ಶಬ್ದಕ್ಕೆ ಸ್ವಲ್ಪ ಬೆದರಿದ ಲಕ್ಷಿö್ಮÃ, ಗೋಪಾಲಸ್ವಾಮಿ
ಕೊನೆ ತಾಲೀಮಿಗೆ ಹೆಚ್ಚಿನ ಶಬ್ದದ ಮದ್ದು ಬಳಕೆ
ರಸ್ತೆ ಬದಿ ನಿಂತು ತಾಲೀಮು ವೀಕ್ಷಿಸಿದ ಪ್ರವಾಸಿಗರು
ಮೈಸೂರು,ಅ.೮(ಎಂಟಿವೈ)- ನಾಡ ಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ. ಈ ಹಿನ್ನೆಲೆ ಯಲ್ಲಿ ಗಜಪಡೆ ಹಾಗೂ ಅಶ್ವಪಡೆಗೆ ಶುಕ್ರವಾರ ಅಂತಿಮ ಹಂತದ ಕುಶಾಲ ತೋಪು ಸಿಡಿಸುವ ತಾಲೀಮು ಯಶಸ್ವಿ ಯಾಗಿ ನಡೆಸಲಾಯಿತು.
ಅ.೧೫ರಂದು ಅರಮನೆ ಆವರಣದಲ್ಲಿ ನಡೆಯಲಿರುವ ಜಂಬೂಸವಾರಿ ದಸರಾ ಗಜಪಡೆ ಹಾಗೂ ಅಶ್ವರೋಹಿ ದಳದ ಕುದುರೆಗಳನ್ನು ಸಜ್ಜು ಗೊಳಿಸಲಾಗುತ್ತಿದ್ದು, ಈಗಾಗಲೇ ಎರಡು ಬಾರಿ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಗಿತ್ತು. ಅಂತಿಮ ಹಂತದ ತಾಲೀಮಿನಲ್ಲಿ ಜಂಬೂ ಸವಾರಿ ದಿನದಂದು ಬಳಸುವ ಪೂರ್ಣ ಪ್ರಮಾಣದ ಸಿಡಿ ಮದ್ದು ಬಳಸಿ ಕುಶಾಲ ತೋಪು ಸಿಡಿಸಲಾಯಿತು. ಈ ಹಿಂದೆ ನಡೆದ ತಾಲೀಮಿಗಿಂತ ಇಂದು ನಡೆದ ತಾಲೀಮಿನಲ್ಲಿ ಹೆಚ್ಚು ಶಬ್ದ ಕೇಳಿಸಿದ್ದರಿಂದ ಎರಡು ಆನೆಗಳು ಸ್ವಲ್ಪ ಬೆಚ್ಚಿದವು.
ಅರಮನೆಯ ವರಾಹ ದ್ವಾರದ ಸಮೀಪ ಕೋಟೆ ಮಾರಮ್ಮ ದೇವಾಲಯದ ಬಳಿಯಿರುವ ಪ್ರವಾಸಿ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ ಇಂದು ಮಧ್ಯಾಹ್ನ ನಡೆದ ಸಿಡಿಮದ್ದಿನ ತಾಲೀಮಿನಲ್ಲಿ ೭ ಫಿರಂಗಿ ಬಳಸಿ, ತಲಾ ೩ ಸುತ್ತಿನಂತೆ ೨೧ ಬಾರಿ ಕುಶಾಲತೋಪು ಸಿಡಿಸಲಾಯಿತು. ಅಂತಿಮ ಹಂತದ ತಾಲೀಮಾಗಿದ್ದರಿಂದ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆಯಲ್ಲಿ ವಿಕ್ರಮ ಆನೆಯನ್ನು ಹೊರತುಪಡಿಸಿ ಉಳಿದ ೭ ಆನೆಗಳು ಭಾಗವಹಿಸಿದ್ದವು. ಅಲ್ಲದೆ ಅಶ್ವಪಡೆಯ ೩೦ ಕುದುರೆಯನ್ನು ತಾಲೀಮಿಗೆ ಕರೆತರಲಾಗಿತ್ತು. ಆನೆ ಹಾಗೂ ಕುದುರೆಗಳನ್ನು ಪರಸ್ಪರ ಸಾಲಾಗಿ ನಿಲ್ಲಿಸಿ ಸಿಡಿ ಮದ್ದು ತಾಲೀಮು ನಡೆಸಲಾಯಿತು.
ಇಂದು ನಡೆದ ತಾಲೀಮಿ ನಲ್ಲಿ ಹೆಚ್ಚು ಶಬ್ದ ಕೇಳಿಸಿದ್ದರಿಂದ ಗೋಪಾಲಸ್ವಾಮಿ ಮತ್ತು ಲಕ್ಷಿö್ಮÃ ಆನೆಗಳು ಸಣ್ಣ ಪ್ರಮಾಣ ದಲ್ಲಿ ಬೆಚ್ಚಿದ್ದು ಬಿಟ್ಟರೆ ಬೇರೆ ಎಲ್ಲಾ ಆನೆ ಗಳು ಧೈರ್ಯದಿಂದ ಇದ್ದದ್ದು ಅಧಿಕಾರಿ ಗಳಲ್ಲಿ ಮತ್ತಷ್ಟು ಭರವಸೆ ಮೂಡಿಸಿದವು.
