ತನ್ನ ರಕ್ಷಣೆಗಿದ್ದ ಡ್ರ್ಯಾಗರ್‍ನಿಂದ ತಾನೇ ಬಲಿಯಾದ!
ಮೈಸೂರು

ತನ್ನ ರಕ್ಷಣೆಗಿದ್ದ ಡ್ರ್ಯಾಗರ್‍ನಿಂದ ತಾನೇ ಬಲಿಯಾದ!

September 3, 2020

ಮೈಸೂರು, ಸೆ. 2(ಆರ್‍ಕೆ)- ಮಂಗಳವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಇರಿದು ಹತ್ಯೆಗೈದಿದ್ದ ಆರೋಪಿಯನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ವಿಜಯನಗರ ಠಾಣೆ ಪೊಲೀ ಸರು ಬಂಧಿಸಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಪರಾರಿಯಾಗಿದ್ದ ಕೊಲೆ ಆರೋಪಿಯನ್ನು ಮಂಗಳವಾರ ರಾತ್ರಿಯೇ ಬಂಧಿಸಿದ್ದಾರೆ. ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಒಂದು ವಾರದ ಹಿಂದೆ ಕೊಲೆಯಾದ ಚಿರಂತ್ ಹಾಗೂ ಕೊಲೆ ಮಾಡಿದ ಮನೋಜ್ ನಡುವೆ ಜಗಳ ನಡೆದಿತ್ತು. ಆ ಹಿನ್ನೆಲೆಯಲ್ಲಿ ಸಮಯ ಕಾಯುತ್ತಿದ್ದ ಮನೋಜ್ ಮಂಗಳವಾರ ರಾತ್ರಿ ವಿಜಯನಗರ 2ನೇ ಹಂತದ ಕೆ.ಡಿ. ಸರ್ಕಲ್ ಬಳಿ ಟೀ ಕುಡಿಯುತ್ತಾ ನಿಂತಿದ್ದ ಚಿರಂತ್‍ನನ್ನು ಡ್ರ್ಯಾಗರ್‍ನಿಂದ ಇರಿದು ಓಡಿ ಹೋಗಿದ್ದ ಎಂದು ಡಿಸಿಪಿ ಡಾ. ಎ.ಎನ್. ಪ್ರಕಾಶ್‍ಗೌಡ ತಿಳಿಸಿದರು.

ಚಿರಂತ್ ಬಳಿ ಡ್ರ್ಯಾಗರ್ ಇತ್ತು. ಮನೋಜ್ ಹಲ್ಲೆ ನಡೆಸಲು ಮುಂದಾದಾಗ ಆ ಸೆಣಸಾಟದಲ್ಲಿ ಚಿರಂತ್ ಕೈನಿಂದ ಡ್ರ್ಯಾಗರ್ ಕೆಳಕ್ಕೆ ಬಿದ್ದಿದೆ. ತಕ್ಷಣ ಅದನ್ನು ಎತ್ತಿಕೊಂಡ ಮನೋಜ್, ಚಿರಂತ್‍ನ ಎದೆ ಭಾಗಕ್ಕೆ ಇರಿದು ಪರಾರಿಯಾಗಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ತಿಳಿಸಿದರು.

ತೀವ್ರವಾಗಿ ಗಾಯಗೊಂಡಿದ್ದ ಚಿರಂತ್‍ನನ್ನು ಆಸ್ಪತ್ರೆಗೆ ಕರೆ ದೊಯ್ಯುವಾಗಲೇ ಮಾರ್ಗಮಧ್ಯೆ ಕೊನೆಯುಸಿರೆಳೆದ. ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಬಾಲಕೃಷ್ಣ, ತನಿಖೆ ನಡೆಸುತ್ತಿದ್ದು, ಚಿರಂತ್ ತನ್ನ ಜೀವ ರಕ್ಷಣೆ ಗಾಗಿ ಡ್ರ್ಯಾಗರ್ ಇರಿಸಿಕೊಂಡಿದ್ದ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ವಿಚಾರಣೆಯಿಂದ ಸತ್ಯಾಂಶ ಬಯ ಲಾಗಬೇಕಿದೆ ಎಂದು ಡಾ. ಪ್ರಕಾಶ್‍ಗೌಡರು ತಿಳಿಸಿದರು.

Translate »