ಮೈಸೂರು, ಆ.29(ಆರ್ಕೆ)-ಬೆಳ್ಳಂ ಬೆಳಿಗ್ಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳಿ ಬ್ಬರು, ವೃದ್ಧ ದಂಪತಿಯನ್ನು ಕಟ್ಟಿ ಹಾಕಿ ನಗದು, ಚಿನ್ನಾಭರಣ ದೋಚಿ ಪರಾರಿ ಯಾಗಿರುವ ಘಟನೆ ಮೈಸೂರಿನ ವಿವೇಕಾ ನಂದನಗರದಲ್ಲಿ ಇಂದು ಸಂಭವಿಸಿದೆ.
ವಿವೇಕಾನಂದನಗರ 7ನೇ ಕ್ರಾಸ್ ನಿವಾಸಿಗಳಾದ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿ ನಿಯರ್ ವೀರಭದ್ರಯ್ಯ(91) ಹಾಗೂ ಪತ್ನಿ ಶ್ರೀಮತಿ ರಂಗಮ್ಮ(85) ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಖದೀಮರು 100 ಗ್ರಾಂ ಚಿನ್ನಾಭರಣ ಹಾಗೂ 15,000 ರೂ. ನಗದನ್ನು ದೋಚಿದ್ದಾರೆ.
ಇಂದು ಬೆಳಿಗ್ಗೆ 6.30 ಗಂಟೆ ವೇಳೆಗೆ ದುಷ್ಕರ್ಮಿಗಳು ಬಾಗಿಲು ತಟ್ಟಿದ್ದಾರೆ. ರಂಗಮ್ಮ ಅವರು ಬಾಗಿಲು ತೆರೆಯುತ್ತಿ ದ್ದಂತೆಯೇ ಅವರನ್ನು ತಳ್ಳಿಕೊಂಡು ಏಕಾಏಕಿ ಮನೆ ಒಳಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು, ವೃದ್ಧ ದಂಪತಿಯನ್ನು ಮನೆಯ ರೇಲಿಂಗ್ಗೆ ಕಟ್ಟಿ ಹಾಕಿದರು. ಮೊದಲು ರಂಗಮ್ಮ ಮೈಮೇಲಿದ್ದ ಚಿನ್ನದ ಸರ, ಬಳೆಗಳು ಹಾಗೂ ಉಂಗುರ ಕಸಿದುಕೊಂಡಿದ್ದಾರೆ.
ನಂತರ ಕೊಠಡಿಯ ಅಲ್ಮೇರಾ ಜಾಲಾಡಿ ಅದರ ಲ್ಲಿದ್ದ 15,000 ರೂ. ನಗದು ದೋಚಿದ್ದಾರೆ. ಜೊತೆಗೆ ಮನೆಯನ್ನೆಲ್ಲಾ ಶೋಧಿಸಿದ್ದಾರೆ. ಕೊನೆಗೆ ವೃದ್ಧ ದಂಪತಿಯನ್ನು ಹಾಗೆಯೇ ಬಿಟ್ಟು ಸುಮಾರು 20 ನಿಮಿಷದಲ್ಲಿ ಎಲ್ಲವನ್ನೂ ದೋಚಿ ಪರಾರಿಯಾಗಿದ್ದಾರೆ.
ತದನಂತರ ಹಾಲು ಹಾಕುವವರು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ದೊರೆತ ತಕ್ಷಣ ಸ್ಥಳಕ್ಕಾಗಮಿಸಿದ ಕುವೆಂಪುನಗರ ಠಾಣೆ ಇನ್ಸ್ಪೆಕ್ಟರ್ ರಾಜು ಹಾಗೂ ಸಿಬ್ಬಂದಿ ಮಹಜರು ನಡೆಸಿ ಅಸ್ವಸ್ಥ ರಾಗಿದ್ದ ವೃದ್ಧ ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಿದ್ದಾರೆ. ಶ್ವಾನ ದಳ, ಬೆರಳಚ್ಚು ಮುದ್ರೆ ಘಟಕದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಪರಿ ಶೀಲಿಸಿದರು. ಕೆ.ಆರ್. ಉಪ ವಿಭಾಗದ ಎಸಿಪಿ ಪೂರ್ಣ ಚಂದ್ರ ತೇಜಸ್ವಿ ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಕುವೆಂಪುನಗರ ಠಾಣೆ ಪೊಲೀ ಸರು, ಸಿಸಿ ಕ್ಯಾಮರಾ ಫುಟೇಜಸ್ಗಳನ್ನು ಕಲೆ ಹಾಕಿ ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.
ಮಧ್ಯಪ್ರದೇಶದ ಜಬ್ಬಲ್ಪುರದಲ್ಲಿ ಎಕ್ಸಿಕ್ಯೂಟಿವ್ ಇಂಜಿನಿ ಯರ್ ಆಗಿದ್ದ ವೀರಭದ್ರಯ್ಯ, ನಿವೃತ್ತಿ ನಂತರ ಮೈಸೂ ರಲ್ಲಿ ನೆಲೆಸಿದ್ದಾರೆ. ಮಕ್ಕಳು ವಿದೇಶದಲ್ಲಿರುವುದರಿಂದ ಈ ವೃದ್ಧ ದಂಪತಿ ವಿವೇಕಾನಂದನಗರದ ಕಾರ್ನರ್ ಮನೆಯಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.