ಮೈಸೂರು,ಮೇ 3(ವೈಡಿಎಸ್)- ಮೈಸೂರಲ್ಲಿ ಭಾನುವಾರ ರಾತ್ರಿ ಸುರಿದ ಜೋರು ಮಳೆಗೆ ವಿವಿಧೆಡೆ ಮರಗಳು ಧರೆಗುರುಳಿವೆ. ರಾತ್ರಿ 10.30ರವೇಳೆಗೆ ಗುಡುಗಿನೊಂದಿಗೆ ಆರಂಭವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಜೋರಾಗಿ ಸುರಿಯಿತು. ಇದರಿಂದ ಕುವೆಂಪುನಗರದ ವಾಟರ್ಟ್ಯಾಂಕ್ ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಕಾರಿನ ಮೇಲ್ಬಾಗ ನಜ್ಜುಗುಜ್ಜಾಗಿದೆ. ಹಾಗೆಯೇ ಎಸ್ಪಿ ಕಚೇರಿ ಬಳಿ, ಕಾಳಿದಾಸ ರಸ್ತೆಯ ಮುತ್ತೂಟ್ ಫೈನಾನ್ಸ್, ಜಯನಗರ, ಉದಯಗಿರಿಯ ಟಿಪ್ಪು ಪಾರ್ಕ್ ಬಳಿ, ಕಲಾಮಂದಿರದ ಮುಂಭಾಗದ ಹುಣಸೂರು ರಸ್ತೆ, ಸರಸ್ವತಿಪುರಂನ 7 ಮುಖ್ಯರಸ್ತೆ, 8ನೇ ಮುಖ್ಯರಸ್ತೆ. ರಾಮಕೃಷ್ಣನಗರ ಹೆಚ್.ಬ್ಲಾಕ್ನ 6ನೇ ಮುಖ್ಯರಸ್ತೆ, ಕುವೆಂಪುನಗರದ ನವಿಲು ರಸ್ತೆಯ 5ನೇ ಮುಖ್ಯ ರಸ್ತೆ ಸೇರಿದಂತೆ ನಗರದ ವಿವಿಧೆಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ. ವಿಷಯ ತಿಳಿದು ಪಾಲಿಕೆ `ಅಭಯ’ ತಂಡ ಸ್ಥಳಕ್ಕೆ ತೆರಳಿ ಹಲವು ಕಡೆಗಳಲ್ಲಿ ನೆಲಕ್ಕುರುಳಿದ್ದ ಮರದ ಕೊಂಬೆಗಳನ್ನು ತೆರವುಗೊಳಿಸಿದರು.
