ಮಾರ್ಚ್ 5ರಂದು ಬಜೆಟ್ ಮಂಡನೆ
ಮೈಸೂರು

ಮಾರ್ಚ್ 5ರಂದು ಬಜೆಟ್ ಮಂಡನೆ

March 2, 2020

ಬೆಂಗಳೂರು,ಮಾ.1-ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡ ನೆಗೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ಬಜೆಟ್‍ನಲ್ಲಿ ಕೃಷಿ ಯಾಂತ್ರೀಕರಣ ಹಾಗೂ ಹನಿ ನೀರಾವರಿಗಳಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಮಾ.5ರಂದು ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಬಜೆಟ್ ಮಂಡನೆಗೆ ಈಗಾಗಲೇ ಸಿಎಂ ಯಡಿಯೂರಪ್ಪ ಅವರು ಸಕಲ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಪೂರ್ವ ಬಜೆಟ್ ಸಭೆಗಳನ್ನು ನಡೆಸುತ್ತಿ ರುವ ಯಡಿಯೂರಪ್ಪ, ಕೃಷಿ ಯಾಂತ್ರೀಕರಣ ಹಾಗೂ ಹನಿ ನೀರಾವರಿ, ಸಾವಯವ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನ ಗಳ ರಫ್ತಿಗೆ ಉತ್ತೇಜನ ನೀಡುವ ಉಪಕ್ರಮಗಳ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.

ಈ ಬಾರಿ ಬಜೆಟ್‍ನಲ್ಲಿ ಶಾಸಕಾಂಗದ ಜಂಟಿ ಅಧಿವೇಶ ನಕ್ಕೆ ರಾಜ್ಯಪಾಲರ ಭಾಷಣದಲ್ಲಿ ಘೋಷಣೆ ಮಾಡಿದಂತೆ ಸುಮಾರು 100 ತಾಲೂಕುಗಳಲ್ಲಿನ ಬರ ತಡೆಗಟ್ಟಲು ಸರ್ಕಾರ ಹೊಸ ಜಲಾನಯನ ಅಭಿವೃದ್ಧಿ ಯೋಜನೆ ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಭೂಮಿ, ಮಣ್ಣು, ಬೆಳೆ ಮಾದರಿ ಮತ್ತು ನೀರಿನ ಬಳಕೆಗೆ ಸಂಬಂಧಿಸಿ ಎಲ್ಲಾ ಮಾಹಿತಿಯನ್ನು ಪ್ರಸಕ್ತ ವರ್ಷ ಮಣ್ಣಿನ ಆರೋಗ್ಯ ಕಾರ್ಡ್‍ಗಳೊಂದಿಗೆ ಜೋಡಿಸುವ ಭೂ ಸಂಪನ್ಮೂಲ ಪಟ್ಟಿ ಯನ್ನು ಹೊರತರುವ ಸಾಧ್ಯತೆಗಳಿವೆ ಎಂದು ಕೃಷಿ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ರೈತರಿಗೆ ಮತ್ತು ಅಧಿಕಾರಿಗಳಿಗೆ ಸಹಾಯ ಮಾಡುವ ಎಲ್‍ಆರ್‍ಐ (ಭೂ ಸಂಪನ್ಮೂಲ ಪಟ್ಟಿ) ಹೊರತರಲು ಇಲಾಖೆ ಸಿದ್ಧವಾಗಿದೆ. ಬಜೆಟ್‍ನಲ್ಲಿನ ಯೋಜನೆಗಳ ಬಗ್ಗೆ ತಮ್ಮ ಅಭಿ ಪ್ರಾಯಗಳನ್ನು ಪಡೆಯಲು
ಮುಖ್ಯಮಂತ್ರಿಗಳು, ತಜ್ಞರು ಮತ್ತು ರೈತ ಮುಖಂಡರೊಂದಿಗೆ ಹಲವಾರು ಸುತ್ತಿನ ಸಮಾಲೋಚನೆ ನಡೆಸಿದ್ದಾರೆಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ವಿಧಾನಮಂಡಲದ ಬಜೆಟ್ ಅಧಿವೇಶನ ಸೋಮವಾರದಿಂದ ಆರಂಭವಾಗುತ್ತಿದ್ದು, ರಾಜ್ಯಕ್ಕೆ ಬಾಧಿಸಿರುವ ಆರ್ಥಿಕ ಸಂಕಷ್ಟ, ರೈತರ ಸಾಲ ಮನ್ನಾ ಮಾಡಲು ನಿರ್ಲಕ್ಷ್ಯ ಮತ್ತಿತರ ಜನಪರ ಹೋರಾಟಕ್ಕೆ ಪ್ರತಿಪಕ್ಷಗಳು ಸಜ್ಜಾಗಿವೆ. ಅನುಷ್ಠಾನಗೊಳ್ಳದ 2019- 20ನೇ ಸಾಲಿನ ಆಯವ್ಯಯ ಕಾರ್ಯಕ್ರಮಗಳು, ರೈತರ ಸಾಲ ಮನ್ನಾ ಮಾಡಲು ನಿರ್ಲಕ್ಷ್ಯ, ಪೌರತ್ವ ತಿದ್ದುಪಡಿ ಕಾಯ್ದೆ-ಸಿಎಎ ವಿವಾದ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧದ ಹೇಳಿಕೆ, ಅದನ್ನು ಸಮರ್ಥಿಸುತ್ತಿರುವ ಬಿಜೆಪಿ ಸಚಿವರ ನಡಾವಳಿಕೆಗಳ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುವ ಸಾಧ್ಯತೆಯಿದೆ. ಸಾಲಮನ್ನಾ, ದೊರೆಸ್ವಾಮಿ ಸೇರಿದಂತೆ ಕೆಲವು ವಿಷಯಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ಹೋರಾಟ ನಡೆಸಲು ಉದ್ದೇಶಿಸಿದ್ದು, ಕೆಲ ವಿಚಾರಗಳಲ್ಲಿ ರಚನಾತ್ಮಕ ಹೋರಾಟದ ಮೂಲಕ ಬಿಜೆಪಿ ಸರ್ಕಾರವನ್ನು ಕಟ್ಟಿಹಾಕಲು ವ್ಯವಸ್ಥಿತ ಕಾರ್ಯತಂತ್ರ ರೂಪಿಸುತ್ತಿವೆ. ಆಡಳಿತ ಸರ್ಕಾರದ ಹಲವು ವೈಫಲ್ಯಗಳ ವಿರುದ್ಧ ಹೋರಾಡಲು ಪ್ರತಿಪಕ್ಷಗಳು ನಿರ್ಧರಿಸಿದ್ದರೆ, ಬಜೆಟ್‍ಗೆ ಹಣ ಹೊಂದಿಸಲು ಹೆಣಗು ತ್ತಿರುವ ಸಿಎಂ ಯಡಿಯೂರಪ್ಪ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಪ್ರತಿ ಕೆಜಿ ಅಕ್ಕಿಗೆ 3 ರೂಪಾಯಿ ದರ ನಿಗದಿ ಮಾಡಲು ಚಿಂತನೆ ನಡೆಸಿದ್ದು, ಬಜೆಟ್‍ನಲ್ಲಿ ಈ ಘೋಷಣೆ ಹೊರ ಬಿದ್ದರೆ ಪ್ರತಿಪಕ್ಷಗಳಿಗೆ ಮತ್ತೊಂದು ಪ್ರಬಲ ಅಸ್ತ್ರ ದೊರೆತಂತಾಗಲಿದೆ.

Translate »