ರಾಜ್ಯಸಭಾ ಚುನಾವಣೆಯಲ್ಲಿ ಕುದುರೆ ವ್ಯಾಪಾರ?
News

ರಾಜ್ಯಸಭಾ ಚುನಾವಣೆಯಲ್ಲಿ ಕುದುರೆ ವ್ಯಾಪಾರ?

June 1, 2022

ಬೆಂಗಳೂರು,ಮೇ 31 (ಕೆಎಂಶಿ)-ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕಾಗಿ ಕಸರತ್ತು ನಡೆಸುತ್ತಿರುವ ಮೂರು ರಾಜಕೀಯ ಪಕ್ಷಗಳು ಉದ್ದಿಮೆ ದಾರರನ್ನು ಕಣಕ್ಕಿಳಿಸಿ, ಕುದುರೆ ವ್ಯಾಪಾರಕ್ಕೆ ರಹದಾರಿ ಮಾಡಿಕೊಟ್ಟಿವೆ.

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದ್ದು, ಹಾಲಿ ವಿಧಾನಸಭೆಯ ಬಲಾಬಲದ ಆಧಾರದ ಮೇಲೆ ಬಿಜೆಪಿ ಎರಡು, ಕಾಂಗ್ರೆಸ್ ಒಂದು ಸ್ಥಾನಗಳನ್ನು ಮೊದಲ ಪ್ರಾಶಸ್ತ್ಯದ ಮತಗಳ ಆಧಾರದ ಮೇಲೆ ಜಯಗಳಿಸಲಿವೆ. ಉಳಿದ ಒಂದು ಸ್ಥಾನಕ್ಕೆ ಯಾರ ಬಳಿಯೂ ಮೊದಲ ಪ್ರಾಶಸ್ತ್ಯ 46 ಮತಗಳಿಲ್ಲ. ಮೊದಲ ಪ್ರಾಶಸ್ತ್ಯದ ಮೇಲೆ ಗೆಲ್ಲಬಹು ದಾದ ಸ್ಥಾನಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಚಿತ್ರನಟ ಜಗ್ಗೇಶ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ರಾಷ್ಟ್ರೀಯ ಕಾಂಗ್ರೆಸ್‍ನ ಚಿಂತಕರ ಚಾವಡಿಯಲ್ಲಿರುವ ಜಯರಾಂ ರಮೇಶ್ ಅವರನ್ನು ಮತ್ತೆ ಕಣಕ್ಕಿಳಿಸಿದ್ದು, ಅವರು ಮೊದಲ ಪ್ರಾಶಸ್ತ್ಯ ಮತ ಗಳಿಂದ ಎರಡನೇ ಬಾರಿಗೆ ರಾಜ್ಯಸಭೆ ಪ್ರವೇಶಿಸಲಿದ್ದಾರೆ.

