ಬೆಂಗಳೂರು, ಜು.16(ಕೆಎಂಶಿ)- ಭೂ ಸುಧಾರಣೆ ಕಾಯಿದೆಗೆ ಸರ್ಕಾರ ತಿದ್ದುಪಡಿ ತಂದಿರುವುದರ ಹಿಂದೆ ಭಾರೀ ಷಡ್ಯಂತ್ರ ಅಡಗಿದೆ. ಇದು ಗಣಿ ಹಗರಣಕ್ಕಿಂತ ದೊಡ್ಡದು. ಇದರಲ್ಲಿ ಇಡೀ ಸರ್ಕಾರವೇ ಭಾಗಿಯಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ತಮ್ಮ ನಿವಾಸದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತ ನಾಡಿದ ಅವರು, ಸರ್ಕಾರದ ಈ ನಿರ್ಧಾರ ವಿರೋಧಿಸಿ ಕಾಂಗ್ರೆಸ್ ಪಕ್ಷ ಬೃಹತ್ ಹೋರಾಟ ನಡೆಸಲಿದೆ. ಹಳ್ಳಿ ಮಟ್ಟದಿಂದ ಹೋರಾಟವನ್ನು ಸಂಘಟಿಸಲಾಗುವುದು. ಈ ಕುರಿತು ಬೇರೆ ಬೇರೆ ಪಕ್ಷಗಳು ಹಾಗೂ ರೈತ ಸಂಘಟನೆಗಳ ಜೊತೆಗೆ ಚರ್ಚಿಸಲಾಗುವುದು ಎಂದರು.
ಕೊರೊನಾದಂಥ ಸಂಕಷ್ಟದ ಸಮಯವನ್ನು ದುರುಪಯೋಗ ಪಡಿಸಿಕೊಂಡು ಭೂ ಸುಧಾರಣೆ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಂದಿರುವ ತಿದ್ದುಪಡಿಯನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು, ತಿದ್ದುಪಡಿ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ ಹಾಗೂ ಸಾರ್ವಜನಿಕವಾಗಿ ಚರ್ಚೆಯಾಗಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. ಕೊರೊನಾದಂಥ ಸಂಕಷ್ಟದ ಸಮಯದಲ್ಲಿ ಸರ್ಕಾರ ಕಾಯಿದೆಗೆ ತಿದ್ದುಪಡಿ ತರುವುದಿಲ್ಲ ಎಂದು ಭಾವಿಸಿದ್ದೆ. ಆದರೆ ಸರ್ಕಾರ ಈ ಸಂದರ್ಭವನ್ನು ಬಳಸಿಕೊಂಡು, ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದೆ. ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ ದಿನ ರಾಜ್ಯಕ್ಕೆ ಕರಾಳ ದಿನ. ಬಡವರು, ಕೂಲಿ-ಕಾರ್ಮಿಕರು, ಹಿಂದುಳಿದವರು ಹಾಗೂ ರೈತರ ವಿರೋಧಿ ತಿದ್ದುಪಡಿ ಇದಾಗಿದೆ.
ಆದರೆ, ಈಗ ಈ ಎಲ್ಲ ಸೆಕ್ಷನ್ಗಳನ್ನು ಪೂರ್ವಾನ್ವಯ ಆಗುವಂತೆ ರದ್ದು ಮಾಡ ಲಾಗಿದೆ. ಸೆಕ್ಷನ್ 63ಕ್ಕೆ ತಿದ್ದುಪಡಿ ತರಲಾಗಿದೆ. ಜೊತೆಗೆ ಭೂಮಿ ಸಂಬಂಧ ಕೋರ್ಟ್ಗಳಲ್ಲಿ ನಡೆಯುತ್ತಿರುವ ವ್ಯಾಜ್ಯಗಳನ್ನು ರದ್ದು ಮಾಡಲಾಗಿದೆ. ಈ ಮೂಲಕ ವಿವಿಧ ಜಿಲ್ಲೆಗಳಲ್ಲಿ ಒಟ್ಟು 13 ಸಾವಿರ ಕೇಸುಗಳಿಗೆ ತಿಲಾಂಜಲಿ ಇಡಲಾಗಿದೆ ಎಂದರು.
