ಮೈಸೂರು, ಜೂ. 1(ಆರ್ಕೆ)- ಜಿಲ್ಲಾಡಳಿತ ವಿಧಿಸಿರುವ ಸಂಪೂರ್ಣ ಲಾಕ್ಡೌನ್ ನಿರ್ಬಂಧ ಆದೇಶವನ್ನು ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.
ಸೋಮವಾರ ಲಾಕ್ಡೌನ್ ಸಡಿಲಿಕೆಯನ್ನೇ ನೆಪ ಮಾಡಿಕೊಂಡು ಅಗತ್ಯ ವಸ್ತು ಖರೀದಿಗೆ ತಂಡೋಪ ತಂಡವಾಗಿ ಜನರು ಸಂತೆ, ಜಾತ್ರೆಗೆ ಸೇರಿದಂತೆ ನೆರೆದಿ ದ್ದರಿಂದ ಸಾಮಾಜಿಕ ಅಂತರವಿಲ್ಲದೆ ಕೊರೊನಾ ಸೋಂಕು ಹರಡಲು ಅವಕಾಶ ಮಾಡಿಕೊಟ್ಟಿದ್ದರಿಂದ ಎಚ್ಚೆತ್ತ ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರ ಗುಪ್ತ ಹಾಗೂ ಎಸ್ಪಿ ಸಿ.ಬಿ.ರಿಷ್ಯಂತ್ ಅವರು, ಕಟ್ಟುನಿಟ್ಟಾಗಿ ಲಾಕ್ಡೌನ್ ಆದೇಶವನ್ನು ಜಾರಿ ಗೊಳಿಸಬೇಕೆಂದು ಸೋಮವಾರ ಸಂಜೆಯೇ ಅಧೀನಾಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಪರಿಣಾಮ ಇಂದು ಬೆಳಗ್ಗೆ 6 ಗಂಟೆಯಿಂದಲೇ ರಸ್ತೆಗಿಳಿದಿದ್ದ ಎಲ್ಲಾ ಸಿವಿಲ್ ಮತ್ತು ಸಂಚಾರ ಠಾಣೆಗಳ ಇನ್ಸ್ಪೆಕ್ಟರ್ಗಳು, ಪ್ರಮುಖ ರಸ್ತೆ, ಸರ್ಕಲ್ಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿ ದಿನದ 24 ಗಂಟೆಯೂ ಮೂರೂ ಪಾಳಿಯಲ್ಲಿ ಸಿಬ್ಬಂದಿಗಳನ್ನು ಬಂದೋ ಬಸ್ತ್ ಕರ್ತವ್ಯಕ್ಕೆ ನಿಯೋಜಿಸಿ ಅನಗತ್ಯವಾಗಿ ವಾಹನ ಗಳು ಸಂಚರಿಸದಂತೆ ನಿಯಂತ್ರಿಸಿದರು.
ಸಯ್ಯಾಜಿರಾವ್ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಚಾಮರಾಜ ಜೋಡಿ ರಸ್ತೆ, ಅಶೋಕ ರಸ್ತೆ, ಇರ್ವಿನ್ ರಸ್ತೆ, ಅಗ್ರಹಾರ ಸರ್ಕಲ್, ಸರ್ಕಾರಿ ಸಂಸ್ಕøತ ಪಾಠ ಶಾಲೆ, ಹಾರ್ಡಿಂಜ್ ಸರ್ಕಲ್, ಶೇಷಾದ್ರಿ ಅಯ್ಯರ್ ರಸ್ತೆ, ಓಲ್ಡ್ ಆರ್ಎಂಸಿ ಸರ್ಕಲ್, ಉದಯಗಿರಿ ಮುಖ್ಯ ರಸ್ತೆ ಸೇರಿದಂತೆ ಮೈಸೂರು ನಗರದಾದ್ಯಂತ ಬ್ಯಾರಿ ಕೇಡ್ ಅಳವಡಿಸಿ ಪೊಲೀಸರು ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದರು. ರೋಗಿಗಳನ್ನು ಆಸ್ಪತ್ರೆಗೆ ಕರೆದೊ ಯ್ಯುವ ಆಂಬುಲೆನ್ಸ್, ಖಾಸಗಿ ವಾಹನಗಳು, ಸರ್ಕಾರಿ ಅಧಿಕಾರಿಗಳು, ವೈದ್ಯರು, ನರ್ಸ್ಗಳು, ಮಾಧ್ಯಮ ಪ್ರತಿನಿಧಿಗಳು, ಕೋವಿಡ್-19 ಸಂಬಂಧ ಸೇವೆ ಸಲ್ಲಿಸು ತ್ತಿರುವ ಮುಂಚೂಣಿ ಕಾರ್ಯಕರ್ತರನ್ನು ಹೊರತು ಪಡಿಸಿ ಉಳಿದಂತೆ ಇನ್ನಿತರ ವಾಹನಗಳು ಓಡಾಡ ದಂತೆ ನಿರ್ಬಂಧ ವಿಧಿಸಲಾಗಿದೆ.
ಆದರೆ, ಡಯೊಗ್ನೋಸ್ಟಿಕ್ ಸೆಂಟರ್ಗಳಲ್ಲಿ ಸಿಟಿ ಸ್ಕ್ಯಾನಿಂಗ್ ಮಾಡಿಸಿದ ರಿಪೋರ್ಟ್ ಪಡೆದುಕೊಂಡು ಹೋಗುವವರಿಗೆ ಬ್ಯಾರಿಕೇಡ್ ತೆಗೆಯದ ಪೊಲೀ ಸರು, ಕಾರಣ ಹೇಳಿ ಬಿಲ್ ತೋರಿಸಿದರೂ ಸ್ಪಂದಿ ಸದೇ ಇದ್ದರಿಂದ ಹಲವರಿಗೆ ತೀವ್ರ ತೊಂದರೆ ಉಂಟಾ ಯಿತು. ಉಳಿದಂತೆ ಮೆಡಿಕಲ್ ಸ್ಟೋರ್, ಹಾಲಿನ ಬೂತ್ಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿಗಳು ಎಂದಿನಂತೆ ಇಂದೂ ಮುಚ್ಚಿದ್ದರಿಂದ ಮೈಸೂರು ನಗರ ಸಂಪೂರ್ಣ ಸ್ತಬ್ಧವಾಗಿತ್ತು. ಹೋಟೆಲ್, ರೆಸ್ಟೋರೆಂಟ್ಗಳಿಂದ ಆಹಾರ ಪಾರ್ಸಲ್ಗಳನ್ನು ಮನೆ-ಮನೆಗೆ ಪೂರೈಸುವ, ನಿರಾಶ್ರಿತರಿಗೆ ಆಹಾರ, ನೀರು ಒದಗಿಸುವ ದಾನಿಗಳ ವಾಹನಗಳು ಮಾತ್ರ ಎಂದಿನಂತೆ ಸಂಚರಿಸುತ್ತಿದ್ದುದು ಕಂಡುಬಂದಿತು.