ಮೇಕೆದಾಟು ವಿಷಯದಲ್ಲಿ ರಾಜ್ಯ ಸರ್ಕಾರದ ನಿಲುವಿಗೆ ಹೆಚ್‍ಡಿಕೆ ಟೀಕೆ
News

ಮೇಕೆದಾಟು ವಿಷಯದಲ್ಲಿ ರಾಜ್ಯ ಸರ್ಕಾರದ ನಿಲುವಿಗೆ ಹೆಚ್‍ಡಿಕೆ ಟೀಕೆ

July 21, 2021

ಬೆಂಗಳೂರು, ಜು. 20(ಕೆಎಂಶಿ)-ಮೇಕೆದಾಟು ಯೋಜನೆ ಆರಂಭವಾಗದು ಎಂಬುದಾಗಿ ಪ್ರಧಾನಿ ಹಾಗೂ ಕೇಂದ್ರ ಜಲಶಕ್ತಿ ಖಾತೆ ಸಚಿವರು ಭರವಸೆ ನೀಡಿರು ವುದಾಗಿ ತಮಿಳುನಾಡು ಮುಖ್ಯ ಮಂತ್ರಿ ಎಂ.ಕೆ.ಸ್ಟಾಲಿನ್ ಹೇಳುತ್ತಿದ್ದು, ಹಾಗಾದರೆ, ಯೋಜನೆಗೆ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅಭಯ ನೀಡಿದೆ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರ ಹೇಳಿಕೆಗಳು ಸುಳ್ಳೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೇಂದ್ರ-ರಾಜ್ಯ ದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಆಗುವ ಲಾಭ ಇದೇನಾ? ಎಂದು ಟೀಕಿಸಿದ್ದಾರೆ. ಮೇಕೆದಾಟು ವಿಚಾರದಲ್ಲಿ ರಾಜ್ಯ ಸರ್ಕಾರ ಬಿಜೆಪಿ ಹೈಕಮಾಂಡ್ ಹೇಳಿದಂತೆ ಕೇಳುತ್ತಿದೆ, ಬಿಜೆಪಿ ಯೋಜನೆಯ ವಿರುದ್ಧವಿದೆ. ಯೋಜನೆ ತಡೆಯಲು ತಮಿಳುನಾಡು ನಡೆಸುತ್ತಿರುವ ಸಾಂಘಿಕ ಹೋರಾಟದಂತೆ, ಯೋಜನೆ ಜಾರಿಗೆ ರಾಜ್ಯ ಸರ್ಕಾರ ಕಾರ್ಯತಂತ್ರ ರೂಪಿಸುತ್ತಿಲ್ಲ, ಆದರೆ, ಯೋಜನೆ ಜಾರಿ ಶತಸಿದ್ಧ ಎಂದಷ್ಟೇ ಹೇಳುವ ಮೂಲಕ ಕನ್ನಡಿಗರ ಮೂಗಿಗೆ ತುಪ್ಪ ಸವರುತ್ತಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮೇಕೆದಾಟು ಜಲಾಶಯದಿಂದ ತಮಿಳುನಾಡಿಗೆ ಯಾವ ನಷ್ಟವೂ ಇಲ್ಲ, ಆದರೂ ಅಣೆಕಟ್ಟೆ ನಿರ್ಮಾಣ ಆಗದಂತೆ ತಡೆಯಲು ಶತಪ್ರಯತ್ನ ಮಾಡುತ್ತಿದೆ. ಸರ್ವಪಕ್ಷ ಸಭೆ ನಡೆಸಿ ಕಾರ್ಯತಂತ್ರ ರೂಪಿಸಿದೆ. ಪ್ರಧಾನ ಮಂತ್ರಿ, ಸಚಿವರ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ದು ಒತ್ತಡ ಹಾಕಿದೆ. ಯೋಜನೆಯಿಂದ ಅನುಕೂಲ ಪಡೆಯಲಿರುವ ರಾಜ್ಯ ಸರ್ಕಾರ ಈವರೆಗೆ ಏನೇನು ಮಾಡಿದೆ ಎಂಬುದನ್ನು ಹೇಳಬೇಕು. ತಮಿಳುನಾಡು ಹೆಚ್ಚುವರಿ ನೀರಿನ ಮೇಲೆ ಕಣ್ಣಿಟ್ಟು, ಕಳೆದ ಆರು ತಿಂಗಳ ಹಿಂದೆ ನದಿ ಜೋಡಣೆ ಆರಂಭಿಸಿತು.

ತಮಿಳುನಾಡಿನ ಈ ಯೋಜನೆ ವಿರುದ್ಧ ಕರ್ನಾಟಕ ನಿನ್ನೆ ಆಕ್ಷೇಪಣೆ ಸಲ್ಲಿಸಿದೆ, ಹೆಚ್ಚುವರಿ ನೀರು ಅಣೆಕಟ್ಟೆ ನಿರ್ಮಾಣಕ್ಕೆ ತೊಡಕಾಗಿದೆ. ಮೇಕೆದಾಟು ಯೋಜನೆ ವಿಚಾರದಲ್ಲಿ ಸರ್ಕಾರ ತನ್ನಿಷ್ಟದಂತೆ ನಡೆದುಕೊಳ್ಳುವುದನ್ನು ಬಿಟ್ಟು ಎಲ್ಲರ ಅಭಿಪ್ರಾಯ ಸಂಗ್ರಹಿಸಲಿ, ಕಗ್ಗಂಟಾಗುತ್ತಿರುವ ಈ ಯೋಜನೆಯನ್ನು ದಕ್ಕಿಸಿ ಕೊಳ್ಳಲು ಸಾಂಘಿಕವಾಗಿ ಹೋರಾಡಬೇಕು ಎಂದಿದ್ದಾರೆ. ಇಲ್ಲ ವಾದರೆ ಕಾವೇರಿ ನೀರಿನ ವ್ಯಾಜ್ಯದಂತೇ, ಮೇಕೆದಾಟು ಅಣೆಕಟ್ಟೆ ನಿರ್ಮಾಣವೂ ಒಂದು ವ್ಯಾಜ್ಯವಾಗಿ ಉಳಿಯಲಿದೆ ಎಂದು ಎಚ್ಚರಿಸಿದ್ದಾರೆ. ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ತಮಿಳುನಾಡಿನಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳುವ ತವಕ, ಆದ್ದರಿಂದ ತಮಿಳುನಾಡಿನ ಹಿತಾಸಕ್ತಿ ಕಾಯುತ್ತಿದೆ. ಯೋಜನೆ ತಡೆಯುವ ಪ್ರಯತ್ನದ ವಿರುದ್ಧ ಹೋರಾಡಬೇಕಿದ್ದ ರಾಜ್ಯ ಕಾಂಗ್ರೆಸ್ ತಮಿಳುನಾಡಿನಲ್ಲಿ ಸರ್ಕಾರದ ಪಾಲುದಾರ ಪಕ್ಷ ವಾಗಿದ್ದು, ಜೆಡಿಎಸ್ ಏಕಾಂಗಿಯಾಗಿ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

Translate »