ಕೇರಳದಲ್ಲಿ ಒಂದು ಕುಟುಂಬ 20, ತಮಿಳುನಾಡು 30, ಆಂಧ್ರದಲ್ಲಿ 54 ಎಕರೆ ಭೂಮಿ ಹೊಂದಲು ಅವಕಾಶವಿದ್ದರೆ, ಆದರೆ ಇಲ್ಲಿ ಒಂದು ಕುಟುಂಬ 432 ಎಕರೆ ಹೊಂದಲು ಅವಕಾಶ ಮಾಡಿಕೊಡಲಾಗಿದೆ. 432 ಎಕರೆ ಖರೀದಿ ಮಾಡುವವರು ಯಾರು? ಬಂಡ ವಾಳಶಾಹಿಗಳು, ರಿಯಲ್ ಎಸ್ಟೇಟ್ ಉದ್ಯಮ ಮಾಡುವವರು, ಕಾರ್ಪೊರೇಟ್ ಕಂಪನಿ ಗಳವರು ಮಾತ್ರ. ಸೆಕ್ಷನ್ 63(2ಎ) ಪ್ರಕಾರ 20 ಯೂನಿಟ್ವರೆಗೆ ಭೂಮಿ ಖರೀದಿಸುವ ಅವಕಾಶ ಇತ್ತು. ಈಗ 80 ಯೂನಿಟ್ಗೆ ಭೂಮಿ ಖರೀದಿ ಪ್ರಮಾಣ ಹೆಚ್ಚಿಸಲಾಗಿದೆ. ತರಿ, ಖುಷ್ಕಿ, ಬಾಗಾಯ್ತು ಜಮೀನುಗಳನ್ನು ಯಾರು ಬೇಕಾದರೂ ಖರೀದಿ ಮಾಡಬಹುದು. 87 ಲಕ್ಷ ರೈತ ಕುಟುಂಬಗಳು ರಾಜ್ಯದಲ್ಲಿವೆ. ಸರಾಸರಿ 3 ಎಕರೆ ಜಮೀನನ್ನು ಒಂದು ಕುಟುಂಬ ಹೊಂದಿರಬಹುದು. ನಾಲ್ಕು ಕೋಟಿ ರೈತರು ಇಲ್ಲಿ ಬೇಸಾಯ ನಡೆಸುತ್ತಿದ್ದಾರೆ. ಇದೀಗ ಇಡೀ ರೈತ ಸಮುದಾಯವನ್ನು ಸರ್ಕಾರ ನಾಶ ಮಾಡಲು ಹೊರಟಿದೆ. ರೈತರು ಬೀದಿ ಪಾಲಾಗುವುದರ ಜೊತೆಗೆ ಕಾರ್ಪೊರೇಟ್ ಕಂಪನಿಗಳ ಬಾಗಿಲು ಕಾಯುವ ಸ್ಥಿತಿ ನಿರ್ಮಾಣವಾಗುತ್ತದೆ. ಆಹಾರದ ಸ್ವಾವಲಂಬನೆ ಇದರಿಂದ ನಾಶವಾಗುತ್ತದೆ.
ಒಬ್ಬರಿಗೆ ಒಂದು ವೃತ್ತಿ ಎಂಬ ದೃಷ್ಟಿಕೋನದಲ್ಲಿ ಈ ಕಾಯಿದೆಯನ್ನು ಈ ಹಿಂದೆ ಜಾರಿಗೆ ತರಲಾಗಿತ್ತು. ಈಗ ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿ ಮಾಡುವುದಾದರೆ ಭೂ ಸುಧಾರಣೆ ಕಾಯಿದೆಯ ಮೂಲ ಉದ್ದೇಶವೇ ನಾಶವಾಗುತ್ತದೆ. ಗೇಣಿದಾರರಿಗೆ, ಬಡವರಿಗೆ ಸಿಗುತ್ತಿದ್ದ ರಕ್ಷಣೆಯನ್ನು ಸರ್ಕಾರ ಸಂಪೂರ್ಣವಾಗಿ ತೆಗೆದು ಹಾಕಿದೆ. ಖರೀದಿ ಮಾಡಿದ ಭೂಮಿಯನ್ನು ಕೃಷಿ ಉದ್ದೇಶಕ್ಕೇ ಬಳಸಬೇಕೆಂಬ ನಿಯಮವೇನಿಲ್ಲ. ಹೀಗಾಗಿ ರಿಯಲ್ ಎಸ್ಟೇಟ್ ಉದ್ಯಮ ಆ ಜಮೀನುಗಳಲ್ಲಿ ತಲೆ ಎತ್ತುತ್ತದೆ. ರಿಯಲ್ ಎಸ್ಟೇಟ್ ಉದ್ಯಮಿಗಳ ಮರ್ಜಿಗೆ ಒಳಗಾಗಿ ಸರ್ಕಾರ ತಿದ್ದುಪಡಿ ತಂದಿದೆ.
