ಜೆಡಿಎಸ್ ಅಧಿಕಾರಕ್ಕೆ ಬಂದರೆ ತೆಲಂಗಾಣ ಮಾದರಿ ಕೃಷಿ ಪಂಪ್‍ಸೆಟ್‍ಗೆ 24ಘಿ7 ಗುಣಮಟ್ಟದ ವಿದ್ಯುತ್ ಪೂರೈಕೆ
News

ಜೆಡಿಎಸ್ ಅಧಿಕಾರಕ್ಕೆ ಬಂದರೆ ತೆಲಂಗಾಣ ಮಾದರಿ ಕೃಷಿ ಪಂಪ್‍ಸೆಟ್‍ಗೆ 24ಘಿ7 ಗುಣಮಟ್ಟದ ವಿದ್ಯುತ್ ಪೂರೈಕೆ

October 7, 2022

ಬೆಂಗಳೂರು, ಅ.6(ಕೆಎಂಶಿ)-ತೆಲಂಗಾಣದ ಮಾದರಿಯಲ್ಲಿಯೇ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪ್‍ಸೆಟ್ಟುಗಳಿಗೆ 24ಘಿ7 ಗುಣಮಟ್ಟದ ಉಚಿತ ವಿದ್ಯುತ್ ಪೂರೈಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಂಶವನ್ನು ಚುನಾವಣಾ ಪ್ರಣಾಳಿಕೆಯಲ್ಲಿಯೂ ಸೇರಿಸಲಾಗುವುದು ಎಂದರಲ್ಲದೇ ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷೆಯ `ಜನತಾ ಪಂಚರತ್ನ ರಥಯಾತ್ರೆ’ಗೆ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ಚಾಲನೆ ನೀಡುವುದಾಗಿ ಘೋಷಿಸಿದರು.

ಕರ್ನಾಟಕದ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿ ಗಳನ್ನು ಕಣಕ್ಕಿಳಿಸುವ ಆಸಕ್ತಿ ಕೆ.ಚಂದ್ರಶೇಖರ್ ರಾವ್ ಅವರ ನೇತೃತ್ವದ ಬಿಆರ್‍ಎಸ್ ಪಕ್ಷಕ್ಕೆ ಇಲ್ಲ. ಆದರೆ, ಜೆಡಿಎಸ್ ಅಭ್ಯರ್ಥಿಗಳನ್ನೇ ಬೆಂಬಲಿಸುವ ನಿರ್ಧಾರಕ್ಕೆ ತೆಲಂಗಾಣ ಮುಖ್ಯಮಂತ್ರಿಗಳು ಬಂದಿದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು. 2024ರ ಲೋಕಸಭೆ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಿಂದ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲು ಕೆಸಿಆರ್ ಅವರು ಚಿಂತನೆ ನಡೆಸಿ ದ್ದಾರೆ. ಅದರಂತೆ ರಾಜ್ಯದ ಗಡಿ ಭಾಗದಲ್ಲಿ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಲಿದ್ದಾರೆ ಎಂದು ಅವರು ಹೇಳಿದರು.

