ಮಠಾಧೀಶರು, ಸಾಹಿತಿಗಳು, ಕನ್ನಡಪರ ಸಂಘಟನೆಗಳ ಅಪಸ್ವರಕ್ಕೆ ಮಣಿದ ಸರ್ಕಾರ ಪಠ್ಯ ಪರಿಷ್ಕರಣೆ ಮಾರ್ಪಾಡಿಗೆ ಚಿಂತನೆ
News

ಮಠಾಧೀಶರು, ಸಾಹಿತಿಗಳು, ಕನ್ನಡಪರ ಸಂಘಟನೆಗಳ ಅಪಸ್ವರಕ್ಕೆ ಮಣಿದ ಸರ್ಕಾರ ಪಠ್ಯ ಪರಿಷ್ಕರಣೆ ಮಾರ್ಪಾಡಿಗೆ ಚಿಂತನೆ

June 2, 2022

ಬೆಂಗಳೂರು, ಜೂ.1 (ಕೆಎಂಶಿ)- ಮಠಾಧೀಶರು, ಕನ್ನಡಪರ ಸಂಘಟನೆಗಳು, ಸಾಹಿತಿಗಳು ಪಠ್ಯಪುಸ್ತಕ ಪರಿಷ್ಕರಣೆಗೆ ಅಪಸ್ವರ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಕೆಲವು ಪಠ್ಯ ಪರಿಷ್ಕರಣೆಯಲ್ಲಿ ಮಾರ್ಪಾಡಿಗೆ ಮುಂದಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಷ್ಕ ರಣೆಗೆ ಸಂಬಂಧಿಸಿದಂತೆ ಸಮಗ್ರ ವರದಿಯನ್ನು ನಾಳೆ (ಗುರು ವಾರ) ತಮಗೆ ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ಅವ ರಿಗೆ ಸೂಚಿಸಿದ್ದಾರೆ.

ಕುವೆಂಪು ಹಾಗೂ ಬಸವಣ್ಣನವರ ಬಗ್ಗೆ ಪರಿಷ್ಕರಣೆ ಸಂಬಂಧ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆ ಯಲ್ಲಿ ಮುಖ್ಯಮಂತ್ರಿಯವರು ವರದಿ ಕೇಳಿದ್ದಾರೆ. ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಪಠ್ಯಪುಸ್ತಕ ಪರಿಷ್ಕರಣೆಯ ವರದಿ ಪರಿಶೀಲನೆ ನಂತರ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪಠ್ಯಪುಸ್ತಕದ ಪರಿಷ್ಕರಣೆಗೆ ಸಂಬಂಧಿಸಿದಂತೆ, ಈಗಾಗಲೇ ಪಠ್ಯದಲ್ಲಿರುವ ತಮ್ಮ ಪಾಠಗಳನ್ನು ತೆಗೆಯುವಂತೆ ಕೆಲ ಸಾಹಿತಿಗಳು ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪಠ್ಯಪುಸ್ತಕ ಪರಿಷ್ಕರಣೆಯ ಬಗ್ಗೆ ಸಮಗ್ರ ವರದಿಯನ್ನು ಕೇಳಲಾಗಿದೆ. ಸ್ವಾಮೀಜಿಗಳು ಹಾಗೂ ಇತರರ ಅಭಿಪ್ರಾಯ ಗಳನ್ನು ಪರಿಗಣಿಸಲಾಗುವುದು. ಈ ಎಲ್ಲ ವಿಚಾರಗಳ ಬಗ್ಗೆ ಸಮಗ್ರ ವರದಿ ಹಾಗೂ ವಾಸ್ತವಾಂಶವನ್ನು ತಿಳಿಸುವಂತೆ ಶಿಕ್ಷಣ ಸಚಿವರಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ವರದಿ ಪಡೆದು, ಪರಿಶೀಲಿಸಿದ ನಂತರ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಾಗುವುದು. ನಾಳೆ (ಗುರುವಾರ) ವರದಿ ದೊರೆಯ ಲಿದ್ದು, ಪಠ್ಯಗಳನ್ನು ವಾಪಸ್ಸು ಪಡೆಯುತ್ತೇವೆ ಎನ್ನುವ ಸಾಹಿತಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು ಎಂದರು.

