವಲ್ಪ ಗಂಜಿ ಸೇವಿ ಸಿದ್ದರು. ಬಳಿಕ ಕ್ಷಣ, ಕ್ಷಣಕ್ಕೆ ಉಸಿರಾಟ, ನಾಡಿ ಬಡಿತ ಕ್ಷೀಣವಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದು ವರಿಸಲು ವೈದ್ಯರು, ನಾಡಿನ ವಿವಿಧ ಮಠಾಧೀಶರು, ಮಠದ ಶಿಷ್ಯರು, ಗಣ್ಯರು ಅವರ ಮನವೊಲಿಸಿದರೂ ಆಸ್ಪತ್ರೆಗೆ ಹೋಗಲು ಶ್ರೀಗಳು ನಿರಾಕರಿಸಿದ್ದರು.

ಆಶ್ರಮಕ್ಕೆ ಭಾನುವಾರ ರಾತ್ರಿ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಗೋವಿಂದ ಕಾರ ಜೋಳ ಅವರು ಸಹ ಉನ್ನತಮಟ್ಟದ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದಾಗಿ ಮನವಿ ಮಾಡಿದರೂ ಶ್ರೀಗಳು ಒಪ್ಪಲಿಲ್ಲ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತಮ್ಮ ಫೆÇೀನ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿ ಶ್ರೀಗಳ ಜೊತೆ ಮಾತನಾಡಲು ಅನುವು ಮಾಡಿಕೊಟ್ಟಿದ್ದರು. ಪ್ರಧಾನಿ ಸಹ ಉನ್ನತ ಮಟ್ಟದ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರೂ ಶ್ರೀಗಳು ಕೈ ಮುಗಿಯುವ ಮೂಲಕ ಈ ಜೀವಕ್ಕೆ ಚಿಕಿತ್ಸೆ ಅಗತ್ಯವಿಲ್ಲ, ಸಹಜವಾಗಿ ತೆರಳಲು ಬಿಡಿ ಎಂದು ಕೈಸನ್ನೆ ಮಾಡಿದ್ದರು.

‘ಗುಡಿ ಕಟ್ಟಬಾರದು, ಸಮಾದಿ ಮಾಡಬಾರದು’ ಎಂಬ ಶ್ರೀಗಳ ಆಶಯದಂತೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತಿಮ ಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ. ಅಂತ್ಯಸಂಸ್ಕಾರದಲ್ಲಿ ಮಠಾಧೀಶರು, ಗಣ್ಯರು, ಮಾಧ್ಯಮದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ತಿಳಿಸಿದ್ದಾರೆ. ಆಶ್ರಮದ ಶಿಷ್ಯ ವರ್ಗ, ನಾಡಿನ ಹಿರಿಯ ಮಠಾಧೀಶರು, ಗಣ್ಯರು ಶ್ರೀಗಳ ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ನಡೆಸಲು ಅಗತ್ಯ ಸಿದ್ಧತೆ ಕೈಗೊಂಡಿದ್ದಾರೆ. ಶ್ರೀಗಳ ಅಂತಿಮ ದರ್ಶನಕ್ಕೆ ಸಹಸ್ರಾರು ಭಕ್ತರು ಆಶ್ರಮದತ್ತ ಧಾವಿಸುತ್ತಿರುವುದರಿಂದ ಯಾವುದೇ ಅಸ್ತವ್ಯಸ್ತವಾಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ವಿಜಯ ಮಹಾಂತೇಶ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಅಗತ್ಯ ವ್ಯವಸ್ಥೆ, ಭದ್ರತೆ ಮಾಡಿದ್ದಾರೆ.
ಅಂತಿಮ ದರ್ಶನಕ್ಕೆ 5 ರಿಂದ 10 ಲಕ್ಷ ಭಕ್ತರು ಬರುವ ನಿರೀಕ್ಷೆ ಇದ್ದು, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಉಪಹಾರದ ವ್ಯವಸ್ಥೆ ಮಾಡಿದ್ದಾರೆ. ಸಾರ್ವಜನಿಕರೂ ಸಹ ಭಕ್ತರಿಗೆ ಉಪಹಾರದ ವ್ಯವಸ್ಥೆ ಮಾಡಬಹುದಾಗಿದೆ ಎಂದು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲರು ತಿಳಿಸಿದರು.

Translate »