ಅ.1ಕ್ಕೆ ಮೈಸೂರಿಗೆ ಅಭಿಮನ್ಯು ನೇತೃತ್ವದ ಗಜಪಡೆ ಆಗಮನ
ಮೈಸೂರು

ಅ.1ಕ್ಕೆ ಮೈಸೂರಿಗೆ ಅಭಿಮನ್ಯು ನೇತೃತ್ವದ ಗಜಪಡೆ ಆಗಮನ

September 22, 2020
  • ಮೊದಲ ದಿನ ಅರಣ್ಯ ಭವನದಲ್ಲಿ ವಾಸ್ತವ್ಯ
  • ಮಾರನೇ ದಿನ ಅರಮನೆ ಅಂಗಳಕ್ಕೆ ಸ್ವಾಗತ

ಮೈಸೂರು, ಸೆ.21(ಎಂಟಿವೈ)-ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಯ್ಕೆ ಯಾಗಿರುವ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆ ಅ.1ಕ್ಕೆ ಮೈಸೂ ರಿನ ಅಶೋಕಪುರಂನ ಅರಣ್ಯ ಭವನಕ್ಕೆ ಆಗಮಿಸಲಿದ್ದು, ಮರುದಿನ(ಅ.2) ಬೆಳಿಗ್ಗೆ ಅರಮನೆ ಅಂಗಳವನ್ನು ಪ್ರವೇ ಶಿಸಲಿವೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸಾಂಪ್ರದಾಯಿಕ ಸರಳ ದಸರಾ ಆಚರಣೆಗೆ ನಿರ್ಧರಿಸಲಾಗಿದ್ದು, ಜಂಜೂ ಸವಾರಿ ಮೆರವಣಿಗೆಯನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸಲಾಗಿದೆ. ಹಾಗಾಗಿ ಕೇವಲ 5 ಆನೆಗಳನ್ನಷ್ಟೇ ಆಯ್ಕೆ ಮಾಡಲಾಗಿದ್ದು, ಅಂಬಾರಿ ಹೊರುವ ಜವಾಬ್ದಾರಿ ಅಭಿಮನ್ಯು(53)ವಿಗೆ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ ಆನೆಕಾಡು ಕ್ಯಾಂಪ್‍ನಲ್ಲಿರುವ ಪಟ್ಟದ ಆನೆ ವಿಕ್ರಮ, ಕುಮ್ಕಿ ಆನೆ ವಿಜಯ, ದುಬಾರೆ ಕ್ಯಾಂಪ್‍ನಲ್ಲಿರುವ ಗೋಪಿ ಹಾಗೂ ಮತ್ತೊಂದು ಕುಮ್ಕಿ ಆನೆ ಕಾವೇರಿಯನ್ನು ಆಯ್ಕೆ ಮಾಡಲಾಗಿದೆ. ಈ ಬಾರಿ ಜಂಜೂಸವಾರಿಗೆ 25 ದಿನ ಮುಂಚಿತ ವಾಗಿ ಗಜಪಡೆ ಕರೆತರಲು ದಿನಾಂಕ ನಿಗದಿ ಮಾಡಲಾಗಿತ್ತು. ಅ.2ರಂದು ಬೆಳಿಗ್ಗೆ ಸಂಪ್ರದಾಯ ದಂತೆ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ವತಿಯಿಂದ ಅಭಿಮನ್ಯು ನೇತೃತ್ವದ ಗಜಪಡೆಗೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಲಾರಿಯಲ್ಲಿ ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ಅರಮನೆಗೆ ಕರೆತರಲಾಗುತ್ತದೆ. ಅಲ್ಲಿ ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಗಜಪಡೆಯನ್ನು ಅರಮನೆಗೆ ಬರಮಾಡಿ ಕೊಳ್ಳಲಿದೆ. ಅರಮನೆ ಆಡಳಿತ ಮಂಡಳಿಗೆ ಆನೆಗಳ ಜವಾಬ್ದಾರಿ ನೀಡಲಾಗುತ್ತದೆ.

 

 

Translate »