ಮುಡಾ ಸಿಎ ನಿವೇಶನ ಹಂಚಿಕೆ ಸಂಬಂಧ ಉಪ ಸಮಿತಿ ರಚನೆ
ಮೈಸೂರು

ಮುಡಾ ಸಿಎ ನಿವೇಶನ ಹಂಚಿಕೆ ಸಂಬಂಧ ಉಪ ಸಮಿತಿ ರಚನೆ

September 15, 2020

ಮೈಸೂರು, ಸೆ.14(ಎಸ್‍ಬಿಡಿ)- ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ(ಮುಡಾ) ವ್ಯಾಪ್ತಿಯ ನಾಗರಿಕ ಸೌಲಭ್ಯ(ಸಿಎ) ನಿವೇಶನ ಹಂಚಿಕೆ ಪ್ರಕ್ರಿಯೆಗೆ ಉಪ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ.

ಮುಡಾ ನೂತನ ಅಧ್ಯಕ್ಷ ಹೆಚ್.ವಿ.ರಾಜೀವ್ ಅಧ್ಯಕ್ಷತೆ ಯಲ್ಲಿ ಸೋಮವಾರ ನಡೆದ ಆಡಳಿತ ಮಂಡಳಿಯ ಮೊದಲ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಹೊಸದಾಗಿ ಗುರುತಿಸಲಾಗಿರುವ 256 ಸಿಎ ನಿವೇ ಶನಗಳ ಹಂಚಿಕೆಯಲ್ಲಿ ಯಾವುದೇ ಗೊಂದಲವಾಗ ದಂತೆ ನಿರ್ವಹಿಸುವ ನಿಟ್ಟಿನಲ್ಲಿ ಉಪ ಸಮಿತಿ ರಚಿಸ ಬೇಕು. ನಿವೇಶನಕ್ಕೆ ಅರ್ಜಿ ಕರೆಯುವುದರಿಂದ ಹಿಡಿದು ಎಲ್ಲಾ ಪ್ರಕ್ರಿಯೆಯನ್ನೂ ಉಪಸಮಿತಿಯೇ ನಿರ್ವಹಿಸಿ, ಆಡಳಿತ ಮಂಡಳಿ ಸಾಮಾನ್ಯ ಸಭೆಗೆ ಮಂಡಿಸಬೇಕೆಂಬ ನಿರ್ಣಯಕ್ಕೆ ಸದಸ್ಯರು ಒಮ್ಮತ ವ್ಯಕ್ತಪಡಿಸಿದರು. ಅಲ್ಲದೆ ಉಪ ಸಮಿತಿ ರಚನೆಗೆ ಮುಡಾ ಅಧ್ಯಕ್ಷರಿಗೆ ಅಧಿಕಾರ ನೀಡಲಾಯಿತು.

ದಸರೆಗೆ 5 ಕೋಟಿ: ಈ ಬಾರಿ ದಸರಾ ಮಹೋ ತ್ಸವಕ್ಕೆ ಮುಡಾ ವತಿಯಿಂದ 5 ಕೋಟಿ ರೂ.ಗಳನ್ನು ಜಿಲ್ಲಾಡಳಿತಕ್ಕೆ ನೀಡಲು ಸಭೆಯಲ್ಲಿ ತೀರ್ಮಾನಿಸ ಲಾಯಿತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡರು, ಈ ಹಿಂದೆ ಅದ್ಧೂರಿಯಾಗಿ ದಸರಾ ಆಚರಿಸಿದಾಗಲೇ ಮುಡಾದಿಂದ ಇಷ್ಟು ಹಣ ನೀಡಿಲ್ಲ. ಪಂಜಿನ ಕವಾಯತು ನಿರ್ವ ಹಣೆ ಹಾಗೂ ಇನ್ನಿತರೆ ಜವಾಬ್ದಾರಿಯನ್ನು ಮಾತ್ರ ನಿರ್ವಹಿಸಲಾಗುತ್ತಿತ್ತು. ಆದರೆ ಈ ಬಾರಿ ಸರಳವಾಗಿ ದಸರಾ ಆಚರಿಸಲಾಗುತ್ತಿದೆ. ಅಲ್ಲದೆ ಪಂಜಿನ ಕವಾ ಯತೂ ಇರುವುದಿಲ್ಲ.  ಹಾಗಾಗಿ 2 ಕೋಟಿ ರೂ. ನೀಡಿದರೆ ಸಾಕು ಎಂದು ಅಭಿಪ್ರಾಯಿಸಿದರು.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನವರ ಅಧ್ಯಕ್ಷತೆಯಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಭೆಯಲ್ಲಿ 5 ಕೋಟಿ ರೂ. ನೀಡಲು ಒಪ್ಪಿ ರುವುದರಿಂದ ಕೊಡೋಣ ಎಂದು ಅಧ್ಯಕ್ಷರಾದಿ ಯಾಗಿ ಎಲ್ಲಾ ಸದಸ್ಯರು ಹೇಳಿದರು.

