ಕನಕದಾಸರು ವಿಶ್ವ ಮಾನವ ಕಲ್ಪನೆ ಹೊಂದಿದ್ದರು: ಸಿಎಂ ಗುಣಗಾನ
News

ಕನಕದಾಸರು ವಿಶ್ವ ಮಾನವ ಕಲ್ಪನೆ ಹೊಂದಿದ್ದರು: ಸಿಎಂ ಗುಣಗಾನ

November 23, 2021

ಬೆಂಗಳೂರು, ನ. 22(ಕೆಎಂಶಿ)- ಕನಕದಾಸರ ತ್ರಿಪದಿಗಳು, ಸಾಹಿತ್ಯ, ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಂಕಲ್ಪ ಮಾಡುವ ದಿನವಿದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಸೋಮವಾರ ಶಾಸಕರ ಭವನದ ಆವರಣದ ಬಳಿ ಇರುವ ಸಂತ ಕವಿ ಶ್ರೀ ಕನಕದಾಸರ ಪುತ್ಥಳಿಯ ಬಳಿ ಕನಕದಾಸ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ, ನಂತರ ಪ್ರತಿಕ್ರಿಯೆ ನೀಡಿದರು.

ದಾಸರಲ್ಲಿ ಅತ್ಯಂತ ಶ್ರೇಷ್ಠ ದಾಸರು ಕನಕದಾಸರು. ಕನ್ನಡ ನಾಡು ಕಂಡ ದಾಸ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ ತತ್ವಜ್ಞಾನಿ ಹಾಗೂ ಸಮಾಜ ಸುಧಾರಕರು. ವಿಶ್ವ ಮಾನವ ಕಲ್ಪನೆ ಹೊಂದಿದ್ದ ಮಾನವೀಯ ಗುಣಗಳನ್ನು ಪ್ರತಿಪಾದಿಸಿ, ಸಮಾನತೆ ಸಾರಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶಿಗ್ಗಾವಿಯಲ್ಲಿ ಹುಟ್ಟಿದ ಅವರ ಕರ್ಮಭೂಮಿ ಕಾಗಿನೆಲೆ. ದಾಸ ಪದ ಹಾಡಿ ಜೀವನದ ಸಾರವನ್ನು ತಿಳಿಸಿದರು.ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ- ಎಂದು ಮಾರ್ಮಿಕವಾಗಿ ತಿಳಿಸಿದ ಅವರು ರಚಿಸಿರುವ ರಾಮಧಾನ್ಯಚರಿತೆ ಸೇರಿದಂತೆ ಹಲವಾರು ಸಾಹಿತ್ಯಗಳು ನಮಗೆ ದಾರಿ ದೀಪ. ಅವರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತ.ಅವುಗಳ ಮೂಲಕ ಸಮಾಜದಲ್ಲಿ ಶಾಂತಿ ಸಮಾನತೆ, ಪ್ರಗತಿ ಸಾಧಿಸಲು ಸಾಧ್ಯವಿದೆ. ಪರಿವರ್ತನೆಯ ಹರಿಕಾರರು, ತಮ್ಮ ರಾಜಸತ್ವವನ್ನು ಬಿಟ್ಟು, ಅವರು ದಾಸಶ್ರೇಷ್ಠರಾಗಿದ್ದಾರೆ ಎಂದು ತಿಳಿಸಿದರು.

ಸಂತರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಲು ಕಾಗಿನೆಲೆಯಲ್ಲಿ ಅರಮನೆ, ಸ್ಮಾರಕ ನಿರ್ಮಿಸಲಾಗಿದೆ. ಇದೇ ವೈಚಾರಿಕತೆಗೆ ಸೇರಿದ ಸಂಗೊಳ್ಳಿ ರಾಯಣ್ಣನ ಸಮಾಧಿ ಹಾಗೂ ಮ್ಯೂಸಿಯಂ ನಿರ್ಮಿಸಲಾಗುತ್ತಿದೆ. ಸಂಗೊಳ್ಳಿ ರಾಯಣ್ಣನ ಹೆಸರಿ ನಲ್ಲಿ ಸೈನಿಕ ಶಾಲೆಯನ್ನು ಒಟ್ಟು 230 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

ನಮ್ಮ ಯುವಕರ ಆದರ್ಶಪ್ರಾಯ ಬದುಕಿಗೆ ಶಿಸ್ತಿನ ಸೈನಿಕ ಶಾಲೆಯನ್ನು ನಿರ್ಮಿಸಿ ಕೇಂದ್ರದ ರಕ್ಷಣಾ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಈ ಶಾಲೆಯನ್ನು ರಕ್ಷಣಾ ಇಲಾಖೆಗೆ ಹಸ್ತಾಂತರಿಸುವ ಇಚ್ಛೆಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.

Translate »