ಸಾಮಾಜಿಕ ಅಂತರ ಕಾಯ್ದುಕೊಂಡು ಜುಲೈ 30, 31ರಂದು ಸಿಇಟಿ ಪರೀಕ್ಷೆ
ಮೈಸೂರು

ಸಾಮಾಜಿಕ ಅಂತರ ಕಾಯ್ದುಕೊಂಡು ಜುಲೈ 30, 31ರಂದು ಸಿಇಟಿ ಪರೀಕ್ಷೆ

May 14, 2020

ಬೆಂಗಳೂರು, ಮೇ 13(ಕೆಎಂಶಿ)- ಸಿಇಟಿ ಪರೀಕ್ಷೆ ಯನ್ನು ಜುಲೈ 30 ಮತ್ತು 31 ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಹೊಣೆ ಹೊತ್ತಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್‍ನಾರಾಯಣ್ ಇಂದಿಲ್ಲಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ ಮೊದಲ ವಾರದಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಅದಕ್ಕೂ ಮುನ್ನವೇ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಾಗಿ ಹೇಳಿದರು. ದ್ವಿತೀಯ ಪಿಯುಸಿಯಲ್ಲಿ ಬಾಕಿ ಇರುವ ಒಂದು ಪರೀಕ್ಷೆಯನ್ನು ಆದಷ್ಟು ಬೇಗ ನಡೆಸಲಾಗುವುದು. ಮೇ 31ರೊಳಗೆ ಆನ್‍ಲೈನ್ ಮೂಲಕ ಪಾಠಗಳನ್ನು ಮುಗಿಸಲು ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ವ್ಯಾಸಂಗ ಮಾಡಲಿರುವ ವಿದ್ಯಾರ್ಥಿಗಳಿಗಾಗಿ ಸರಕಾರ ಆರಂಭಿಸಿರುವ ಉeಣಅಇಖಿgo ಆನ್‍ಲೈನ್ ಕೋಚಿಂಗ್ ತರಗತಿಗಳು ಬಹಳಷ್ಟು ಉತ್ತಮ ಪರಿಣಾಮ ಬೀರಿವೆ ಎಂದರು.

