ಬೈಕ್‍ಗೆ ಮಿನಿಲಾರಿ ಡಿಕ್ಕಿ: ಜಂಗಲ್ ಲಾಡ್ಜ್ ಸಫಾರಿ ವಾಹನ ಚಾಲಕ ಸಾವು
ಮೈಸೂರು

ಬೈಕ್‍ಗೆ ಮಿನಿಲಾರಿ ಡಿಕ್ಕಿ: ಜಂಗಲ್ ಲಾಡ್ಜ್ ಸಫಾರಿ ವಾಹನ ಚಾಲಕ ಸಾವು

June 2, 2020

ಮೈಸೂರು, ಜೂ.1(ಎಂಟಿವೈ)-ಮೈಸೂರಿಂದ ಕೇರಳಕ್ಕೆ ತರಕಾರಿ ಸಾಗಿಸುತ್ತಿದ್ದ ಮಿನಿ ಲಾರಿಯೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಸಫಾರಿ ವಾಹನದ ಚಾಲಕ ಮೃತಪಟ್ಟಿರುವ ಘಟನೆ ನಾಗರಹೊಳೆ ಅಭಯಾರಣ್ಯದ ಅಂತರಸಂತೆ ವಲಯದಲ್ಲಿ ಭಾನುವಾರ ಸಂಜೆ ನಡೆದಿದೆ.

ಹೆಚ್.ಡಿ.ಕೋಟೆ ತಾಲೂಕು ಕಾರಾಪುರದಲ್ಲಿರುವ ಪ್ರವಾಸೋದ್ಯಮ ಇಲಾಖೆ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್‍ನ ಸಫಾರಿ ವಾಹನದ ಚಾಲಕ, ಕಾರಾಪುರ ನಿವಾಸಿ ಚೋಟು(35) ಮೃತಪಟ್ಟವರು. ಭಾನುವಾರ ಸಂಜೆ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‍ನಿಂದ ಬೈಕ್‍ನಲ್ಲಿ ಅಂತರಸಂತೆ ಕಡೆಗೆ ಚೋಟು ತೆರಳುತ್ತಿದ್ದಾಗ, ಮೈಸೂರಿಂದ ಕೇರಳಕ್ಕೆ ತರಕಾರಿ ಸಾಗಿಸುತ್ತಿದ್ದ ಮಿನಿಲಾರಿ ಡಿಕ್ಕಿ ಹೊಡೆದ ಪರಿಣಾಮ ಚೋಟು ತಲೆಗೆ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ಈ ಹಿನ್ನೆಲೆಯಲ್ಲಿ ಅವರನ್ನು ಹೆಚ್.ಡಿ.ಕೋಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಚೋಟು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಅಂತರಸಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎರಡೂ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ನಾಳೆ(ಜೂ.2) ಮಧ್ಯಾಹ್ನ ಮೃತ ಚೋಟುವಿನ ಅಂತ್ಯಕ್ರಿಯೆ ಕಾರಾಪುರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Translate »