ದುಡಿದು ಬದುಕುವವರಿಗೆ ಈಗ ಬೆಲೆಯೇ ಇಲ್ಲ…
ಮೈಸೂರು

ದುಡಿದು ಬದುಕುವವರಿಗೆ ಈಗ ಬೆಲೆಯೇ ಇಲ್ಲ…

March 5, 2020

ಬೆಂಗಳೂರು, ಮಾ.4(ಕೆಎಂಶಿ)- ಯಥಾ ರಾಜಾ, ತಥಾ ಪ್ರಜಾ ಎಂಬ ಕಾಲವೊಂ ದಿತ್ತು. ಆದರೆ ಈಗ ಯಥಾ ಪ್ರಜಾ, ತಥಾ ರಾಜಾ ಎಂಬ ಮಟ್ಟಕ್ಕೆ ಬಂದಿದೆ. ಮತ್ತೆ ಯಥಾ ರಾಜಾ, ತಥಾ ಪ್ರಜಾ ಕಾಲಕ್ಕೆ ಬರಬೇಕಾ ದರೆ ಇನ್ನು ಎಷ್ಟು ವರ್ಷ ಬೇಕೋ? ಅಂತಹ ಪ್ರಯತ್ನಗಳು ಯಾರಿಂದ ಆರಂಭವಾಗುತ್ತದೆ ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧು ಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದರು.

ವಿಧಾನಸಭೆಯ ಅಧಿವೇಶನದಲ್ಲಿಂದು ಸಂವಿ ಧಾನದ ಮೇಲೆ ನಡೆದ ಚರ್ಚೆಯಲ್ಲಿ ಮಾತನಾ ಡಿದ ಅವರು, ಸಂವಿಧಾನ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ, ಮಾಧ್ಯಮ ಕ್ಷೇತ್ರ ಎಲ್ಲದಕ್ಕೂ ಸ್ಪಷ್ಟವಾದ ದಿಕ್ಸೂಚಿಯ ಕಾರ್ಯಸೂಚಿಗಳನ್ನು ಸೂಚಿಸಿದೆ. ಎಲ್ಲರೂ ಅವರ ಇತಿಮಿತಿಯಲ್ಲಿ ಕೆಲಸ ಮಾಡಿದ್ದರೆ ಭಾರತ ಯಾವೊತ್ತೊ ಬದಲಾಗಬೇಕಿತ್ತು. ಆದರೆ ಒಬ್ಬರ ಮೇಲೆ ಒಬ್ಬರು ಹೆಚ್ಚುಗಾರಿಕೆ ತೋರಿಸುತ್ತಾ ಸಂವಿ ಧಾನದ ಮೇಲೆ ಅತ್ಯಾಚಾರ ಮಾಡಿ ದೇಶದ ಸ್ಥಿತಿಯನ್ನು ಹದಗೆಡಿಸಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಯಥಾ ರಾಜಾ ತಥಾ ಪ್ರಜಾ ಎಂಬ ಕಾಲದಲ್ಲಿ ಜನಪ್ರತಿನಿಧಿಗಳಂತೆ ಪ್ರಜೆಗಳು ಇರುತ್ತಿದ್ದರು. ಆಗ ಆದರ್ಶಗಳು ಇರುತ್ತಿದ್ದವು. ಈಗ ಜನ ಬಯಸಿದಂತೆ ರಾಜಕಾರಣಿಗಳು ಇರಬೇಕಿದೆ.

