ಮೈಸೂರು,ಡಿ.3(ಆರ್ಕೆ)-ಸ್ಕೂಟರ್ಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿ ಣಾಮ ಖಾಸಗಿ ಆಸ್ಪತ್ರೆಯೊಂದರ ಮಹಿಳಾ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಈ ಘಟನೆ ಮೈಸೂರು-ಬೆಂಗಳೂರು ಹೆದ್ದಾರಿಯ ಸಿದ್ದ ಲಿಂಗಪುರ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.
ಪಾಂಡವಪುರ ತಾಲೂಕು ಬೇವಿನಕುಪ್ಪೆ ಗ್ರಾಮದ ಪರಮೇಶ ಅವರ ಪತ್ನಿ ಶ್ರೀಮತಿ ಸರಸ್ವತಿ (32) ಸಾವನ್ನಪ್ಪಿದವರು. ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶ್ರೀರಂಗಪಟ್ಟಣದ ಲಕ್ಷ್ಮೀಯನ್ನು ಮೈಸೂರಿನ ನಾರಾಯಣ ಹೃದಯಾಲಯಕ್ಕೆ ದಾಖಲು ಮಾಡಲಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಭದ್ರತಾ ಸಿಬ್ಬಂದಿಗಳಾಗಿರುವ ಈ ಇಬ್ಬರ ಪೈಕಿ ಸರಸ್ವತಿ ಬಸ್ಸಿನಲ್ಲಿ ಶ್ರೀರಂಗಪಟ್ಟಣಕ್ಕೆ ಬಂದು ಅಲ್ಲಿಂದ ಲಕ್ಷ್ಮಿಯ ಸ್ಕೂಟರ್ನಲ್ಲಿ ಮೈಸೂರಿಗೆ ಬರುತ್ತಿದ್ದರು. ಎಂದಿನಂತೆ ಇಂದು ಶ್ರೀರಂಗಪಟ್ಟಣದಿಂದ ಬರುತ್ತಿದ್ದಾಗ ಹಿಂದಿನಿಂದ ಕಾರು ಬೆಳಿಗ್ಗೆ 7.30 ಗಂಟೆ ವೇಳೆಗೆ ಸಿದ್ದಲಿಂಗಪುರ ಬಳಿ ಸ್ಕೂಟರ್ಗೆ ಡಿಕ್ಕಿ ಹೊಡೆಯಿತು.
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್ ಹಿಂಬದಿ ಕುಳಿತಿದ್ದ ಸರಸ್ವತಿ ಬಲಬದಿಗೆ ಹಾರಿ ಬಿದ್ದಾಗ, ಸಿಮೆಂಟ್ ಕಾಂಕ್ರೀಟ್ ರಸ್ತೆ ವಿಭಜಕಕ್ಕೆ ಬಡಿದು ತಲೆಗೆ ತೀವ್ರ ಗಾಯಗಳಾಗಿ ರಕ್ತಸ್ರಾವವಾಯಿತು. ಸ್ಕೂಟರ್ ಚಾಲನೆ ಮಾಡುತ್ತಿದ್ದ ಲಕ್ಷ್ಮಿ ಕೂಡ ಗಾಯಗೊಂಡು, ಸರಸ್ವತಿ ಸ್ಥಿತಿ ಕಂಡು ಪ್ರಜ್ಞಾಹೀನರಾದರು. ತಕ್ಷಣ ವಾಹನ ಸವಾರರು ಅವರನ್ನು ಮೈಸೂರಿನ ನಾರಾಯಣ ಹೃದಯಾಲಯಕ್ಕೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೇ ಸರಸ್ವತಿ ಕೊನೆಯುಸಿರೆಳೆದರು ಎಂದು ಪ್ರಕರಣ ದಾಖಲಿಸಿ ಕೊಂಡಿರುವ ಎನ್.ಆರ್. ಸಂಚಾರ ಠಾಣೆ ಇನ್ಸ್ಪೆಕ್ಟರ್ ಪ್ರಸನ್ನಕುಮಾರ್ ತಿಳಿಸಿದ್ದಾರೆ.