ಸಚಿವರಿಂದ ವೀಕ್ಷಣೆ: ಇಂದು ಮಧ್ಯಾಹ್ನ ನಡೆದ ಕೊನೆಯ ಸಿಡಿಮದ್ದಿನ ತಾಲೀಮನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವೀಕ್ಷಿಸಿದರು. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಎಫ್ ಡಾ.ವಿ.ಕರಿಕಾಳನ್, ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ, ಶಿವರಾಜ್ (ಸಿಎಆರ್), ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್, ಆರ್ಎಫ್ಓ ಕೆ.ಸುರೇಂದ್ರ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.
ದಸರಾ ಆನೆಗಳು ಆರೋಗ್ಯದಿಂದಿವೆ: ಡಿಸಿಎಫ್
ಮೈಸೂರು, ಅ.೮(ಎಂಟಿವೈ)- ಜಂಬೂಸವಾರಿ ಮೆರವಣ ಗೆಯಲ್ಲಿ ಭಾಗವಹಿಸ ಲಿರುವ ಐದು ಆನೆಗಳು ಆರೋಗ್ಯದಿಂದ ಕೂಡಿದ್ದು, ಅಂತಿಮ ಹಂತದ ಸಿಡಿಮದ್ದು ತಾಲೀಮಿನಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿವೆ ಎಂದು ಡಿಸಿಎಫ್ ಡಾ.ವಿ.ಕರಿಕಾಳನ್ ತಿಳಿಸಿದ್ದಾರೆ. ಅರಮನೆಯ ವರಹ ದ್ವಾರದ ಬಳಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಸಾಲಿನಲ್ಲಿ ೮ ಆನೆಗಳನ್ನು ಕರೆತರಲಾಗಿದ್ದು, ಇದರಲ್ಲಿ ಐದು ಆನೆಗಳು ಜಂಬೂ ಸವಾರಿ ಮೆರವಣ ಗೆಯಲ್ಲಿ ಪಾಲ್ಗೊಳ್ಳಲು ಸಿದ್ಧವಾಗಿದ್ದು, ಎಲ್ಲವೂ ಆರೋಗ್ಯ ದಿಂದ ಕೂಡಿವೆ ಎಂದರು.
ಸಾಮಾನ್ಯವಾಗಿ ಜಂಬೂಸವಾರಿ ಮೆರವಣ ಗೆಗೆ ೫ ಆನೆಗಳು ಸಾಕು. ಒಂದು ಆನೆ ಅಂಬಾರಿ ಹೊತ್ತರೆ, ಎರಡು ಹೆಣ್ಣಾನೆ ಕುಮ್ಕಿ ಆನೆಯಾಗಿ ಸಾಗುತ್ತವೆ. ಇದರೊಂದಿಗೆ ಒಂದು ನಿಶಾನೆ ಆನೆಯಾಗಿ ಮತ್ತೊಂದು ನೌಪತ್ ಆನೆಯಾಗಿ ಸಾಗುವ ಪದ್ಧತಿಯಿದೆ ಎಂದರು. ಪಟ್ಟದ ಆನೆಯಾಗಿದ್ದ ವಿಕ್ರಮನಿಗೆ ಮದವೇರಿದೆ. ಅದು ಈಗ ನಿಯಂತ್ರಣಕ್ಕೆ ಬಂದಿದ್ದು, ಮಾವುತ ಮತ್ತು ಕಾವಾಡಿಯ ಮಾತು ಕೇಳುತ್ತಿದೆ. ಆದರೂ ಮದ ಇಳಿಯುವ ವೇಳೆಯಲ್ಲೂ ಅದಕ್ಕೆ ಕೋಪವಿರುವು ದರಿಂದ ತಾಲೀಮಿನಿಂದ ದೂರ ಇಡಲಾಗಿತ್ತು ಎಂದು ಅವರು ವಿವರಿಸಿದರು.
ಇಂದು ಶ್ರೀರಂಗಪಟ್ಟಣ ದಸರೆಗೆ ೨ ಆನೆ ಪ್ರಯಾಣ: ಸರ್ಕಾರದ ಆದೇಶದ ಮೇರೆಗೆ ಶ್ರೀರಂಗಪಟ್ಟಣದ ದಸರೆಗೆ ಎರಡು ಆನೆಯನ್ನು ಕಳುಹಿಸಿ ಕೊಡಲಾಗುತ್ತಿದೆ. ಗೋಪಾಲಸ್ವಾಮಿ ಹಾಗೂ ಕಾವೇರಿ ಆನೆ ನಾಳೆ (ಶನಿವಾರ) ರಾಹುಕಾಲ ಮುಗಿದ ನಂತರ ಶ್ರೀರಂಗಪಟ್ಟಣಕ್ಕೆ ಪ್ರಯಾಣ ಬೆಳೆಸಲಿವೆ. ಅಲ್ಲಿನ ಕಾರ್ಯಕ್ರಮ ಸಂಜೆಯೊಳಗೆ ಮುಗಿಯಲಿದ್ದು ಮೈಸೂರು ಅರಮನೆ ಆನೆಗಳು ವಾಪಸ್ಸಾಗಲಿವೆ ಎಂದು ಡಿಸಿಎಫ್ ಡಾ.ವಿ.ಕರಿಕಾಳನ್ ತಿಳಿಸಿದ್ದಾರೆ.