ಮೈಸೂರು,ಜು.6(ಆರ್ಕೆ)-ಕೋವಿಡ್-19 ಸೋಂಕು ದೃಢಪಟ್ಟ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡುವ ಜೊತೆಗೆ ಮನೆಯಲ್ಲೂ ಪ್ರತ್ಯೇಕ ವಾಗಿರಿಸುವ ಬಗ್ಗೆ ಸರ್ಕಾರ ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಸೋಂಕು ದೃಢಪಟ್ಟಿರುವ ವ್ಯಕ್ತಿಯನ್ನು ಹೋಂ ಕ್ವಾರಂಟೈನ್ನಲ್ಲಿಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೆಲ ನಿಬಂಧನೆಗೊಳಪಟ್ಟು ಅನು ಮತಿ ನೀಡಿದ್ದು, ಆ ಕುರಿತು ಜಿಲ್ಲಾ ಸಾಂಕ್ರಾಮಿಕ ರೋಗಗಳ ಅಧಿಕಾರಿ ಡಾ.ಚಿದಂಬರ ಅವರು ಕೋವಿಡ್-19ರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗೆ ಸೋಮವಾರ ಮೈಸೂ ರಿನ ನಜರ್ಬಾದ್ನಲ್ಲಿರುವ ಜಿಲ್ಲಾ ಆರೋಗ್ಯಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ತರಬೇತಿ ನೀಡಿದರು.
ಸೋಂಕಿನ ಲಕ್ಷಣ ರಹಿತರು, ಲಕ್ಷಣ ಅಥವಾ ಸೌಮ್ಯ ಲಕ್ಷಣ ಕಂಡುಬಂದವರನ್ನು ಮನೆಯಲ್ಲೇ ಪ್ರತ್ಯೇಕವಾಗಿರಿಸುವುದು. ಅಂತಹ ಮನೆಯಲ್ಲಿ ಮಾರ್ಗ ಸೂಚಿ ಪಾಲಿಸಲು ಅನುಕೂಲವಾಗುವಂತೆ ಟೆಲಿ ಕನ್ಸಲ್ಟೇಷನ್ ಸಂಪರ್ಕ ಕಲ್ಪಿಸಬೇಕು. ಅದೇ ರೀತಿ ಸೋಂಕು ದೃಢಪಟ್ಟ ವ್ಯಕ್ತಿಯನ್ನೂ ಮನೆಯಲ್ಲಿರಿಸಿ ಪ್ರತೀ ದಿನ ಅವರ ಆರೋಗ್ಯದ ಮೇಲೆ ನಿಗಾ ಇರಿಸಬೇಕು. ಪಲ್ಸ್ ಆಕ್ಸಿಮೀಟರ್, ಡಿಜಿಟಲ್ ಥರ್ಮಾ ಮೀಟರ್ನಿಂದ ತಪಾಸಣೆ ಮಾಡಿಕೊಳ್ಳಲು ಸಲಕರಣೆ ಹೊಂದು ವಂತೆ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ.
ವ್ಯಕ್ತಿಯನ್ನು ಮನೆಯಲ್ಲಿ ಪ್ರತ್ಯೇಕವಾಗಿರಿಸುವ ವಿಷಯ ಕುಟುಂಬದ ಸದಸ್ಯರಿಗೆ, ಅಕ್ಕಪಕ್ಕದ ಮನೆಯವರು, ಚಿಕಿತ್ಸೆ ನೀಡುವ ವೈದ್ಯರಿಗೆ ತಿಳಿದಿರಬೇಕು. ಆತ ಮನೆಯ ಒಂದು ಕೊಠಡಿಯಲ್ಲಿ ಇತರರಿಂದ ಪ್ರತ್ಯೇಕವಾಗಿರ ಬೇಕು, ಅವರಿಗೆ ಜ್ವರ, ಶೀತ, ಕೆಮ್ಮು, ಗಂಟಲು ನೋವು ಹಾಗೂ ಉಸಿರಾಟದ ತೊಂದರೆಗಳಂತಹ ಲಕ್ಷಣ ಗಳ ಬಗ್ಗೆ ಆಗಿಂದಾಗ್ಗೆ ವೈದ್ಯರು ವಿಚಾರಿಸುತ್ತಿರ ಬೇಕೆಂದೂ ಡಾ.ಚಿದಂಬರ ತಿಳಿಸಿದರು.