ಸಿಇಟಿ ಮತ್ತು ನೀಟ್ ಪರೀಕ್ಷೆ ಬರೆಯುವ ಅಸಂ ಖ್ಯಾತ ವಿದ್ಯಾರ್ಥಿಗಳಿಗೆ ಇದರಿಂದ ಬಹಳಷ್ಟು ಉಪಯೋಗವಾಗುತ್ತಿದೆ ಎಂದು ಅವರು ಹೇಳಿ ದ್ದಾರೆ. ಕಳೆದ ಏಪ್ರಿಲ್ 20ರಂದು ಆರಂಭವಾದ ಈ ತರಬೇತಿಯಿಂದ ಸುಮಾರು 1.69 ಲಕ್ಷ ವಿದ್ಯಾರ್ಥಿಗಳು ಈ ಆನ್‍ಲೈನ್ ಕೋಚಿಂಗ್ ಪ್ರಯೋ ಜನವನ್ನು ಪಡೆದುಕೊಂಡಿದ್ದಾರೆ. ಇದುವರೆಗೂ 55,000 ಮಂದಿ ಆಪ್ ಡೌನ್‍ಲೋಡ್ ಮಾಡಿ ಕೊಳ್ಳಲಾಗಿದೆ. ಒಟ್ಟು 52,957 ವಿದ್ಯಾರ್ಥಿಗಳು ಈವರೆಗೆ ಟೆಸ್ಟ್ ತೆಗೆದುಕೊಂಡಿದ್ದಾರೆ. ಇದರಿಂದ ನಮ್ಮ ಪ್ರಯತ್ನಕ್ಕೆ ಸಾರ್ಥಕತೆ ಬಂದಿದೆ. ಆನ್ ಲೈನ್‍ನಲ್ಲಿ ತರಬೇತಿ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್‍ನೆಟ್ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಆಫ್‍ಲೈನ್‍ನಲ್ಲಿಯೂ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇಂಟರ್ ನೆಟ್ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ಎಂಬಿಯಲ್ಲೂ ಅದು ಕೆಲಸ ಮಾಡುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ನಮ್ಮ ಟೆಕ್ನಿ ಕಲ್ ತಂಡವು ಕಾಲಕಾಲಕ್ಕೆ ಎಲ್ಲ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುತ್ತಿದೆ. ಗೂಗಲ್ ರಿವ್ಯೂದಲ್ಲಿ ಈ ಆಪ್‍ಗೆ 4 ಸ್ಟಾರ್ ರೇಟಿಂಗ್ ಇರುವುದು ನಮ್ಮ ಕೆಲಸಕ್ಕೆ ಮತ್ತಷ್ಟು ಬಲ ತುಂಬಿದೆ ಎಂದು ಅವರು ಹೇಳಿದ್ದಾರೆ. ಸಿಇಟಿ, ನೀಟ್‍ಗೆ ಅನುಕೂಲ ವಾಗುವ ವಿಡಿಯೋಗಳು, ಟೆಸ್ಟುಗಳು ಹಾಗೂ ಪಠ್ಯಗಳ ವಿವರಗಳು ಈ ಆನ್‍ಲೈನ್ ತರಬೇತಿಯಲ್ಲಿವೆ. ಈಗಾಗಲೇ ಕೋರ್ಸ್ ಆರಂಭವಾಗಿದ್ದು, 1,70,510 ಜನರು ಈ ಪೇಜ್ ನೋಡಿದ್ದಾರೆ. 77,983 ವಿದ್ಯಾರ್ಥಿಗಳು ಲಾಗಿನ್ ಆಗಿದ್ದಾರೆ. 38 ಸಾವಿರ ವಿದ್ಯಾರ್ಥಿ ಗಳು ಆಪ್ ಮೂಲಕ ಲಾಗಿನ್ ಆಗಿದ್ದಾರೆ. 38 ಸಾವಿರ ವಿದ್ಯಾರ್ಥಿಗಳು ವೆಬ್ ಪೋರ್ಟಲ್ ಮೂಲಕ ಲಾಗಿನ್ ಆಗಿದ್ದಾರೆ. ವಿದ್ಯಾರ್ಥಿಗಳಿಗೆ ಮತ್ತಷ್ಟು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಹಾಯವಾಣಿಯನ್ನು ಕೂಡ ಆರಂಭ ಮಾಡಲಾಗಿದೆ ಅವರು ಮಾಹಿತಿ ನೀಡಿದ್ದಾರೆ. ಉಳಿದಂತೆ ಎಂಜಿನಿಯರಿಂಗ್ ಕಾಲೇಜ್ ಮತ್ತು ಪದವಿ ಕಾಲೇಜುಗಳ ಪಠ್ಯದ ಬಗ್ಗೆ ಈಗಾಗಲೇ ಕೆಲ ಮಹತ್ವದ ಸೂಚನೆಗಳನ್ನು ನೀಡಲಾಗಿದೆ. ಪಾಠಗಳನ್ನು ಆನ್‍ಲೈನ್ ಮೂಲಕ ಮೇ 31ರೊಳಗೆ ಮುಗಿಸಲು ತಿಳಿಸಲಾಗಿದೆ. ನಂತರ ಪರೀಕ್ಷೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಎಲ್ಲಾ ಅಗತ್ಯ ಕ್ರಮ: ಇದೇ ವೇಳೆಗೆ ಸಿಇಟಿ ಪರೀಕ್ಷೆಯನ್ನು ನಿರಾತಂಕವಾಗಿ ನಡೆಸಲು ಬೇಕಾದ ಎಲ್ಲಾ ಕ್ರಮಗಳನ್ನು ಸರಕಾರ ಕೈಗೊಳ್ಳಲಿದೆ. ಕೊರೊನಾ ಹಿನ್ನೆಲೆಯಲ್ಲೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗುವುದು. ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ ಸೇರಿದಂತೆ ಅಗತ್ಯ ಕ್ರಮಗಳನ್ನು ತಪ್ಪದೇ ಕೈಗೊಳ್ಳಲಾಗುವುದು, ಕೊಠಡಿಗಳಲ್ಲಿ ಕಡಿಮೆ ವಿದ್ಯಾರ್ಥಿಗಳು ಇರುತ್ತಾರೆ, ಪರೀಕ್ಷಾ ಕೇಂದ್ರಗಳೂ ಹೆಚ್ಚಾಗಲಿವೆ. ಎಂದಿನಂತೆ ಆಫ್‍ಲೈನ್‍ನಲ್ಲಿ ಈ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಡಿಸಿಎಂ ಧೈರ್ಯ ತುಂಬಿದ್ದಾರೆ.

