ಮಹಾ ಲಂಚ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪನ ಸರ್ಕಾರವೇ ರಕ್ಷಿಸುತ್ತಿದೆ
ಮೈಸೂರು

ಮಹಾ ಲಂಚ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪನ ಸರ್ಕಾರವೇ ರಕ್ಷಿಸುತ್ತಿದೆ

March 7, 2023

ಮೈಸೂರು, ಮಾ.6(ಎಂಟಿವೈ)- ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‍ಡಿಎಲ್) ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ದಾವಣ ಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನನ್ನು ಸರ್ಕಾ ರವೇ ರಕ್ಷಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಮೈಸೂರಲ್ಲಿ ಸೋಮವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಶೇ.40 ಕಮಿಷನ್ ದಂಧೆಯಲ್ಲಿ ಎಲ್ಲರೂ ನಿರತರಾಗಿದ್ದಾರೆ. ಅದರ ಫಲವೇ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣ ಬೆಳಕಿಗೆ ಬಂದಿದೆ. ಆದರೂ, ಬಿಜೆಪಿ ನಾಯಕರು ಏನೂ ನಡೆದೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಭ್ರಷ್ಟಾಚಾರ, ಲಂಚ ಸ್ವೀಕಾರ ಪ್ರಕರಣದಲ್ಲಿ ಮೊದಲನೇ ಆರೋಪಿ ಬಿಜೆಪಿ ಶಾಸಕನೇ. ಆದರೂ, ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿ ದರು. ಭಾರೀ ಮೊತ್ತದ ಹಣ ಲಂಚ ಪಡೆ ಯುವಾಗ ಸಿಕ್ಕಿ ಬಿದ್ದಿದ್ದರೂ ಹಾಗೂ ಮನೆ ಯಲ್ಲಿ ಅಪಾರ ಪ್ರಮಾಣದ ನಗದು ಸಿಕ್ಕಿ ದ್ದರೂ ಪ್ರಕರಣದ ಪ್ರಮುಖ ಆರೋಪಿ ಯನ್ನು ಬಂಧಿಸಿಲ್ಲ. ಎಫ್‍ಐಆರ್ ದಾಖ ಲಾಗಿ ಐದು ದಿನ ಕಳೆದರೂ ಶಾಸಕ ಮಾಡಾಳ್ ವಿರೂಪಾಕ್ಷಪ್ಪನನ್ನು ಬಂಧಿಸದೇ ಇರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ತಲೆಮರೆಸಿಕೊಂಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಬಣ್ಣ ಬಯಲಾಗು ತ್ತದೆ ಎಂದು ಪ್ರಕರಣವನ್ನು ಬಿಜೆಪಿ ಸರ್ಕಾರವೇ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಎಸ್‍ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಬಂದಾಗಲೇ ಮಾಡಾಳ್ ವಿರೂಪಾಕ್ಷಪ್ಪನನ್ನು ಯಾಕೆ ಬಂಧಿಸಲಿಲ್ಲ. ಆತ ಎಲ್ಲಿದ್ದಾನೆ ಎಂದು ಸರ್ಕಾರಕ್ಕೆ ಗೊತ್ತಿದೆ. ತನ್ನ ಮನೆಯಲ್ಲೇ ಓಡಾಡಿಕೊಂಡಿದ್ದರೂ ಪೊಲೀಸರು ಬಂಧಿಸಲು ಸಾಧ್ಯವಾಗಿಲ್ಲ. ಕೇವಲ ನಾಟಕ ಮಾಡುತ್ತಿದ್ದಾರೆ. ಲುಕ್‍ಔಟ್ ನೋಟಿಸ್ ಹೆಸರಿನಲ್ಲಿ ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಎಂದು ಟೀಕಿಸಿದರು.

ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಾಗಲೆಲ್ಲಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಕ್ಷಿ ಕೇಳುತ್ತಿದ್ದರು. ಈಗ ಅವರದ್ದೇ ಪಕ್ಷದವರು ರೆಡ್‍ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಅವರ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದರೂ ನಮಗೆ ಮುಜುಗರವಿಲ್ಲ ಎನ್ನುತ್ತಿದ್ದಾರೆ. ಈ ಪ್ರಕರಣದಲ್ಲಿ ಬಿಜೆಪಿಯವರಿಗೆ ಮುಜುಗರ ಆಗಿದೆ. ಅಪ್ಪ ಅಧ್ಯಕ್ಷ ಎಂಬ ಕಾರಣದಿಂದಲೇ ಮಗನಿಗೆ ಲಂಚ ಕೊಡಲು ಬಂದಿರುವುದು. ಹೀಗಾಗಿ ಅಪ್ಪನೇ (ಮಾಡಾಳ್ ವಿರೂಪಾಕ್ಷಪ್ಪ) ಮೊದಲ ಆರೋಪಿ. ಅವನನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಸಾಬೀತು ಪಡಿಸಿದರೆ ಇಂದೇ ರಾಜೀನಾಮೆ: ನಾನು ಲೋಕಾಯುಕ್ತ ಬಂದ್ ಮಾಡಿರಲಿಲ್ಲ. ಒಂದು ವೇಳೆ ಲೋಕಾಯುಕ್ತವನ್ನು ಬಂದ್ ಮಾಡಿರುವುದನ್ನು ಸಾಬೀತುಪಡಿಸಿದರೆ ತಕ್ಷಣ ರಾಜೀನಾಮೆ ಕೊಡುತ್ತೇನೆ. ನಾವು ಭ್ರಷ್ಟಾಚಾರ ನಿಗ್ರಹ(ಎಸಿಬಿ) ರಚನೆ ಮಾಡಿದ್ದೆವು. ಆದರೂ ಲೋಕಾಯುಕ್ತದ ಯಾವ ಅಧಿಕಾರವನ್ನೂ ಕಿತ್ತುಕೊಂಡಿರಲಿಲ್ಲ. ನಮ್ಮ ಕಾಲದಲ್ಲೂ ಲೋಕಾಯುಕ್ತ ಇತ್ತು. ಎಲ್ಲ ಸತ್ಯ ಗೊತ್ತಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

2018ರ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ ನಂತರ ಎಸಿಬಿ ರದ್ದು ಮಾಡುತ್ತೇವೆ ಎಂದು ಹೇಳಿತ್ತು. ಆದರೆ ಮಾಡಲಿಲ್ಲ. ಎಸಿಬಿ ರದ್ದು ಮಾಡಿದ್ದು ನ್ಯಾಯಾಲಯವೇ ಹೊರತು ಬಿಜೆಪಿಯಲ್ಲ. ಆ ಪಕ್ಷದವರಿಗೆ ಸುಳ್ಳು ಹೇಳುವುದು ಚಟ, ಸುಳ್ಳೇ ಬಿಜೆಪಿ ಮನೆ ದೇವರು. ಹೀಗಾಗಿ ಲೋಕಾಯುಕ್ತ ವಿಚಾರದಲ್ಲೂ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

Translate »