ಸಿಬ್ಬಂದಿಗಳಿಗೆ ಸೂಚನೆ: ಹೋಂ ಕ್ವಾರಂಟೈನ್ನಲ್ಲಿ ರುವ ವ್ಯಕ್ತಿ ಕಟ್ಟುನಿಟ್ಟಾಗಿ ಪ್ರತ್ಯೇಕವಾಗಿದ್ದಾರೆಯೇ ಎಂಬು ದನ್ನು ಖಾತರಿಪಡಿಸಿಕೊಂಡು ಮನೆಯ ಮುಖ್ಯ ದ್ವಾರದ ಮೇಲೆ ಹೋಂ ಕ್ವಾರಂಟೈನ್ ಬಗ್ಗೆ ನೋಟೀಸ್ ಅಂಟಿಸ ಬೇಕು. 17ದಿನಗಳವರೆಗೆ ಮನೆಯಲ್ಲೇ ಇರುವ ಬಗ್ಗೆ ವ್ಯಕ್ತಿ ಕೈ ಮೇಲೆ ಮುದ್ರೆ ಹಾಕಬೇಕು. ಉಸಿರಾಟದ ತೊಂದರೆ, ಆಮ್ಲಜನಕ ಶೇ.94ಕ್ಕಿಂತ ಕಡಿಮೆಯಾ ದಲ್ಲಿ 24 ಗಂಟೆ ಕಾಲ ನಿರಂತರ ಜ್ವರ, ಎದೆನೋವು ನಂತಹ ಲಕ್ಷಣಗಳು ಕಂಡು ಬಂದಲ್ಲಿ ಮೇಲ್ವಿಚಾರಣೆ ನಡೆಸುವ ಆರೋಗ್ಯ ಇಲಾಖೆ ಸಿಬ್ಬಂದಿ ತಡಮಾಡದೆ ವೈದ್ಯಾಧಿಕಾರಿಗಳ ಗಮನಕ್ಕೆ ತರಬೇಕೆಂದು ಡಾ. ಚಿದಂಬರ ತಿಳಿಸಿದರು.
ಹೋಂ ಕ್ವಾರಂಟೈನ್ನಲ್ಲಿರುವ ವ್ಯಕ್ತಿ ಶಿಷ್ಟಾಚಾರ ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅಂತಹವರನ್ನು ಕೊರೊನಾ ಆರೈಕೆ ಕೇಂದ್ರ (ಕೋವಿಡ್ -19 ಆಸ್ಪತ್ರೆ)ಕ್ಕೆ ಸ್ಥಳಾಂತರಿಸಬೇಕು. ಆ ವ್ಯಕ್ತಿ ಮನೆಯ ಲ್ಲಿರುವಾಗ ಎನ್-95 ಮಾಸ್ಕ್ ಧರಿಸಬೇಕು, ಸೋಪು ಮತ್ತು ನೀರಿನಿಂದ ಆಗಿಂದಾಗ್ಗೆ ಕೈ ತೊಳೆದು ಕೊಳ್ಳ ಬೇಕು ಎಂದೂ ತಿಳಿಸಿದರು. ವ್ಯಕ್ತಿಯು ಪೌಷ್ಠಿಕ ಆಹಾರ ಸೇವಿಸಬೇಕು, ಧೂಮಪಾನ, ಮದ್ಯಪಾನ, ತಂಬಾಕು ಸೇವನೆಯನ್ನು ನಿರ್ಬಂಧಿಸಬೇಕು, ಅವರಿಗೆ ಆರೈಕೆ ಮಾಡುವವರೂ ಸಹ ಕೊರೊನಾ ವೈರಸ್ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವಂತೆ ತಿಳುವಳಿಕೆ ನೀಡಬೇಕು ಎಂದು ಡಾ.ಚಿದಂಬರ ಸಲಹೆ ನೀಡಿದರು.