ನಮ್ಮ ಪಕ್ಷದ ಶಾಸಕರ ಜತೆ ಸೇರಿ ತೆಲಂಗಾಣ ಮುಖ್ಯ ಮಂತ್ರಿ ಚಂದ್ರಶೇಖರ ರಾವ್ ಅವರೊಂದಿಗೆ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಿದ್ದೇನೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಆಗುವುದಿಲ್ಲ. 2006ರ 20 ತಿಂಗಳ ನಿಮ್ಮ ಆಡಳಿತ ನೋಡಿದ್ದೇನೆ. ಯಾವುದೇ ಕಪ್ಪುಚುಕ್ಕೆ ಇಲ್ಲದ ರೀತಿ ಆಡಳಿತ ನಡೆಸಿದ್ದೀರಿ. ಅದೇ ರೀತಿ ಮುಂದು ವರೆಯಿರಿ ಎಂದು ಅವರು ನನಗೆ ಸಲಹೆ ನೀಡಿದರು ಎಂದು ಮಾಜಿ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ದಲಿತರ ಮೇಲಿನ ದೌರ್ಜನ್ಯ, ರೈತರ ನೆರವಿಗೆ ಧಾವಿ ಸುವ ಸಲುವಾಗಿ ನಾವು ಒಗ್ಗೂಡುತ್ತಿದ್ದೇವೆ. ಅದನ್ನೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಮಾಡಿಕೊಂಡು ಮುಂದು ವರಿಯುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈಗ ಟಿಆರ್‍ಎಸ್ ರಾಷ್ಟ್ರೀಯ ಪಕ್ಷವಾಗಿ ಬಿಆರ್‍ಎಸ್ ಹೆಸರಿನಲ್ಲಿ ಹೊರಹೊಮ್ಮಿರುವುದನ್ನು ನಮ್ಮ ಪಕ್ಷ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಿದೆ. ಮುಂದಿನ ದಿನಗಳಲ್ಲಿ ನಾವು ಕೆ.ಚಂದ್ರಶೇಖರ್ ರಾವ್ ಅವರೊಂದಿಗೆ ಕೆಲಸ ಮಾಡುತ್ತೇವೆ ಎಂದರು ಕುಮಾರಸ್ವಾಮಿ. ತೆಲಂಗಾಣದಲ್ಲಿ ಜಾರಿ ಮಾಡಲಾಗಿರುವ ರೈತಬಂಧು, ದಲಿತ ಬಂಧು ಯೋಜನೆಗಳನ್ನು ರಾಜ್ಯದಲ್ಲಿಯೂ ಜಾರಿಗೆ ತರಲಾಗುವುದು ಎಂದು ಹೇಳಿದ ಕುಮಾರಸ್ವಾಮಿ, ಅಲ್ಲಿ ರೈತಬಂಧು ಯೋಜನೆಯಡಿ 24 ಗಂಟೆ ಉಚಿತ ವಿದ್ಯುತ್, ಪ್ರತಿ ವರ್ಷ ಎಕರೆಗೆ ಹತ್ತು ಸಾವಿರ ಸಹಾಯಧನ ಕೊಡುತ್ತಿದ್ದಾರೆ. ರೈತ ಅಕಾಲಿಕ ಮರಣಕ್ಕೀಡಾದರೆ ತಕ್ಷಣ 5 ಲಕ್ಷ ರೂಪಾಯಿ ವಿಮಾ ಪರಿಹಾರ ತಲುಪಿಸುತ್ತಿ ದ್ದಾರೆ. ರೈತರಿಗೆ ವಿಮೆಯನ್ನು ಭಾರತೀಯ ಜೀವ ವಿಮಾ ನಿಗಮದ(ಎಲ್‍ಐಸಿ) ಮೂಲಕ ಮಾಡಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.

