ಮೈಸೂರು, ಆ.24(ಎಂಕೆ)- ನಗರದ ಸಂಚಾರ ಪೊಲೀಸ್ ಠಾಣೆ ಯೊಂದರ ಮೂವರು ಕಾನ್ಸ್ಟೇಬಲ್ಗಳ ಸಮಯಪ್ರಜ್ಞೆಯಿಂದ ದೇವರಾಜ ಮಾರುಕಟ್ಟೆ ಬಳಿ ಭಾರಿ ಬೆಂಕಿ ಅನಾಹುತ ತಪ್ಪಿದ್ದು, ಪೊಲೀಸರ ಕಾರ್ಯವೈಖರಿಗೆ ಅಪಾರ ಪ್ರಶಂಸೆ ವ್ಯಕ್ತವಾಗಿದೆ.
ಗೌರಿ-ಗಣೇಶ ಹಬ್ಬದ ದಿನದಂದು ದೇವರಾಜ ಮಾರುಕಟ್ಟೆಯ ಡೂಪ್ಲಿನ್ ಕಾಂಪ್ಲೆಕ್ಸ್ನಲ್ಲಿರುವ ಮೈಸೂರು ಕಾಫಿ ವಕ್ರ್ಸ್ ಮಳಿಗೆ ಯಲ್ಲಿ ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ದೇವರಾಜ ಸಂಚಾರ ಪೊಲೀಸ್ ಠಾಣೆ ಹೆಡ್ ಕಾನ್ಸ್ಸ್ಟೇಬಲ್ ಶಿವಣ್ಣ, ಕಾನ್ಸ್ಸ್ಟೇಬಲ್ಗಳಾದ ಶಶಿಕಾಂತ್ ಮತ್ತು ಸುಗು ಅವರು, ಮಳಿಗೆ ಎದುರು ಬೆಂಕಿ ಹೊತ್ತಿ ಉರಿಯುತ್ತಿದ್ದನ್ನು ಗಮನಿಸಿದ್ದಾರೆ.
ತಕ್ಷಣ ಅಗ್ನಿಶಾಮಕ ಠಾಣೆಗೆ ಕರೆಮಾಡಿ ಮಾಹಿತಿ ನೀಡಿದ ಅವರು, ಅಗ್ನಿಶಾಮಕ ವಾಹನ ಬರುವಷ್ಟರಲ್ಲಿ ನೀರನ್ನು ತಂದು ಹಾಕಿ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿ, ಉಂಟಾಗುತ್ತಿದ್ದ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.
ಸನ್ಮಾನ: ಬೆಂಕಿ ಅನಾಹುತ ತಪ್ಪಿಸಿದ ದೇವರಾಜ ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿಗಳಿಗೆ ಡೂಪ್ಲಿನ್ ಕಾಂಪ್ಲೆಕ್ಸ್ ವರ್ತಕರ ಸಂಘದಿಂದ ಸೋಮವಾರ ಸನ್ಮಾನಿಸಲಾಯಿತು. ಈ ವೇಳೆ ಇನ್ಸ್ಸ್ಪೆಕ್ಟರ್ ಗಳಾದ ಮುನಿಯಪ್ಪ, ಅರುಣ್, ಸಬ್ಇನ್ಸ್ಸ್ಪೆಕ್ಟರ್ ಲೇಪಾಕ್ಷ, ವರ್ತ ಕರ ಸಂಘದ ಅಧ್ಯಕ್ಷ ಸತ್ಯನಾರಾಯಣ ಶೆಟ್ಟಿ ಮತ್ತಿತರರಿದ್ದರು.