ಪ್ರಧಾನಿ ಮೋದಿ ಸರ್ಕಾರದ ಕುಮ್ಮಕ್ಕು: ಸರ್ಕಾರದ ಈ ನಿರ್ಧಾರಕ್ಕೆ ಪ್ರಧಾನಿ ಮೋದಿಯವರ ಸರ್ಕಾರದ ಕುಮ್ಮಕ್ಕು ಇದೆ. ಮೋದಿಯವರ ಸರ್ಕಾರಕ್ಕೆ ಬಡವರು, ರೈತರು, ಕೂಲಿ ಕಾರ್ಮಿಕರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಹೀಗಾಗಿಯೇ ಕೇಂದ್ರ ಸರ್ಕಾರ ಕೈಗಾರಿಕೆಗಳನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಸರ್ಕಾರಿ ಸ್ವಾಮ್ಯದಲ್ಲಿದ್ದರೆ ಮೀಸಲು ಸೌಲಭ್ಯ ಒದಗಿಸಬೇಕು. ಖಾಸಗಿಯವರ ವಶಕ್ಕೆ ಕೈಗಾರಿಕೆಗಳನ್ನು ಕೊಟ್ಟರೆ ಮೀಸಲು ಸೌಲಭ್ಯವೇ ಇರುವಂತಿಲ್ಲ. ನೇರವಾಗಿ ಮೀಸಲು ಪದ್ಧತಿ ತೆಗೆದರೆ ಜನ ದಂಗೆ ಏಳುತ್ತಾರೆ ಎಂಬ ಕಾರಣಕ್ಕೆ ಹಿಂಬಾಗಿಲ ಮೂಲಕ ಕೈಗಾರಿಕೆಗಳನ್ನು ಮಾರಲು ಕೇಂದ್ರ ಮುಂದಾಗಿದೆ. ಜಮೀನ್ದಾರಿ ಹಾಗೂ ಜಹಗೀರು ಪದ್ಧತಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಕೃಷಿ ನಾಶವಾಗುವುದರ ಜೊತೆಗೆ ರೈತರು ನಿರ್ಗತಿಕರಾಗುತ್ತಾರೆ. ಹಾಗೆಯೇ ಜೊತೆಗೆ ಆಹಾರದ ಸ್ವಾವಲಂಬನೆ ಸಂಪೂರ್ಣವಾಗಿ ಹೋಗುತ್ತದೆ. ಸರ್ಕಾರಕ್ಕೆ ಸದುದ್ದೇಶ ಇದ್ದಿದ್ದರೆ ವಿಧಾನ ಮಂಡಲ ಅಧಿವೇಶನ ಕರೆದು ವಿವರಣೆ ನೀಡಬಹುದಿತ್ತು. ಕೊರೊನಾ ವೇಗವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಕಾಯಿದೆಗೆ ತುರ್ತಾಗಿ ತಿದ್ದುಪಡಿ ತರುವ ಅಗತ್ಯವಾದರೂ ಏನಿತ್ತು. ಪ್ರಾಮಾಣಿಕರಾಗಿದ್ದರೆ ಅಧಿವೇಶನ ಕರೆದು ಚರ್ಚಿಸಬಹುದಿತ್ತು. ಲಾಕ್ಡೌನ್ ಇರುವುದರಿಂದ ರೈತ ಸಂಘಟನೆಗಳು ಪ್ರತಿಭಟನೆಗೆ ಮುಂದಾಗುವುದಿಲ್ಲ ಎಂದು ಭಾವಿಸಿ ಕಳ್ಳದಾರಿಯಲ್ಲಿ ತಿದ್ದುಪಡಿ ತರಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿಯೂ ಭೂ ಸುಧಾರಣೆ ವಿಷಯ ಇತ್ತು. ಭೂಮಿ ರಾಷ್ಟ್ರೀಕರಣವಾಗಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರೇ ಹೇಳಿದ್ದರು. ವಿನೋಬಾ ಭಾವೆಯವರು ಭೂದಾನ ಚಳವಳಿ ನಡೆಸಿದ್ದರು. ಆದರೆ, ರಾಜ್ಯ ಸರ್ಕಾರ ಶ್ರೀಮಂತರ ಕೈಗೇ ಭೂಮಿ ಕೊಡಲು ಹೊರಟಿದೆ. ಕಾರ್ಪೊರೇಟ್ ಕಂಪನಿಗಳು ಏಜೆಂಟ್, ರಿಯಲ್ ಎಸ್ಟೇಟ್ ಮಾಫಿಯಾದ ಒತ್ತಡಕ್ಕೆ ಮಣಿದಿದೆ ಎಂದು ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು