`ನಾವು ಸಾಬ್ರು, ಹೊಸ ಗಾಡಿ ತಗೋಳಲ್ಲ, ಹಳೇ ಗಾಡಿನೇ ರೆಡಿ ಮಾಡ್ತೀವಿ ತಿಳೀತಾ!?’
ಮೈಸೂರು

`ನಾವು ಸಾಬ್ರು, ಹೊಸ ಗಾಡಿ ತಗೋಳಲ್ಲ, ಹಳೇ ಗಾಡಿನೇ ರೆಡಿ ಮಾಡ್ತೀವಿ ತಿಳೀತಾ!?’

January 7, 2021

ಬೆಂಗಳೂರು: `ನಾವು ಸಾಬ್ರು, ಹೊಸ ಗಾಡಿ ತಗೋಳಲ್ಲ, ಹಳೇ ಗಾಡಿನೇ ರೆಡಿ ಮಾಡ್ತೀವಿ ತಿಳೀತಾ?’ ಹೀಗೆಂದು ಹೇಳಿದವರು ಕಾಂಗ್ರೆಸ್‍ನ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ. ಕಾಂಗ್ರೆಸ್ ತೊರೆದು ಜೆ.ಡಿ.ಎಸ್. ಪಕ್ಷ ಸೇರುವ ಬಗ್ಗೆ ಬೆಂಗಳೂರಿನಲ್ಲಿ ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಜೆಡಿಎಸ್‍ಗೆ ಹೋಗಿ ಏನಾಗಬೇಕಿದೆ? ನಾನು ಕಾಂಗ್ರೆಸ್ ಬಿಟ್ಟರೆ ಎಂಎಲ್‍ಸಿ ಸ್ಥಾನವೂ ಹೋಗುತ್ತದೆ. ಏನು ಮಾಡೋಕೆ ಆಗುತ್ತದೆ? ದೇವರ ಅನುಗ್ರಹದಿಂದ ನಾನು ಯಾವುದೇ ಕೆಲಸಕ್ಕೆ ಕೈ ಹಾಕಿದ್ರು ವಿಫಲವಾಗಿಲ್ಲ. ನನ್ನ ಮನಸ್ಸು ಸರಿ ಇರುವುದರಿಂದ ಸದ್ಬುದ್ಧಿ ಕೊಡುತ್ತಿದ್ದಾನೆ. ಮನಸ್ಸು ಕೆಟ್ಟದಾಗಿದ್ದಾಗ ಮಾತ್ರ ದುರ್ಬುದ್ಧಿ ಕೊಡುತ್ತಾನೆ ಅಷ್ಟೇ ಎಂದರು ಇಬ್ರಾಹಿಂ. ಅದಕ್ಕಾಗಿಯೇ ಅವರು ಗಾಡಿಯ ಉದಾಹರಣೆ ಕೊಟ್ಟು, `ನಾವು ಸಾಬ್ರು ಹಳೆಯ ಗಾಡಿಯನ್ನೇ ರಿಪೇರಿ ಮಾಡಿಸೋರು. ಹಾಗಂತ, ನಮ್ಮದು ಗುಜರಿ ಗಾಡಿ ಅಲ್ಲ, ನೋಡ್ತಿರಿ ನಮ್ಮ ಗಾಡಿ ಯಾವುದೆಂದು ತಿಳಿಯುತ್ತೆ’ ಎಂದು ಪ್ರಶ್ನಿಸಿದವರ ಬಾಯಿ ಮುಚ್ಚಿಸಿದರು. ಪ್ರಭಾಕರ್ ಕೋರೆ, ಉಮೇಶ್ ಕತ್ತಿ ಎಲ್ಲರೂ ನನ್ನನ್ನು ಭೇಟಿಯಾಗಿದ್ದು ನಿಜ. ಅದು ಯಾಕೆ? ನಮ್ಮ ನಡುವೆ ಏನು ಮಾತುಕತೆಯಾಯ್ತು ಎಲ್ಲಾ ಹೇಳುವುದಕ್ಕೆ ಆಗುವುದಿಲ್ಲ. ನನ್ನ ಯಾವುದೇ ತಂತ್ರವನ್ನು ಸದ್ಯಕ್ಕೆ ನಾನು ಬಿಟ್ಟುಕೊಡು ವುದಿಲ್ಲ. ನಮ್ಮ ಟ್ರೈನ್ ಇನ್ನೂ ಶುರುವಾಗಿಲ್ಲ. ಟ್ರೈನ್ ಶುರುವಾದ್ಮೇಲೆ ಎಲ್ಲರೂ ಹತ್ತಿಕೊಳ್ಳುತ್ತಾರೆ ಎಂದು ನಿಗೂಢವಾಗಿ ಉತ್ತರಿಸಿದರು. ನಾನು ಈಗಾಗಲೇ ಏಳು ಜಿಲ್ಲೆಗೆ ಭೇಟಿ ನೀಡಲಿದ್ದೇನೆ. ಕೇವಲ ರಾಜ್ಯ ಅಲ್ಲ, ಬಿಹಾರದ ತೇಜಸ್ವಿ ಯಾದವ್, ನಿತೀಶ್‍ಕುಮಾರ್, ಶರದ್ ಯಾದವ್‍ರನ್ನು ಕೂಡ ಭೇಟಿಯಾಗಿದ್ದೇನೆ. ಜನತಾ ಪರಿವಾರವನ್ನು ಒಂದು ಮಾಡಬೇಕು ಅನ್ನೋದು ಮೂಲ ಉದ್ದೇಶ ಹೊಂದಿದ್ದೇನೆ. ಯಡಿಯೂರಪ್ಪ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿ ಕಾರಿದರು.

ಡಿಸೆಂಬರ್ ಬಂದರೆ ರಾಜಕೀಯದಲ್ಲಿ ಬದಲಾವಣೆ ಆಗುತ್ತದೆ ಅಂತ ಹೇಳಿದ್ದೆ, ಆ ಬದಲಾವಣೆ ಆಗಿದೆ. ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆಯಾಗಲಿದೆ. ಯಡಿಯೂರಪ್ಪ ಹಾಗೂ ಮೋದಿ ಟೆಂಟಿಗೆ ಬೆಂಕಿ ಬಿದ್ದಿದೆ. ಎಲ್ಲ ಬದುಕಿದರೆ ಸಾಕು ಅಂತ ಓಡಿ ಹೋಗುತ್ತಾರೆ ಎಂದರು.

 

 

Translate »