ಸಿಸಿಸಿಗೆ 90 ಲಕ್ಷ: ಮುಡಾ ವತಿಯಿಂದ ಖಾಸಗಿ ಆಸ್ಪತ್ರೆಯನ್ನು ಪಡೆದು ಕೋವಿಡ್ ಕೇರ್ ಸೆಂಟರ್ (ಸಿಸಿಸಿ) ನಿರ್ವಹಿಸಲಾಗುತ್ತಿದ್ದು, ಅದಕ್ಕೆ ಒಟ್ಟು 90 ಲಕ್ಷ ರೂ. ವೆಚ್ಚವಾಗಬಹುದೆಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮರಿತಿಬ್ಬೇಗೌಡರು, ಮುಡಾದಿಂದ ಕೋವಿಡ್ ಪರಿಹಾರ ನಿಧಿಗೆ 1 ಕೋಟಿ ರೂ. ನೀಡಲಾಗಿದೆ. ಆದಾಗ್ಯೂ ಕೋವಿಡ್ ಕೇರ್ ಸೆಂಟರ್‍ಗೆ ಇಷ್ಟೊಂದು ಹಣ ವ್ಯಹಿಸುವುದು ಸರಿ ಯಲ್ಲ. ರೈತರಿಗೆ 200 ಕೋಟಿ ರೂ.ಗೂ ಹೆಚ್ಚು ಪರಿಹಾರ ನೀಡುವುದು ಬಾಕಿಯಿದೆ. ಕಾಮಗಾರಿಗಳ ಪೂರ್ಣ ಗೊಳಿಸಬೇಕಿದೆ. ಹೊಸ ಯೋಜನೆಗಳನ್ನು ತರಬೇಕಿದೆ. ಹೀಗಿರುವಾಗ ಸದಸ್ಯರ ಗಮನಕ್ಕೂ ಬಾರದಂತೆ  ಪ್ರಾಧಿಕಾರದ ಹಣವನ್ನು ವ್ಯಯಿಸಬೇಡಿ ಎಂದರು.

ಕೋವಿಡ್ ಕೇರ್ ಸೆಂಟರ್ ನಿರ್ವಹಣೆಗೆ ಖಾಸಗಿ ಸಂಸ್ಥೆಗಳ ಸಹಕಾರ ಕೇಳಲಾಯಿತು. ಆದರೆ ಸಕಾರಾ ತ್ಮಕ ಸ್ಪಂದನೆ ಸಿಗದ ಕಾರಣ ಜಿಲ್ಲಾಧಿಕಾರಿಗಳ ನಿರ್ದೇಶನ ದಂತೆ ಮುಡಾದಿಂದಲೇ ನಿರ್ವಹಣೆ ಮಾಡ ಬೇಕಾಯ್ತು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು.

