ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರಿ ಮಳೆ; 2 ದಿನ ಭಕ್ತರ ಪ್ರವೇಶ ನಿಷೇಧ
News

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರಿ ಮಳೆ; 2 ದಿನ ಭಕ್ತರ ಪ್ರವೇಶ ನಿಷೇಧ

August 2, 2022

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಸೋಮವಾರ ಸುರಿದ ಧಾರಾ ಕಾರ ಮಳೆಯಿಂದಾಗಿ ದರ್ಪಣತೀರ್ಥ ನದಿಯು ತುಂಬಿ ಹರಿದಿದ್ದು, ಕುಕ್ಕೆಯ ಆದಿಸುಬ್ರಹ್ಮಣ್ಯ ದೇವಳದ ಒಳಗೆ ನೀರು ಪ್ರವೇಶಿಸಿದೆ.

ಹೀಗಾಗಿ ಕುಕ್ಕೆ ದೇಗುಲಕ್ಕೆ ಎರಡು ದಿನ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದ್ದು, ಭಕ್ತರು ಸಹಕರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಕೋರಿದ್ದಾರೆ.

ಕುಕ್ಕೆ ದೇವಳದ ಸಮೀಪ ಇರುವ ದರ್ಪಣತೀರ್ಥ ನದಿಯ ಸ್ನಾನ ಘಟ್ಟವು ಮುಳುಗಡೆಯಾಗಿದೆ. ಸಮೀಪದ ರುದ್ರಪಾದ ಸೇತುವೆಯು ಜಲಾವೃತಗೊಂಡಿದೆ. ಈ ಮಧ್ಯೆ ಸುಬ್ರಹ್ಮಣ್ಯ- ಪುತ್ತೂರು- ಮಂಜೇಶ್ವರ ಅಂತರರಾಜ್ಯ ಸಂಪರ್ಕ ರಸ್ತೆಯ ಸೇತುವೆಯು ಮುಳುಗಡೆಯಾಗುವ ಸಾಧ್ಯತೆ ಇದೆ. ದರ್ಪಣ ತೀರ್ಥ ನದಿಯ ತಟದಲ್ಲಿರುವ 12ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.ಸುಳ್ಯ ತಾಲ್ಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಮಕಾರು ಎಂಬಲ್ಲಿ ಭಾನುವಾರ ತಡರಾತ್ರಿ ಹೊಳೆಯಲ್ಲಿ ಮಣ್ಣು ಮಿಶ್ರಿತ ನೀರು ರಭಸದಿಂದ ಹರಿದ ಪರಿಣಾಮ ಹೊಳೆಬದಿಯ 35ಕ್ಕೂ ಅಧಿಕ ಬೃಹತ್ ಮರಗಳು ನೀರು ಪಾಲಾಗಿವೆ. ಮರಗಳ ಗೆಲ್ಲು, ಸಿಪ್ಪೆಗಳು ಸೀಳಿದ್ದು ನೆರೆ ಪ್ರಮಾಣದ ಭೀಕರತೆಗೆ ಸಾಕ್ಷಿಯಾಗಿವೆ. ಕಲ್ಮಕಾರಿನ ಕಡಮಕಲ್ಲು ಎಸ್ಟೇಟ್ ಮೇಲ್ಭಾಗದಲ್ಲಿ ಭೂಕುಸಿತ ಸಂಭವಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮೂರು ಸೇತುವೆಗಳಿಗೂ ಹಾನಿಯಾಗಿದ್ದು, ಸಂಪರ್ಕ ಕಡಿತದ ಭೀತಿ ಎದುರಾಗಿದೆ.

Translate »