`ಕಾವೇರಿ ಕೂಗು’ ಹಣ ಸಂಗ್ರಹ-ಇಶಾ ಫೌಂಡೇಶನ್  ವಿರುದ್ಧ ತನಿಖೆಗೆ ಸರ್ಕಾರದ ನಿಲುವೇನು?: ಹೈಕೋರ್ಟ್ ಪ್ರಶ್ನೆ
News

`ಕಾವೇರಿ ಕೂಗು’ ಹಣ ಸಂಗ್ರಹ-ಇಶಾ ಫೌಂಡೇಶನ್ ವಿರುದ್ಧ ತನಿಖೆಗೆ ಸರ್ಕಾರದ ನಿಲುವೇನು?: ಹೈಕೋರ್ಟ್ ಪ್ರಶ್ನೆ

March 10, 2021

ಬೆಂಗಳೂರು, ಮಾ.9- `ಕಾವೇರಿ ಕೂಗು’ ಅಭಿಯಾನವನ್ನು ಸರಕಾರಿ ಯೋಜನೆ ಎಂದು ಬಿಂಬಿಸಿ ಸಾರ್ವ ಜನಿಕರಿಂದ ಹಣ ಪಡೆಯಲಾಗಿದೆ ಎಂಬ ಬಗ್ಗೆ ತನಿಖೆ ನಡೆಸುವ ಕುರಿತು ನಿಲುವು ತಿಳಿಸು ವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೋಮ ವಾರ ಮೌಖಿಕ ಸೂಚನೆ ನೀಡಿದೆ.
ಕಾವೇರಿ ಕೂಗು ಅಭಿಯಾನ ಹೆಸರಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಣ ವಿಚಾರ ಸಂಬಂಧದ ಪಿಐಎಲ್ ಅನ್ನು ಸಿಜೆ ಎಎಸ್ ಓಕ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಸರಕಾರಿ ವಕೀಲರು, ಕಾವೇರಿ ಕೂಗು ಯೋಜನೆ ಸಂಪೂರ್ಣವಾಗಿ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್/ಇಶಾ ಔಟ್ ರೀಚ್‍ಗೆ ಸಂಬಂಧಿಸಿದ್ದು. ಈ ಯೋಜನೆಯಲ್ಲಿ ಸರಕಾರದ ಯಾವುದೇ ಪಾತ್ರವಿಲ್ಲ. ಯೋಜನೆಗೆ ಸರಕಾರ ಯಾವುದೇ ಭೂಮಿ ಅಥವಾ ಹಣ ಕೊಡುತ್ತಿಲ್ಲ ಎಂದು ವಿವರಿಸಿದರು. ಕಾವೇರಿ ಕೂಗು ಅಭಿಯಾನವನ್ನು ಸರಕಾರಿ ಯೋಜನೆ ಎಂದು ಬಿಂಬಿಸಿ ಹಣ ಸಂಗ್ರಹಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ಸಾಧ್ಯವೇ? ಎಂದು ಪೀಠ ಪ್ರಶ್ನಿಸಿತು. ಸರಕಾರಿ ವಕೀಲರು, `ಯೋಜನೆಗೂ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲವೆಂದು ಈಗಾಗಲೇ ರಾಜ್ಯ ಸರಕಾರ ಸ್ಪಷ್ಟನೆ ನೀಡಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಇಶಾ ಫೌಂಡೇ ಶನ್ ಕೂಡ ಇದು ಸರಕಾರದ ಯೋಜನೆಯಲ್ಲ ಎಂದು ತಿಳಿಸಲು ಸಾಕಷ್ಟು ಕಾಲಾವಕಾಶ ತೆಗೆದುಕೊಂಡಿತ್ತು. ನೀವು ಇದೀಗ ವಿಷಯ ತಿಳಿಸಿದ್ದೀರಿ. ಹಾಗಾಗಿ ಕಾವೇರಿ ಕೂಗು ಯೋಜನೆಯನ್ನು ಸರಕಾರಿ ಯೋಜನೆ ಎಂದು ಹಣ ಸಂಗ್ರಹಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಲು ಅಧಿಕಾರಿ ನೇಮಕ ಮಾಡಲು ಸಾಧ್ಯವೇ ಎಂಬ ಬಗ್ಗೆ ನಿಲುವು ತಿಳಿಸಿ. ಇಲ್ಲದಿದ್ದರೇ ನ್ಯಾಯಾಲಯವೇ ಸೂಕ್ತ ನಿರ್ದೇಶನ ನೀಡಲಿದೆ ಎಂದು ಹೇಳಿ ವಿಚಾರಣೆಯನ್ನು ಮಾ.24ಕ್ಕೆ ಮುಂದೂಡಿತು.

Translate »