ಸೇಲ್ ಡೀಡ್ ಕೊಡಿ: ಗುಂಪು ಮನೆ ಯೋಜನೆ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಲ್.ನಾಗೇಂದ್ರ, ಈ ಹಿಂದಿನಂತೆ ಯಾವುದೇ ಗೊಂದಲಕ್ಕೆ ಎಡೆ ಮಾಡಿ ಕೊಡಬಾರದು. ವ್ಯವಸ್ಥಿತವಾಗಿ, ಉತ್ತಮ ರೀತಿಯಲ್ಲಿ ಮನೆಗಳ ನಿರ್ಮಿಸಿ, ಅರ್ಹರಿಗೆ ಅನುಕೂಲ ಮಾಡಿ ಕೊಡಬೇಕು. ಹಾಗೆಯೇ ಖಾಲಿ ನಿವೇಶನಗಳಿಗೆ ಸೇಲ್ ಡೀಡ್ ನೀಡುವ ನಿಯಮಾವಳಿಯಲ್ಲಿ ಸುಧಾ ರಣೆಯಾಗಬೇಕಿದೆ. ಸೇಲ್ ಡೀಡ್ ಪಡೆಯುವ ಸಲು ವಾಗಿ ತರಾತುರಿಯಲ್ಲಿ ನಿವೇಶನದ ಒಂದು ಭಾಗದಲ್ಲಿ ಮನೆ ನಿರ್ಮಿಸಿ, ನಂತರ ಕೆಡವುತ್ತಿದ್ದಾರೆ. ಇದರಿಂದ ನಿವೇಶನ ಮಾಲೀಕರಿಗೆ ಲಕ್ಷಾಂತರ ರೂ. ನಷ್ಟ. ಈ ಹಿಂದೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿದ್ದಂತೆ ನಿವೇಶನದಾರರಿಗೆ ಸುಲಭವಾಗಿ ಸೇಲ್‍ಡೀಡ್ ನೀಡುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾ ವನೆ ಸಲ್ಲಿಸಿ, ಆಗ್ರಹಿಸಬೇಕು. ದಟ್ಟಗಳ್ಳಿಯಲ್ಲಿ ವಸತಿ ಬಡಾವಣೆ ನಿರ್ಮಿಸ ಬೇಕೆಂದು ಒತ್ತಾಯಿಸಿದರು.

ಮೂಲ ಸೌಕರ್ಯಕ್ಕೆ ಮನವಿ: ಈಗಾಗಲೇ ಮುಡಾ ದಿಂದ ನಗರ ಪಾಲಿಕೆಗೆ ಹಸ್ತಾಂತರಿಸಿರುವ ಅನೇಕ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳು ಸಮ ರ್ಪಕ ವಾಗಿಲ್ಲ. ಈ ಬಗ್ಗೆ ವಿವರ ಸಲ್ಲಿಸಲಿದ್ದು, ಮುಡಾ ದಿಂದಲೇ ಬಾಕಿ ವ್ಯವಸ್ಥೆ ಕಲ್ಪಿಸಬೇಕೆಂದು ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಸಭೆಗೆ ಮನವಿ ಮಾಡಿದರು. ಆದರೆ ನೂತನ ಅಧ್ಯಕ್ಷರ ಮೊದಲ ಸಭೆಯಾಗಿದ್ದರಿಂದ ಯಾವುದೇ ವಿಷಯಾಧಾರಿತ ಚರ್ಚೆ ನಡೆಸಲಿಲ್ಲ. ಹಾಗಾಗಿ ಮುಂದಿನ ತಿಂಗಳು ಮೊದಲ ವಾರದಲ್ಲಿ ನಡೆಯುವ ಸಭೆಯಲ್ಲಿ ಈ ಬಗ್ಗೆ ಸಮಗ್ರ ವಿವರ ನೀಡು ವಂತೆ ಸದಸ್ಯರು ತಿಳಿಸಿದರು. ಮಾಜಿ ಸಚಿವರು, ಶಾಸ ಕರೂ ಆದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ತನ್ವೀರ್ ಸೇಠ್, ವಿಧಾನಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್, ಕೆ.ಟಿ.ಶ್ರೀಕಂಠೇಗೌಡ, ಆರ್.ಧರ್ಮಸೇನಾ, ಶಾಸಕ ಹರ್ಷವರ್ಧನ್ ಲಕ್ಷ್ಮೀದೇವಿ ಸೇರಿದಂತೆ ಎಲ್ಲಾ ಸದಸ್ಯರೂ ಸಭೆಯಲ್ಲಿ ಪಾಲ್ಗೊಂಡು ಮುಡಾ ಆಡಳಿತ ಹಾಗೂ ಯೋಜನೆಗಳ ಸಂಬಂಧ ನೂತನ ಅಧ್ಯಕ್ಷ ರಿಗೆ ಸಲಹೆ ನೀಡಿದರು. ಮುಡಾ ಆಯುಕ್ತ ಡಿ.ಬಿ. ನಟೇಶ್ ಸೇರಿದಂತೆ ಅನೇಕ ಅಧಿಕಾರಿಗಳು ಹಾಜರಿದ್ದರು.

 

Translate »