ಇನ್ನು ಉಳಿದ 1 ಸ್ಥಾನಕ್ಕೆ ಬಿಜೆಪಿಯಿಂದ ಲೇಹರ್‍ಸಿಂಗ್, ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ಹಾಗೂ ಕಾಂಗ್ರೆಸ್‍ನಿಂದ ಮನ್ಸೂರ್ ಅಲಿಖಾನ್ ಕಣಕ್ಕಿಳಿದಿದ್ದು, ಇವರೆಲ್ಲರೂ ಉದ್ದಿಮೆದಾರರು. 4ನೇ ಸ್ಥಾನ ಪಡೆ ಯಲು ಮೂರೂ ಪಕ್ಷಗಳಿಗೂ 4ನೇ ಅಭ್ಯರ್ಥಿ ಆಯ್ಕೆಗೆ ಪೂರ್ಣ ಮತ ಗಳಿಲ್ಲ. ಆದರೆ ಆ ಸ್ಥಾನ ಪಡೆಯಲು ಜೆಡಿಎಸ್ ಮತ್ತು ಬಿಜೆಪಿ ಪೈಪೆÇೀಟಿಗೆ ಇಳಿದಿವೆ. ಕಾಂಗ್ರೆಸ್ ನೆಪಮಾತ್ರಕ್ಕೆ ಕಣದಲ್ಲಿದ್ದು, ಅದರ ಉದ್ದೇಶ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸುವುದಾಗಿದೆ ಎನ್ನಲಾ ಗಿದೆ. ಮೊದಲ ಪ್ರಾಶಸ್ತ್ಯ ಮೂಲಕ ಒಬ್ಬ ಅಭ್ಯರ್ಥಿ 46 ಮತ ಪಡೆಯ ಬೇಕು. ವಿಧಾನಸಭೆಯಲ್ಲಿ ಒಬ್ಬ ಪಕ್ಷೇತರ ಬೆಂಬಲದಿಂದ 122 ಸದಸ್ಯರನ್ನು ಹೊಂದಿರುವ ಬಿಜೆಪಿ, ತನ್ನ ಮೊದಲ ಇಬ್ಬರು ಅಭ್ಯರ್ಥಿಗಳಿಗೆ ಮುನ್ನೆ ಚ್ಚರಿಕೆಯಾಗಿ 94 ಮತಗಳನ್ನು ನಿಗದಿಪಡಿಸಿದರೆ, ಆ ಪಕ್ಷಕ್ಕೆ ಇನ್ನೂ 28 ಮತಗಳು ಉಳಿಯಲಿವೆ. ಕಾಂಗ್ರೆಸ್ ತನ್ನ ಮೊದಲ ಪ್ರಾಶಸ್ತ್ಯದ ಮತಗಳನ್ನು ಮೊದಲ ಅಭ್ಯರ್ಥಿಗೆ 46 ಮತ ನೀಡಿದರೆ, ಇನ್ನು 22 ಮತಗಳು ಉಳಿಯಲಿವೆ. ಜೆಡಿಎಸ್‍ಗೆ 32 ಮತಗಳಿವೆ. ಜೆಡಿಎಸ್ ಜತೆಗಿನ ಸಖ್ಯ ಬೇಡ ಎಂಬ ಕಾರಣಕ್ಕಾಗಿ ಮತ್ತು ಅದು ಬಿಜೆಪಿ ಜತೆ ಹೋಗುತ್ತದೆಯೇ ಎಂಬುದನ್ನು ನೋಡುವ ಮೂಲಕ ಅದನ್ನು ಕೋಮುವಾದಿ ಎಂದು ಹೇಳಲು ಕಾಂಗ್ರೆಸ್ ಪಕ್ಷ ಬಯಸುತ್ತಿದ್ದು ಈ ಹಿನ್ನೆಲೆಯಲ್ಲಿ ಅದು ತನ್ನ ಎರಡನೇ ಅಭ್ಯರ್ಥಿಯ ಗೆಲುವನ್ನು ನಿರೀಕ್ಷಿಸುವ ಸ್ಥಿತಿಯಲ್ಲಿಲ್ಲ. ಕಾಂಗ್ರೆಸ್ ಪಕ್ಷ ಚುನಾವಣಾ ಕಣದಲ್ಲಿ ಜೆಡಿಎಸ್‍ಗೆ ಮುಖಭಂಗ ಮಾಡುವ ಉದ್ದೇಶವಿಟ್ಟುಕೊಂಡಿದ್ದರೆ ಬಿಜೆಪಿ ತನ್ನ ಮೂರನೆಯ ಅಭ್ಯರ್ಥಿಯ ಮತ್ತು ಜೆಡಿಎಸ್ ತನ್ನ ಏಕೈಕ ಅಭ್ಯರ್ಥಿಯ ಗೆಲುವಿಗೆ ಕಾತರಿಸುತ್ತಿವೆ. ಜೆಡಿಎಸ್‍ಗೆ ಮಾಡು ಇಲ್ಲವೇ ಮಡಿ ಎಂಬ ಪಂಥಾಹ್ವಾನವಿದ್ದು, ಅದು ತನಗಿರುವ ಮೂವತ್ತೆರಡು ಶಾಸಕ ಬಲದ ಜತೆ ಇನ್ನೂ ಹೆಚ್ಚುವರಿಯಾಗಿ 8 ರಿಂದ 9 ಮತಗಳನ್ನು ಪಡೆದರೆ, ಪ್ರಯಾಸದಿಂದ ಗೆಲ್ಲಬಹುದಾಗಿದೆ. ಈಗಿನ ಸ್ಥಿತಿಯಲ್ಲಿ ಅದು ಬಿಜೆಪಿ ಬುಟ್ಟಿಗೆ ಕೈ ಹಾಕಿ ಮತಗಳನ್ನು ಪಡೆಯುವುದು ಕಷ್ಟವಾದರೂ ಕಾಂಗ್ರೆಸ್ ಪಕ್ಷದ ಆಂತರಿಕ ಗೊಂದಲವನ್ನು ಎನ್‍ಕ್ಯಾಶ್ ಮಾಡಿಕೊಂಡು ತನ್ನ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲುವು ಸಾಧಿಸುವಂತೆ ನೋಡಿಕೊಳ್ಳುತ್ತದೆಯೇ ಎಂದು ಕಾದು ನೋಡಬೇಕಿದೆ. ಜೆಡಿಎಸ್ ವತಿಯಿಂದ ಸ್ಪರ್ಧಿಸಿರುವ ಕುಪೇಂದ್ರ ರೆಡ್ಡಿ ಅವರು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಆಪ್ತರಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬುಟ್ಟಿಯಿಂದ ಕೆಲ ಮತಗಳು ಕುಪೇಂದ್ರರೆಡ್ಡಿ ಕಡೆ ವಾಲು ತ್ತವೆಯೇ ಎಂಬುದು ಸಧ್ಯದ ಕುತೂಹಲ. ಹಾಗೇನಾದರೂ ಆದರೆ ಜೆಡಿಎಸ್ ಪಕ್ಷಕ್ಕೆ ಮುಖಭಂಗ ಮಾಡುವ ಕಾಂಗ್ರೆಸ್ ಉದ್ದೇಶ ನೀರಿನಲ್ಲಿ ಹೋಮ ಮಾಡಿ ದಂತಾಗುತ್ತದಲ್ಲದೆ, ತನ್ನ ಮುಖಕ್ಕೆ ತಾನೇ ಕಪ್ಪು ಮಸಿ ಅಂಟಿಸಿಕೊಂಡಂತಾಗುತ್ತದೆ. ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮೂರು ರಾಜಕೀಯ ಪಕ್ಷಗಳಿಂದ ಆರು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಮುಂದೇನು ಎಂದು ಕಾದು ನೋಡಬೇಕಾಗಿದೆ.

Translate »