ಮೂರು ತಲೆಮಾರಿಗೆ ಆಗುವಷ್ಟು ಗಾಂಧಿ ಹೆಸ್ರಲ್ಲಿ ಹಣ, ಆಸ್ತಿ ಮಾಡ್ಕೊಂಡಿದ್ದೇವೆ!
News

ಮೂರು ತಲೆಮಾರಿಗೆ ಆಗುವಷ್ಟು ಗಾಂಧಿ ಹೆಸ್ರಲ್ಲಿ ಹಣ, ಆಸ್ತಿ ಮಾಡ್ಕೊಂಡಿದ್ದೇವೆ!

July 22, 2022

ಬೆಂಗಳೂರು, ಜು.21- ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾ ವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರನ್ನು ಜಾರಿ ನಿರ್ದೇಶನಾಲಯ (ಇಡಿ) ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಕೆಪಿಸಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಮಾತನಾಡಿ, ಗಾಂಧಿ ಕುಟುಂಬ ಹೆಸರಲ್ಲಿ 3-4 ತಲೆಮಾರು ಗಳಿಗೆ ಆಗುವಷ್ಟು ಹಣ, ಆಸ್ತಿ ಮಾಡಿಕೊಂಡ ನಾವು ಈಗ ಗಾಂಧಿ ಕುಟುಂಬದ ಋಣ ತೀರಿಸಬೇಕಿದೆ’ ಎಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಕಾಂಗ್ರೆಸ್ ಸುಮಾರು 70 ವರ್ಷ ದೇಶವನ್ನು ಆಳಿದೆ. ಕಾಂಗ್ರೆಸ್‍ನವರೇ ಆದ ನಾವೆಲ್ಲರೂ ಮುಂದಿನ ಮೂರ್ನಾಲ್ಕು ತಲೆಮಾರುಗಳಿಗೆ ಆಗುವಷ್ಟು ಆಸ್ತಿ, ಹಣ ಗಳಿಸಿದ್ದೇವೆ. ಅಧಿಕಾರ ಅನುಭವಿಸಿದ್ದೇವೆ. ಇದೀಗ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಮೇಲೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಅವ್ಯವಹಾರ ಮತ್ತು ಹಣ ವರ್ಗಾವಣೆ ಆರೋಪದ ವಿಚಾರಣೆ ನಡೆಯುತ್ತಿದೆ. ದೇಶ ಉಳಿಯಲು, ಕಾಂಗ್ರೆಸ್ ಉಳಿಸಲು ನಾವೆಲ್ಲರೂ ಒಟ್ಟಾಗಿ ಸೋನಿಯಾ ಗಾಂಧಿ ಅವರಿಗೆ ನೈತಿಕ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಗಾಂಧಿ ಕುಟುಂಬದ ಋಣ ತೀರಿಸದೇ ಹೋದರೆ ತಿನ್ನುವ ಅನ್ನಕ್ಕೆ ಹುಳ ಬೀಳುತ್ತದೆ. ಪಕ್ಷ ಕುಟುಂಬ ಇದ್ದಂತೆ, ಕುಟುಂಬ ಎಂದ ಮೇಲೆ ಸಣ್ಣ ಪುಟ್ಟ ಮನಸ್ತಾಪಗಳೆಲ್ಲವೂ ಸಹಜ. ಅವುಗಳನ್ನೆಲ್ಲಾ ಬದಿಗೊತ್ತಿ ನಾವೆಲ್ಲರೂ ಒಂದಾಗಬೇಕು. ಸಂಕಷ್ಟದಲ್ಲಿರುವ ಸೋನಿಯಾ ಅವರೊಂದಿಗೆ ನಿಲ್ಲಬೇಕು. ಆಗ ಮಾತ್ರ ನಾವು ತಿನ್ನುವ ಎರಡು ಹೊತ್ತಿನ ಊಟಕ್ಕೆ ಸಾರ್ಥಕ ಬರುತ್ತದೆ ಎಂದು ರಮೇಶ್ ಕುಮಾರ್ ಹೇಳಿದರು.

Translate »