ಅಧ್ಯಕ್ಷರಾಗಿರುವ ವ್ಯಕ್ತಿ ಮೆಟ್ರೋದಲ್ಲಿ ಕನ್ನಡ ಬಳಕೆ ಮತ್ತು ಹಿಂದಿ ಹೇರಿಕೆ ವಿಚಾರ ಸಂದರ್ಭದಲ್ಲಿ ‘ನನ್ನ ಮೇಲೆ ಹೇರಿಕೆಯಾದ ಮೊದಲ ಭಾಷೆ ಕನ್ನಡ’ ಎಂದಿದ್ದಾರೆ. ಅಂತಹ ವ್ಯಕ್ತಿಯನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದರ ಜತೆಗೆ, ಕನ್ನಡದ ಬಾವುಟದ ಬಗ್ಗೆ ಜನ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಇಂತಹ ಕನ್ನಡ ಬಾವುಟ ಬೇಕು ಎಂಬ ವಿಚಾರ ಚರ್ಚೆ ಸಂದರ್ಭದಲ್ಲಿ ಅವರು ಹಗ್ಗದ ಮೇಲೆ ಇರುವ ಒಳಉಡುಪುಗಳನ್ನು ತೋರಿಸಿ `ಇಲ್ಲಿಯೂ ಸಾಕಷ್ಟು ಬಾವುಟ ಹಾರಾಡುತ್ತಿವೆ’ ಎಂದು ಹೇಳಿ ನಾಡ ಬಾವುಟಕ್ಕೆ ಅಪಮಾನ ಮಾಡಿದ ದುರ್ದೈವಿ ಹಾಗೂ ಕೊಳಕು ಮನುಷ್ಯ ಎಂಬ ಮಾತು ಕೇಳಿ ಬಂದಿದೆ.
ಕುವೆಂಪು ಅವರು ಕರ್ನಾಟಕ ಏಕೀಕರಣಕ್ಕೂ ಮುನ್ನವೇ ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಅಂದರೆ 1924ರಲ್ಲಿ `ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಎಂದು ಬರೆದು, ಆಗಲೇ ಭಾರತ ರಾಷ್ಟ್ರಕ್ಕೆ ಹಾಗೂ ಕರ್ನಾಟಕ ರಾಜ್ಯಕ್ಕೆ ಇದ್ದ ಬಾಂಧವ್ಯವನ್ನು ವರ್ಣಿಸಿದ್ದರು. ಅದರ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿ ದ್ದಾರೆ. ಈ ಅವಹೇಳನಕಾರಿ ಹೇಳಿಕೆ ನನ್ನದಲ್ಲ, ನನಗೆ ವಾಟ್ಸಪ್‍ನಲ್ಲಿ ಫಾರ್ವರ್ಡ್ ಬಂದಿತ್ತು ಎಂದು ಸಮರ್ಥನೆ ನೀಡಿದ್ದಾರೆ. ವಾಟ್ಸಪ್‍ನಲ್ಲಿ ಬಂದಿದ್ದನ್ನು ಪೆÇೀಸ್ಟ್ ಮಾಡಿ ದರೂ ಆ ವ್ಯಕ್ತಿಯ ವ್ಯಕ್ತಿತ್ವ ಎಂತಹದು ಎಂದು ಟೀಕಾಪ್ರಹಾರ ನಡೆದಿದೆ. ಬಸವಣ್ಣನವರ ಬಗ್ಗೆ ಮಾತನಾಡಿದ ಹಿನ್ನೆಲೆಯಲ್ಲಿ ಆ ಸಮಾಜದ ಸ್ವಾಮೀಜಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕುವೆಂಪು ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ಮಲಾನಂದನಾಥ ಶ್ರೀಗಳು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ. ಸಮಿತಿಯ ಅಧ್ಯಕ್ಷನ ಪರಿಸ್ಥಿತಿ ಹೀಗಾದರೆ ಸಮಿತಿ ಕತೆ ಏನು ಎಂದು ಪ್ರಶ್ನಿಸಿದ್ದಾರೆ.

