ರಾಮನಗರದಲ್ಲಿ ಭಾರೀ ಮಳೆ: ಮೂರು ದಿನ ಬೆಂಗಳೂರು-ಮೈಸೂರು ಹೆದ್ದಾರಿ ಬಂದ್
News

ರಾಮನಗರದಲ್ಲಿ ಭಾರೀ ಮಳೆ: ಮೂರು ದಿನ ಬೆಂಗಳೂರು-ಮೈಸೂರು ಹೆದ್ದಾರಿ ಬಂದ್

August 28, 2022

ರಾಮನಗರ, ಆ.27- ರಾಮನಗರ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯಲ್ಲಿ ಪ್ರವಾಹ ಉಂಟಾಗಿದ್ದು, ಮುಂಜಾಗ್ರತಾ ಕ್ರಮವಾಗಿ ವಾಹನ ಸವಾರರು ಈ ಹೆದ್ದಾರಿಯ ಬದಲು ಬೇರೆ ಮಾರ್ಗದ ಮೂಲಕ ಸಂಚಾರ ಮಾಡುವಂತೆ ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ. ಭಾರೀ ಮಳೆಯಿಂದಾಗಿ ಜಿಲ್ಲೆಯ ಹಲವು ಕೆರೆ-ಕಟ್ಟೆಗಳು ತುಂಬಿದ ಪರಿಣಾಮ ಕೋಡಿ ಹರಿದು ಬೆಂಗಳೂರು- ಮೈಸೂರು ಹೆದ್ದಾರಿ ವಾಹನಗಳು ಸಂಚರಿಸಲು ಸಾಧ್ಯವಾಗದಷ್ಟು ಜಲಾವೃತಗೊಂಡಿದೆ.

ಅಲ್ಲದೇ, ಹೆದ್ದಾರಿ ದುರಸ್ತಿ ಗೊಂಡಿರುವುದರಿಂದ ಹಾಗೂ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಹೆದ್ದಾರಿಯಲ್ಲಿನ ಸುಗಮ ಪ್ರಯಾಣಕ್ಕೆ ತೊಂದರೆ ಯಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಶನಿವಾರದಿಂದ ಮೂರು ದಿನಗಳವರೆಗೆ ಬೆಂಗಳೂರು ಮೈಸೂರು ಮಾರ್ಗವಾಗಿ ಪ್ರಯಾಣಿಸುವ ಪ್ರಯಾಣಿಕರು ಬೆಂಗಳೂರು-ಕನಕಪುರ-ಮೈಸೂರು ಮಾರ್ಗ ಅಥವಾ ಬೆಂಗಳೂರು-ಕುಣಿಗಲ್-ಮೈಸೂರು ಮಾರ್ಗವಾಗಿ ಪ್ರಯಾಣ ಮಾಡುವಂತೆ ಸೂಚಿಸಿದ್ದಾರೆ. ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಜಿಲ್ಲೆಯ ಜನತೆ ನಲುಗಿ ಹೋಗಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಹಿನ್ನೆಲೆ ನೂರಾರು ಕುಟುಂಬಗಳು ಬೀದಿಗೆ ಬಂದಿವೆ. ಹಾನಿಗೊಳಗಾದ ಪ್ರದೇಶಗಳಿಗೆ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈಗಾಗಲೇ ಅಧಿಕಾರಿಗಳ ಬಳಿ ಮಾಹಿತಿ ಪಡೆದಿರುವ ಸಿಪಿವೈ, ತಕ್ಷಣವೇ ನಿರಾಶ್ರಿತ ಕೇಂದ್ರ ಸೇರಿದಂತೆ ಪರಿಹಾರ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Translate »