ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಚಿತ್ರಕಲಾ ಶಿಬಿರಕ್ಕೆ ಚಾಲನೆ
ಮೈಸೂರು

ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಚಿತ್ರಕಲಾ ಶಿಬಿರಕ್ಕೆ ಚಾಲನೆ

December 4, 2022

ಮೈಸೂರು, ಡಿ.3(ಎಂಟಿವೈ)-ಮೆಗಾ ಇವೆಂಟ್ ಬಹು ರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಕಾರ್ಯ ಕ್ರಮದ ಅಂಗವಾಗಿ ಶನಿವಾರ `ಚಿತ್ರ ಕಲಾ ಶಿಬಿರ’ಕ್ಕೆ ಚಾಲನೆ ದೊರೆಯಿತು.

ರಂಗಾಯಣದ ಆವರಣದಲ್ಲಿರುವ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಬಹುರೂಪಿ ರಾಷ್ಟ್ರೀಯ ರಂಗೋ ತ್ಸವ ಚಿತ್ರಕಲಾ ಶಿಬಿರಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬ ಕಲಾವಿದ ಅಥವಾ ವಿಚಾರವಾದಿಗಳು ಅಭಿವ್ಯಕ್ತಪಡಿಸುವ ಸ್ವಾತಂತ್ರ್ಯ ವಿದೆ. ನಮ್ಮ ನಂಬಿಕೆ, ಚಿಂತನೆಗಳ ಅಭಿವ್ಯಕ್ತತೆ ಇನ್ನೊಬ್ಬರ ಹಕ್ಕು, ನಂಬಿಕೆಗೆ ಘಾಸಿ ಮಾಡಬಾರದು. ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿ ಸುವ ಮುನ್ನ ಎಚ್ಚರಿಕೆ ಇರಬೇಕು. ಇನ್ನೊಬ್ಬರಿಗೆ ನೋವಾಗ ದಂತೆ ಅದನ್ನು ವ್ಯಕ್ತಪಡಿಸುವ ಸೂಕ್ಷ್ಮತೆ ಇರಬೇಕು. ಸಿಟ್ಟು ಬಂದಾಗ ಇತರರ ಭಾವನೆಗಳನ್ನು ಕೆರಳಿಸುವಂತೆ ವರ್ತಿಸಬಾರದು. ಬಹುತ್ವ ಹಾಗೂ ಉದಾರತೆಯನ್ನು ಗೌರವಿಸುವುದು ಈ ನೆಲದ ಗುಣ ಎಂದರು.

ಕಲಾವಿದರು ತಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಹೊಸತನಕ್ಕೆ ತೆರೆದುಕೊಂಡಾಗ ಸವಾಲು ಎದುರಾಗುವುದು ಸಾಮಾನ್ಯ. ರಂಗಾಯಣ ಕ್ರಿಯಾಶೀಲ ವೇದಿಕೆಯಾಗಿದ್ದು, ಅದನ್ನು ಯುವ ಉತ್ಸಾಹಿಗಳು ಬಳಸಿ ಕೊಳ್ಳಬೇಕು. ರಂಗ ಕಲೆಯಲ್ಲಿ ತೊಡಗಿಸಿಕೊಂಡಿರುವವರು ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗುತ್ತಾರೆ. ರಂಗಭೂಮಿಗೆ ಎಲ್ಲ ಕಡೆಯಿಂದಲೂ ಜ್ಞಾನ-ವಿಚಾರಗಳು ಹರಿದು ಬರುತ್ತವೆ. ಬಹುರೂಪಿ ರಂಗೋತ್ಸವಕ್ಕೆ ದೇಶದ ವಿವಿಧೆಡೆ ಗಳಿಂದ ಕಲಾವಿದರು, ತಂಡಗಳು ಬರುತ್ತಿವೆ. ಎಲ್ಲರೊಂದಿಗೆ ಬೆರೆಯುವ ಅವಕಾಶ ಸಿಗುತ್ತಿದೆ ಎಂದರು.

ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಮಾತನಾಡಿ, ಎಲ್ಲವನ್ನು ಗೌರವಿಸುವುದೇ ಸಮಾನತೆ ಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಖ್ಯಾನ ಮಾಡು ವವರು ಕೆಲವೊಂದನ್ನು ಮಾತ್ರ ಹೇಳಿ, ಇನ್ನೊಂದಷ್ಟನ್ನು ಹೇಳಬಾರದು ಎನ್ನುತ್ತಾರೆ. ಅದು ಕೂಡ ಅಭಿವ್ಯಕ್ತಿಗೆ ಧಕ್ಕೆ ತಂದಂತೆಯೇ ಆಗಿದೆ. ಅಭಿವ್ಯಕ್ತಿಯನ್ನು ಸಹಿಸದೇ ವಿರೋಧ ಮಾಡುವವರಿಗೆ ಸ್ವೀಕರಿಸುವ ಮನೋ ಭಾವವೇ ಇರುವುದಿಲ್ಲ. `ಟಿಪ್ಪು ನಿಜ ಕನಸುಗಳು’ ನಾಟಕ ನಿಲ್ಲಿಸಬೇಕೆಂದು ತಡೆಯಾಜ್ಞೆ ತರಲು ಮುಂದಾಗುವುದು, ನಮ್ಮ ಹಕ್ಕಿನ ಮೇಲಿನ ಹಲ್ಲೆ ನಡೆಸಿದಂತೆ. ನಿರ್ದಿಷ್ಟ ಧರ್ಮದ ಬಗ್ಗೆ ಮಾತ್ರ ಪ್ರಶ್ನಿಸಬೇಡಿ ಎನ್ನುವ ಜಾತ್ಯ ತೀತರು ನಮ್ಮಲ್ಲಿದ್ದಾರೆ. ಭಾರತ ಮಾತೆಗೆ ಗೌರವ ನೀಡದ ಗ್ಯಾಂಗ್ ಇಂದಿಗೂ ನಮ್ಮ ನಡುವೆಯೇ ಇದೆ ಎಂದರು.

ಈ ಹಿಂದೆ ಎಂ.ಎಫ್.ಹುಸೇನ್ ಅವರು ದೇವತೆಗಳ ಬೆತ್ತಲೆ ಚಿತ್ರ ಬಿಡಿಸಿ ಅಭಿವ್ಯಕ್ತಿ ಮೆರೆದಿದ್ದರು. ಆಗ ಅದನ್ನು ವಿರೋಧಿಸದೇ ಭಾರತೀಯರು ಸಹಿಸಿಕೊಂಡರು. ಆದರೆ, ಒಂದು ನಿರ್ದಿಷ್ಟ ಧರ್ಮದ ಮೇಲೆ ಅದೇ ಮಾದರಿಯಲ್ಲಿ ಬರೆದಿದ್ದರೆ ತಲೆ ಉರುಳುತ್ತಿದ್ದವು. ನಮ್ಮ ಭಾವನೆ ನಾಶವಾಗಿ ಹೋಗುವ ಭಯ ಮನೆ ಮಾಡಿದ್ದು, ಅದು ಕುಕ್ಕರ್ ಬಾಂಬ್ ಮೂಲಕ ಅಡುಗೆ ಮನೆಯನ್ನೂ ಪ್ರವೇಶಿಸಿದೆ ಎಂದು ವಿಷಾದಿಸಿದರು. ಇದೇ ವೇಳೆ ಚಿತ್ರ ಕಲಾವಿದ ಎಲ್.ಶಿವಲಿಂಗಪ್ಪ ಮಾತನಾಡಿ, ಸರ್ವ ಜನಾಂಗವನ್ನು ಒಳಗೊಂಡರೆ ಅದು ಭಾರತೀಯತೆ ಆಗುತ್ತದೆ. ವೈವಿಧ್ಯತೆ ಮತ್ತು ನಂಬಿಕೆಗಳನ್ನು ಕಾಪಾಡಿಕೊಳ್ಳಬೇಕು. ಎಲ್ಲವನ್ನು ಗ್ರಹಿಸುವ ಸಾಮಥ್ರ್ಯ ವನ್ನು ವಿದ್ಯಾರ್ಥಿಗಳು ಹೆಚ್ಚಿಸಿಕೊಳ್ಳಬೇಕು. ಮನಸ್ಸು ವಿಶಾಲಗೊಳಿಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಕಲಾವಿದ ಹೊರಹೊಮ್ಮುತ್ತಾನೆ ಎಂದರು. ಶಿಬಿರದಲ್ಲಿ ಚಾಮ ರಾಜೇಂದ್ರ ದೃಶ್ಯಕಲಾ ಅಕಾಡೆಮಿಯ(ಕಾವಾ) 22 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ವಿವಿಧ ಚಿತ್ರ ರಚನೆಯಲ್ಲಿ ಮಗ್ನರಾಗಿದ್ದಾರೆ. ಈ ಶಿಬಿರಾರ್ಥಿಗಳು ರಚಿಸುವ ಚಿತ್ರಗಳನ್ನು ಬಹುರೂಪಿ ನಾಟಕೋತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ, ಕಾವಾ ಆಡಳಿತಾಧಿಕಾರಿ ಹೆಚ್.ಎಂ.ಜಯ ಶಂಕರ್, ‘ಬಹುರೂಪಿ’ ಸಂಚಾಲಕ ಜಗದೀಶ್ ಮನವಾರ್ತೆ ಉಪಸ್ಥಿತರಿದ್ದರು.

Translate »