ಮೈಸೂರು, ಮೇ 14 (ಆರ್ಕೆ)- ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿ ಲಾಕ್ಡೌನ್ ಸಡಿಲಿಕೆಯಾಗಿದ್ದಾಗ್ಯೂ ಮೈಸೂರಲ್ಲಿ ಖಾಸಗಿ ಆಸ್ಪತ್ರೆಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ವೈದ್ಯಕೀಯ ಸೇವೆ ಆರಂಭಿಸಿಲ್ಲ.
ವೈದ್ಯಕೀಯ ಸೇವೆ ಅತ್ಯಂತ ಅವಶ್ಯಕವಾಗಿರುವುದ ರಿಂದ ಎಲ್ಲಾ ಆಸ್ಪತ್ರೆ, ನರ್ಸಿಂಗ್ ಹೋಂ, ಕ್ಲಿನಿಕ್ ಹಾಗೂ ಡಯಾಗ್ನೋಸ್ಟಿಕ್ ಸೆಂಟರ್ಗಳನ್ನು ಮುಚ್ಚಬಾರದೆಂದು ಸರ್ಕಾರ ಪದೇ ಪದೆ ಹೇಳಿತ್ತು. ಅಲ್ಲದೆ ಬುಧವಾರ ಆರೋಗ್ಯ ಸಚಿವ ಶ್ರೀರಾಮುಲು ಅವರು ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ ಮತ್ತು ತಜ್ಞರ ಜೊತೆ ವೀಡಿಯೋ ಸಂವಾದ ನಡೆಸಿ ಗುರುವಾರದಿಂದ ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆ ಗಳೂ ಕಾರ್ಯನಿರ್ವಹಿಸಲು ಒಪ್ಪಿವೆ ಎಂದಿದ್ದರು.
ಇದೀಗ ಮೈಸೂರು ರೆಡ್ ಜೋನ್ನಿಂದ ಆರೆಂಜ್ ಜೋನ್ ತಲುಪುತ್ತಿದೆ. ಜಿಲ್ಲಾ ಕಂಟೈನ್ಮೆಂಟ್ ವಲಯಗಳು ಅವಧಿ ಮುಗಿಸಿವೆ. ಎಲ್ಲಾ 91 ಪ್ರಮುಖ ವಾಣಿಜ್ಯ ರಸ್ತೆ ಗಳ ಅಂಗಡಿ ತೆರೆದು ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿದೆಯಾದರೂ ಖಾಸಗಿ ಆಸ್ಪತ್ರೆಗಳು ಮಾತ್ರ ಓಪಿಡಿ ತೆರೆಯಲು ಹಿಂದು-ಮುಂದು ನೋಡುತ್ತಿವೆ.
ಕೆಲ ತುರ್ತು ಚಿಕಿತ್ಸೆ ಹೊರತುಪಡಿಸಿ ಹೊರ ರೋಗಿ ತಪಾಸಣೆ, ಶಸ್ತ್ರ ಚಿಕಿತ್ಸೆ ಸೇವೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಪುನರಾಂಭಿಸಿಲ್ಲ. ಹಳೇ ರೋಗಿಗಳಿಗೆ ಮೊಬೈಲ್ನಲ್ಲೇ ವೈದ್ಯರು ಕನ್ಸಲ್ಟೇಷನ್ ಮಾಡಿ ವೈದ್ಯಕೀಯ ಸಲಹೆ ನೀಡುತ್ತಿರುವುದು ಕಂಡು ಬಂದಿದೆ.
ಈ ಕುರಿತು `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿ ರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮೈಸೂರು ಶಾಖೆ ಅಧ್ಯಕ್ಷ ಡಾ.ಸುರೇಶ್ ರುದ್ರಪ್ಪ ಅವರು, ಕೊರೊನಾ ವೈರಸ್ ಹರಡುವ ಭೀತಿಯಿಂದಾಗಿ ಕ್ಲಿನಿಕ್, ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳಲ್ಲಿ ಓಪಿಡಿ ಆರಂಭಿಸಲು ಹಿಂಜರಿಯುತ್ತಿದ್ದಾರೆ ಎಂದರು.
ಈಗ ಶೇ.40ರಿಂದ 45ರಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ಕೆಲ ತುರ್ತು ಚಿಕಿತ್ಸೆ ಹೊರತುಪಡಿಸಿ ಸಾಮಾನ್ಯ ರೋಗಿಗಳ ತಪಾಸಣೆ ಮಾಡಲಾಗುತ್ತಿಲ್ಲ. ಮುಂದೆ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸ್ಥಿತಿಗತಿ ನೋಡಿಕೊಂಡು ವೈದ್ಯಕೀಯ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಾದ್ಯಂತ ಸಾಮೂಹಿಕ ಪ್ರಯಾಣ, ಸಂಚಾರಕ್ಕೆ ಅವಕಾಶ ನೀಡಿರುವುದರಿಂದ ಮತ್ತೆ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುವ ಆತಂಕವಿರುವು ದರಿಂದ ಖಾಸಗಿ ವಲಯದ ಆರೋಗ್ಯ ಸೇವೆ ಪೂರ್ಣ ಪ್ರಮಾಣದಲ್ಲಿ ಪುನರಾರಂಭಗೊಂಡಿಲ್ಲ ಎಂದು ಡಾ. ಸುರೇಶ್ ರುದ್ರಪ್ಪ ಅವರು ತಿಳಿಸಿದರು.