ನಾನು ಸಚಿವನಾಗಿರೋದೇ ಶಾಸಕ ಸುರೇಶ್‌ಗೌಡಗೆ ಹೊಟ್ಟೆ ಉರಿ ಸಚಿವ ಡಾ.ಕೆ.ಸಿ.ನಾರಾಯಣ್ ಗೌಡ ಕಿಡಿ
ಮೈಸೂರು

ನಾನು ಸಚಿವನಾಗಿರೋದೇ ಶಾಸಕ ಸುರೇಶ್‌ಗೌಡಗೆ ಹೊಟ್ಟೆ ಉರಿ ಸಚಿವ ಡಾ.ಕೆ.ಸಿ.ನಾರಾಯಣ್ ಗೌಡ ಕಿಡಿ

March 28, 2022

ಮೈಸೂರು, ಮಾ.೨೭(ಆರ್‌ಕೆಬಿ)- ಮಂಡ್ಯದಲ್ಲಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ಏನೂ ಕೆಲಸ ಮಾಡುತ್ತಿಲ್ಲ ಎಂಬ ಹೇಳಿಕೆ ನೀಡಿದ ಶಾಸಕ ಸುರೇಶ್‌ಗೌಡ ವಿರುದ್ಧ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣ ಗೌಡ ಕಿಡಿ ಕಾರಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಸಚಿವನಾಗಿರುವುದನ್ನು ಸಹಿಸದ ಸುರೇಶ್‌ಗೌಡ ಅವರಿಗೆ ನನ್ನನ್ನು ಕಂಡರೆ ಹೊಟ್ಟೆ ಉರಿ. ದೇವೇಗೌಡರಿಗೆ ಹತ್ತಿರ ಆಗೋದಕ್ಕೆಂದೇ ನನ್ನನ್ನ ಬೈಯ್ಯು ತ್ತಿದ್ದಾರೆ. ದೇವೇಗೌಡರು ಏನಾದರೂ ಕೊಡಬಹುದು ಎಂದೆನಿಸುತ್ತದೆ. ಹಾಗಾಗಿ ನನ್ನ ಮೇಲೆ ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಕೆಲಸ ಮಾಡಿಸಿಕೊಳ್ಳಲು ನನ್ನ ಬಳಿ ಬರುವ ಸುರೇಶ್‌ಗೌಡ, ಆದರೆ ನನ್ನ ಏಳಿಗೆ ಕಂಡರೆ ಅವರಿಗೆ ಸಹಿಸಲಾಗುವುದಿಲ್ಲ. ಅವರಿಗೂ ನನ್ನ ರೀತಿ ಸಚಿವನಾಗಬೇಕೆಂಬ ಆಸೆ ಇದೆ ಎನಿಸುತ್ತೆ. ಆದರೆ ಅವರಿಗೆ ಸಚಿವರಾಗಲು ಆಗುತ್ತಿಲ್ಲವಲ್ಲ ಎಂದು ವ್ಯಂಗ್ಯವಾಗಿ ಹೇಳಿದರು. ನಾನು ನನ್ನ ಕ್ಷೇತ್ರಕ್ಕಷ್ಟೇ ಸೀಮಿತನಾಗದೇ ಮಂಡ್ಯ ಜಿಲ್ಲೆಯಲ್ಲಿ ಮಾಡುತ್ತಿರುವ ಅಭಿವೃದ್ಧಿ ಕೆಲಸ ಅವರಿಗೆ ಸಹಿಸಲಾಗುತ್ತಿಲ್ಲ. ಇಡೀ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಸುರೇಶ್‌ಗೌಡರ ನಾಗಮಂಗಲ ಕ್ಷೇತ್ರಕ್ಕೂ ಏತ ನೀರಾವರಿ, ಕುಡಿಯುವ ನೀರಿನ ಕೆಲಸ ಮಾಡಿದ್ದೇವೆ. ಅದನ್ನ ಸುರೇಶ್‌ಗೌಡ ಮೊದಲು ತಿಳಿದು ಮಾತನಾಡಲಿ ಎಂದು ಹರಿಹಾಯ್ದರು.

ಹಿಜಾಬ್ ಕಾಂಗ್ರೆಸ್‌ನ ಕೂಸು: ಹಿಜಾಬ್ ವಿವಾದ ಕುರಿತು ಪ್ರತಿಕ್ರಿಯಿಸಿದ ಸಚಿವ ನಾರಾಯಣಗೌಡ, ಹಿಜಾಬ್ ವಿವಾದ ಸೃಷ್ಟಿಸಿದ್ದೇ ಕಾಂಗ್ರೆಸ್. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಕರ್ನಾಟಕದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹಿಜಾಬ್ ವಿವಾದ ಸೃಷ್ಟಿಸಿದೆ. ಇತ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ವಿಚಾರದಲ್ಲೂ ರಾಜಕೀಯ ಲಾಭ ಪಡೆಯಲು ಮುಂದಾಗುತ್ತಿದ್ದಾರೆ. ಧಾರ್ಮಿಕ ಕೇಂದ್ರಗಳ ಬಳಿ ವ್ಯಾಪಾರ ವಿಚಾರ ಬಂದಿರೋದು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ. ಕಾಂಗ್ರೆಸ್‌ನವರು ಮಾಡಿರುವ ನಿಯಮಗಳನ್ನು ಮುಂದುವರೆಸಿದ್ದೇವೆ. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಈ ನಿಯಮ ಬಂದಿರೋದು. ನಾವು ಹೊಸದಾಗಿ ಯಾವುದನ್ನೂ ಮಾಡಿಲ್ಲ. ಸಿದ್ದರಾಮಯ್ಯನವರು ರಾಜಕೀಯ ಮಾಡಲು ಈ ರೀತಿ ಮಾತನಾಡುತ್ತಾರೆ. ಇದನ್ನೆಲ್ಲಾ ಬಿಡಬೇಕು, ಅನವಶ್ಯಕವಾದ ಮಾತುಗಳಿಂದ ಯಾವುದೇ ಲಾಭವಿಲ್ಲ. ಓಟ್ ಬ್ಯಾಂಕ್‌ಗಾಗಿ ಈ ರೀತಿ ವಿವಾದಗಳ ಕಾಂಗ್ರೆಸ್‌ನವರು ಸೃಷ್ಟಿಸುತ್ತಿದ್ದಾರೆ. ಇದೆಲ್ಲ ಒಳ್ಳೆಯ ನಡೆಯಲ್ಲ ಎಂದು ವಾಗ್ದಾಳಿ ನಡೆಸಿದರು.

Translate »