ಇದರ ಹಿಂದಿನ ವ್ಯವಸ್ಥೆಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಯಾರೂ ಬಾಯಿಬಿಡುತ್ತಿಲ್ಲ. ನಾವು ಆತ್ಮಸಾಕ್ಷಿಯನ್ನು ಮುಂದಿಟ್ಟುಕೊಂಡು ಪ್ರಯತ್ನ ಮಾಡುವುದಾದರೆ ವ್ಯವಸ್ಥೆ ಬದಲಾಗಲೇಬೇಕು. ವಸಾಹತು ಶಾಹಿ, ಸಾಮ್ರಾಜ್ಯ ಶಾಹಿ ವಿರುದ್ಧ ಪ್ರಜಾ ಸಾಮ್ರಾಜ್ಯ ರಚನೆಯಾಯಿತು. ಆದರೆ ಉದ್ದೇಶಗಳು ಈಡೇರಿಲ್ಲ. ಬಡವರಿಗೆ, 2ನೇ ವರ್ಗದ ಜನರಿಗೆ, ಶ್ರಮಜೀವಿಗಳಿಗಾಗಿ ಸಂವಿಧಾನ ಇರಬೇಕಿತ್ತು. ಆದರೆ ಈಗಿನ ಕಾಲದಲ್ಲಿ ದುಡಿದು ಬದುಕುವ ಕಾಲವಿಲ್ಲ ಎಂಬ ಸ್ಥಿತಿ ಇದೆ. ದಿನ 24 ಗಂಟೆ ಕೆಲಸ ಮಾಡುವವರಿಗೆ 140 ರೂ. ಕೂಲಿ ಕೊಡುತ್ತಾರೆ. ಎರಡು ಲೋಡ್ ಲಾರಿಗಳನ್ನು ಅನ್‍ಲೋಡ್ ಮಾಡುವ ಮಧ್ಯವರ್ತಿ ಕ್ಷಣಾರ್ಧದಲ್ಲಿ 50 ಸಾವಿರ ಕಮೀಷನ್ ಸಂಪಾದಿಸುತ್ತಾನೆ. ದುಡ್ಡಿರುವವರು ಇನ್ನಷ್ಟು ದುಡಿಯಬಹುದು, ಬದುಕುಬಹುದೇ ಎಂಬ ವಾತಾವರಣವಿದೆಯೇ ಹೊರತು ಶ್ರಮಜೀವಿಗಳು ದುಡಿದು ಬದುಕುವ ಅವಕಾಶ ತುಂಬ ಕಡಿಮೆ ಇದೆ. ಗಾಂಧೀಜಿಯವರ ಸ್ವರಾಜ್ಯದ ಕನಸು ನನಸಾಗಿಲ್ಲ. ಸರ್ಕಾರದ ಹಣ ಕಬಳಿಸಲು ಎಲ್ಲರೂ ತಮ್ಮನ್ನು ತಾವು ಹಿಂದುಳಿದವರು ಎಂದು ಹೇಳಿಕೊಳ್ಳಲು ಹವಣಿಸುತ್ತಿದ್ದಾರೆ. ಎಸ್ಟಿ ಪಟ್ಟಿಗೆ ಸೇರಿಸಿ ಎಂದು ದುಂಬಾಲು ಬೀಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜಕಾರಣಿಗಳು ತಮ್ಮ ಮೇಲಿನ ಗೌರವ ಕಳೆದುಕೊಳ್ಳುತ್ತಿದ್ದಾರೆ. ಹೆಣ್ಣುಮಕ್ಕಳ ರಕ್ಷಣೆ ಏನಾಯ್ತು ಎಂದು ಪ್ರಶ್ನಿಸುವ ಸಾಮಥ್ರ್ಯ ಇಲ್ಲವಾಗಿದೆ. ಶಾಸಕಾಂಗ ಸೃಷ್ಟಿ ಕಾರ್ಯಾಂಗ ಸ್ಥಿತಿ, ನ್ಯಾಯಾಂಗ ಲಯ ಧರ್ಮವನ್ನು ಪಾಲನೆ ಮಾಡಬೇಕಿತ್ತು. ಹಂತಹಂತವಾಗಿ ಎಲ್ಲವೂ ಏರುಪೇರಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಭಾರತದ ಸಂವಿಧಾನ ವಿಶ್ವದಲ್ಲೇ ಅತಿ ಹೆಚ್ಚು ಬಾರಿ ಅಂದರೆ ಸರಿಸುಮಾರು 140ಕ್ಕೂ ಹೆಚ್ಚು ಬಾರಿ ತಿದ್ದುಪಡಿಯಾಗಿದೆ ಎಂದರು.

Translate »