ಮೈಸೂರು, ಅ.19 (ಆರ್ಕೆಬಿ)- ಕ್ರಾಫರ್ಡ್ ಭವನದಲ್ಲಿ ಸೋಮವಾರ ಒಂದೆಡೆ ಮೈಸೂರು ವಿವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯುತ್ತಿದ್ದರೆ, ಅದೇ ವೇಳೆ ಮತ್ತೊಂ ದೆಡೆ ವಿನೂತನ ರೀತಿಯಲ್ಲಿ ಮೈಸೂರು ವಿವಿ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಪಕೋಡ ಮಾರಾಟ ಮಾಡಿ, ಪ್ರತಿಭಟನೆ ನಡೆಸಿದರು.
ದಲಿತ ವಿದ್ಯಾರ್ಥಿ ಒಕ್ಕೂಟದ ಆಶ್ರಯದಲ್ಲಿ ವಿದ್ಯಾರ್ಥಿಗಳು ಸಾಂಕೇತಿಕವಾಗಿ ಪಕೋಡ ಮಾರಾಟ ಮಾಡಿದರು. ಮೈಸೂರು ವಿವಿ ಪ್ರಸ್ತುತ ಹಾಗೂ ನಿರ್ಗಮಿತ ವಿದ್ಯಾರ್ಥಿಗಳು ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
`ಪ್ರಧಾನಿಗಳೇ, ಮಾತು ಸಾಕು ಕೆಲಸ ಬೇಕು’ ಎಂದು ಪ್ರಧಾನಿಗೆ ಪ್ರತಿಭಟನಾ ವಿದ್ಯಾರ್ಥಿಗಳು ಆಗ್ರಹಿಸಿದರು. ವಿವಿಗಳು ವಿದ್ಯಾರ್ಥಿಗಳಿಗೆ ಕೇವಲ ಪದವಿ ನೀಡುವ ಕಾರ್ಖಾನೆಗಳಾಗಿವೆ. ವಿದ್ಯಾರ್ಥಿಗಳಿಗೆ ಕೌಶಾಲ್ಯಧಾರಿತ ಮತ್ತು ಉದ್ಯೋಗ ಕೇಂದ್ರಿತ ಶಿಕ್ಷಣ ನೀಡುವಂತಾಗಬೇಕು ಎಂದು ಒತ್ತಾಯಿಸಿದರು. ಕೆಲಸ ಕೊಡಿ ಎಂದರೆ ಪ್ರಧಾನಿ ಮೋದಿ `ಪಕೋಡ ಮಾರಿ’ ಎಂದು ವ್ಯಂಗ್ಯಭರಿತ ಮಾತುಗಳನ್ನಾಡುತ್ತಾರೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯೇ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.