ಸಿಇಟಿ ಪರೀಕ್ಷೆ ಮೂಲಕ ಎಂಜಿನಿಯರಿಂಗ್‍ನಲ್ಲಿ 40 ಸಾವಿರ ಸೀಟುಗಳು ಭರ್ತಿ ಆಗಲಿವೆ. ಸೀಟ್ ಬ್ಲಾಕಿಂಗ್, ಸೀಟ್ ಸರೆಂಡರ್ ದಂಧೆ ಬಗ್ಗೆ ಈಗಾಗಲೇ ತನಿಖಾ ತಂಡ ರಚಿಸಲಾಗಿದೆ. ವರದಿ ಕೈಸೇರಿದ ಬಳಿಕ ಕ್ರಮ ಕೈಗೊಳ್ಳಲು ಸಿದ್ಧರಿದ್ದೇವೆ. ಮಾಪ್ ಅಪ್ ರೌಂಡ್‍ಗೆ ಮುನ್ನ ಸೀಟ್ ಸರೆಂಡರ್ ಮಾಡಿದರೆ ಸಮಸ್ಯೆ ತಪ್ಪುತ್ತದೆ ಎಂಬ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.

ಸೀಟ್ ಬ್ಲಾಕಿಂಗ್ ವಿರುದ್ಧ ಕ್ರಮ: ಮೆಡಿಕಲ್ ಸೀಟ್ ಬ್ಲಾಕಿಂಗ್ ವಿಚಾರದಲ್ಲೂ ಸರಕಾರ ಕಠಿಣವಾಗಿ ವರ್ತಿಸಲಿದೆ. ಈ ಬಗ್ಗೆ ಈಗಾಗಲೇ ಸಮಿತಿ ರಚನೆ ಮಾಡಿ ವರದಿ ನೀಡಿದೆ. ವರದಿಯಲ್ಲಿ ಏನಿದೆ ಎಂಬುದನ್ನು ಈಗಿನ ಸಚಿವರು ನೋಡಿ ಕ್ರಮ ತೆಗೆದುಕೊಳ್ತಾರೆ. ಎಂಜಿನಿಯರಿಂಗ್ ಸೀಟ್ ಶುಲ್ಕ ಮಾಡಬೇಕು ಎಂದು ಮನವಿ ಬಂದಿದೆ. ಈ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಮಾಡಿಲ್ಲ. ಇದು ಕೊರೊನಾ ಸಂದರ್ಭ ಆಗಿರುವುದರಿಂದ ಈ ಬಾರಿ ಅಡ್ಮಿಷನ್ ವಿಚಾರವೇ ದೊಡ್ಡದಾಗಲಿದೆ. ಹೀಗಾಗಿ ಶುಲ್ಕ ಹೆಚ್ಚಳದ ಬಗ್ಗೆ ವೈಜ್ಞಾನಿಕ ದೃಷ್ಟಿಯಿಂದ ಚಿಂತನೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೆಲ ಪ್ರಶ್ನೆಗಳಿಗೆ ಡಿಸಿಎಂ ಉತ್ತರ ನೀಡಿದ್ದಾರೆ.

Translate »