ಮೈಸೂರು, ಏ.23(ಆರ್ಕೆ)-ಪ್ರೇಯಸಿಯನ್ನು ಚಾಕುವಿನಿಂದ ಇರಿದು ಪರಾರಿಯಾಗುತ್ತಿದ್ದ ಯುವಕನೋರ್ವನನ್ನು ಸಾರ್ವ ಜನಿಕರು ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ಬುಧ ವಾರ ಸಂಜೆ ಮೈಸೂರಿನಲ್ಲಿ ಸಂಭವಿಸಿದೆ.
ಹೆಚ್.ಡಿ.ಕೋಟೆ ತಾಲೂಕು ಅಂತರಸಂತೆ ಗ್ರಾಮದ ರಮೇಶ ಬಂಧಿತನಾಗಿದ್ದು, ಹಲ್ಲೆಗೊಳಗಾಗಿ ಗಾಯ ಗೊಂಡಿರುವ ಯುವತಿಯನ್ನು ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೈಸೂರಿನ ಮಾಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ ರಮೇಶ್, ಬುಧವಾರ ಸಂಜೆ ಲಷ್ಕರ್ ಮೊಹಲ್ಲಾದ ಶ್ರೀಹರ್ಷ ರಸ್ತೆಯ ಪಾರ್ಕ್ನಲ್ಲಿ ಕುಳಿತು ಆಕೆಯ ಜೊತೆ ಮಾತನಾಡುತ್ತಿದ್ದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಪ್ರೇಯಸಿಯ ಮೊಬೈಲ್ಗೆ ಬರುತ್ತಿದ್ದ ಮೆಸೇಜ್ಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಆತ ಹಠಾತ್ತನೆ ಚಾಕುವಿನಿಂದ ಆಕೆಯ ಮುಖಕ್ಕೆ ಇರಿದು ಪರಾರಿಯಾಗುತ್ತಿದ್ದಾಗ ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದರು.
ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ಲಷ್ಕರ್ ಠಾಣೆ ಇನ್ಸ್ಪೆಕ್ಟರ್ ಸುರೇಶ್ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ ಆತನನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.