ಈ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿ 9 ಸದಸ್ಯರಿದ್ದು, ಅದರಲ್ಲಿ 7 ಮಂದಿ ಒಂದೇ ಸಮುದಾಯಕ್ಕೆ ಸೇರಿದವರು. ರಾಜಾರಾಮ್ ಹೆಗಡೆ, ಸತ್ಯಪ್ರಕಾಶ್-ವಿದ್ಯಾ ವರ್ಧಕ ಸಂಘ, ರಂಗನಾಥ್-ರಾಷ್ಟ್ರೋತ್ಥಾನ, ಬಿ.ಕೆ.ವಾಸುಕಿ-ವಿದ್ಯಾಭವನ, ಅನಂತ ಕೃಷ್ಣ ಭಟ್- ವಿಶ್ವಹಿಂದೂ ಪರಿಷತ್ ಮುಖಂಡರು, ವಿಠಲ ಪೆÇತೆದಾರ್-ಎಮಿತಿಕ್ ಸೊಸೈಟಿ ಸದಸ್ಯರು. ಇವರೆಲ್ಲರೂ ಒಂದೇ ಕೋಮಿಗೆ ಸೇರಿದವರಾಗಿದ್ದಾರೆ. ಈ ಸಮಿತಿಯಲ್ಲಿ ಮಹಿಳೆಯರಿಗೆ, ಬೇರೆ ವರ್ಗದವರಿಗೆ ಯಾವುದೇ ಸ್ಥಾನ ನೀಡಿಲ್ಲ.

ಸಮಿತಿ ಹೊಸದಾಗಿ ಸೇರಿಸಿರುವ 10 ಬರಹದಲ್ಲಿ 8 ಬರಹ ಒಂದೇ ಸಮುದಾಯಕ್ಕೆ ಸೇರಿದೆ. ಕೆ.ಬಿಹೆಡಗೆವಾರ್, ಗಜಾನನ ಶರ್ಮಾ, ಪರಮೇಶ್ವರ್ ಭಟ್, ಗಣೇಶ್ ಶತಾವದಾನಿ, ಬನ್ನಂಜೆ ಗೋವಿಂದಾಚಾರ್ ಹಾಗೂ ಚಿದಾನಂದ ಅವರ ಬರಹ ಸೇರಿಸಲಾಗಿದೆ. ಇನ್ನು ಹಿಂದುಳಿದ ವರ್ಗಕ್ಕೆ ಸೇರಿದ ಪಿ.ಲಂಕೇಶ್, ಅರವಿಂದ ಮಾಲಗತ್ತಿ, ಸಾರಾ ಅಬುಬಕರ್, ಎಲ್. ಬಸವರಾಜು, ಎನ್.ನೀಲಾ, ಬಿ.ಟಿ.ಲಲಿತಾ ನಾಯಕ್ ಅವರ ಬರಹ ಕೈಬಿಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ವ್ಯಾಪಕ ಟೀಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯವರು ವರದಿ ಪಡೆದು ಪರಿಷ್ಕರಣೆಗೆ ಮುಂದಾಗಿದ್ದಾರೆ.

ಇದುವರೆಗೂ ಈ ಪಠ್ಯ ಪುಸ್ತಕ ಸಮಿತಿ ನೇಮಕ ವಿಚಾರದಲ್ಲಿ ಯಾವುದೇ ಗೊಂದಲ ಆಗಿರಲಿಲ್ಲ. ಕನ್ನಡದ ಬಗ್ಗೆ ಇರುವ ಅಭಿಮಾನ, ಬಾವುಟದ ಬಗ್ಗೆ ಸಮಿತಿಯ ಅಧ್ಯಕ್ಷರು ಕೊಟ್ಟಿರುವ ಹೇಳಿಕೆಗಳು, ಸಾಹಿತಿಗಳ ಬಗ್ಗೆ ಹಾಗೂ ರಾಷ್ಟ್ರಕವಿ ಬಗ್ಗೆ ಮಾಡಿರುವ ಉದ್ಧಟತನ ಹಾಗೂ ಕೆಟ್ಟ ಅಭಿಪ್ರಾಯ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

Translate »