ದಲಿತರಿಗೆ ಕುಟುಂಬದಲ್ಲಿಯೇ ಸ್ವ-ಉದ್ಯೋಗ ಮಾಡಲು ಹತ್ತು ಲಕ್ಷ ರೂಪಾಯಿ ನೆರವನ್ನು ನೀಡುತ್ತಿದೆ ತೆಲಂಗಾಣ ಸರಕಾರ. ನೇರವಾಗಿ ಅವರ ಖಾತೆಗೆ ಹಣ ಜಮಾ ಮಾಡುವ ದಲಿತಬಂಧು ಯೋಜನೆ ಮಾಡಲಾಗಿದೆ. ಪ್ರತಿ ಜಿಲ್ಲೆಯಿಂದ ಕೆಲ ಸಂಘಟನೆ, ಪ್ರಗತಿ ಪರ ರೈತರು, ದಲಿತ ಸಂಘಟನೆ ಮುಖಂಡರನ್ನು ತೆಲಾಂಗಣಕ್ಕೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಿ. ಈ ಮೂಲಕ ನಿಮ್ಮ ಚುನಾವಣಾ ಪ್ರಚಾರಕ್ಕೆ ಈ ಅಂಶಗಳನ್ನು ಅಳವಡಿಸಿಕೊಳ್ಳಿ ಎಂದು ಕೆಸಿಆರ್ ಸಲಹೆ ನೀಡಿದ್ದಾರೆ ಎಂದು ಅವರು ಹೇಳಿದರು. ನಾನು ರಾಷ್ಟ್ರಮಟ್ಟದ ರಾಜಕೀಯಕ್ಕೆ ಹೋಗಲು ನಮ್ಮದು ಸಣ್ಣ ಪಕ್ಷ. ನಮಗೆ ಸಾಗುವಳಿ ಚೀಟಿ ಸಿಕ್ಕಿರುವುದು ಕರ್ನಾಟಕದ್ದು ಮಾತ್ರ. ಹೀಗಾಗಿ ನಾವು ಹೊರಗೆ ಬಕರ್‍ಹುಕುಂ ಜಾಗ ಹುಡುಕುವುದಕ್ಕೆ ಆಗುತ್ತಾ ಎಂದ ಕುಮಾರಸ್ವಾಮಿ ಅವರು, ಕರ್ನಾಟಕ ಚುನಾವಣೆ ರಾಷ್ಟ್ರ ಮಟ್ಟದಲ್ಲಿ ಪ್ರಭಾವ ಬೀರುತ್ತದೆ ಎಂದರು.

ರಾಜ್ಯದಲ್ಲಿ 15-20 ಕ್ಷೇತ್ರಗಳ ಮೇಲೆ ಕೆಸಿಆರ್ ಪ್ರಭಾವ ಇರಬಹುದು. ಅವರ ಅನೇಕ ಶಾಸಕರುಗಳಿಗೆ ಆ ಭಾಗದಲ್ಲಿ ನೆಂಟಸ್ಥನ ಇದೆ. ಹೈದರಾಬಾದ್ ಕರ್ನಾಟಕದಲ್ಲಿ ನಾವು ನಾಲ್ಕು ಸ್ಥಾನ ಗೆದ್ದಿದ್ದೇವೆ. ಮುಂದಿನ ಚುನಾವಣೆಯಲ್ಲಿ ಕನಿಷ್ಠ ನಾವು 15-20 ಕ್ಷೇತ್ರ ಇಲ್ಲಿಂದ ಗೆಲ್ಲಬಹುದು. ಅಲ್ಲಿ ನಮ್ಮ ಪಕ್ಷದ ಸಂಘಟನೆ ಉತ್ತಮವಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು. ಭಾರತ್ ಜೋಡೋ ಯಾಕೆ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಸುಮ್ಮನೆ ಹೋಗ್ತಿದ್ದಾರೆ ಎಂದು ಜನ ಹೇಳ್ತಿದ್ದಾರೆ. ರಾಹುಲ್ ಗಾಂಧಿ ಅವರ ಹೇಳಿಕೆ ನೋಡಿದರೆ ಭಾರತ್ ಜೋಡೋಗಿಂತ ಕಾಂಗ್ರೆಸ್ ಜೋಡೋ ಮಾಡುವ ರೀತಿ ಇದೆ. ಕರ್ನಾಟಕಕ್ಕೆ ಭಾರತ್ ಜೋಡೋ ಯಾತ್ರೆ ಪ್ರವೇಶಿಸಿದಾಗ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೈ ಹಿಡಿದು ರಾಹುಲ್ ಗಾಂಧಿ ನಗಾರಿ ಬಾರಿಸಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಹೋಗಿ ಅಂತ ಪದೇ ಪದೆ ಹೇಳ್ತಿದ್ದಾರೆ. ಈ ಪಾದಯಾತ್ರೆ ಮೇಲೆ ಚುನಾವಣೆ ನಡೆಯಲ್ಲ ಎಂದು ವ್ಯಂಗ್ಯವಾಡಿದರು.

Translate »