ಹಾಲು, ನೀರು, ವಿದ್ಯುತ್ ದರ ಹೆಚ್ಚಳದ ಚಿಂತನೆಯಿಲ್ಲ
News

ಹಾಲು, ನೀರು, ವಿದ್ಯುತ್ ದರ ಹೆಚ್ಚಳದ ಚಿಂತನೆಯಿಲ್ಲ

January 23, 2022

ಬೆಂಗಳೂರು, ಜ.22(ಕೆಎಂಶಿ)-ಅಗತ್ಯ ವಸ್ತುವಾದ ಹಾಲು, ನೀರು ಹಾಗೂ ವಿದ್ಯುತ್ ದರವನ್ನು ಹೆಚ್ಚಳ ಮಾಡುವ ಚಿಂತನೆ ಇಲ್ಲ. ಯಾವುದೇ ಕಾರಣಕ್ಕೂ ಈ ಬಗ್ಗೆ ಅವಸರದ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ ಎನ್ನುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜನತೆಗೆ ಶುಭ ಸುದ್ದಿ ನೀಡಿದ್ದಾರೆ.

ಇತ್ತೀಚೆಗಷ್ಟೇ ಹಾಲಿನ ದರವನ್ನು ಪ್ರತಿ ಲೀಟರ್‍ಗೆ 3ರೂ., ವಿದ್ಯುತ್ ಶುಲ್ಕವನ್ನು ಯೂನಿಟ್‍ಗೆ 2 ರೂ. ಹಾಗೂ ನೀರಿನ ಶುಲ್ಕವನ್ನು ಹೆಚ್ಚಳ ಮಾಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಈ ಆತಂಕಕ್ಕೆ ತೆರೆ ಎಳೆದಿರುವ ಸಿಎಂ, ದರ ಏರಿಕೆಗಳ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ ಎಂದರು.
ಎಲ್ಲಾ ಸರ್ಕಾರಗಳು ಅಧಿಕಾರದಲ್ಲಿದ್ದಾಗ ಇಂತಹ ಪ್ರಸ್ತಾವನೆ ಬರುವುದು ಸರ್ವೇ ಸಾಮಾನ್ಯ. ಹಾಲು, ನೀರು ಮತ್ತು ವಿದ್ಯುತ್ ದರ ಹೆಚ್ಚಳ ಮಾಡಲು ನನಗೆ ಪ್ರಸ್ತಾ ವನೆ ಸಲ್ಲಿಸಿರುವುದು ನಿಜ. ನಾವು ಎಲ್ಲಾ ಆಯಾಮಗಳಲ್ಲೂ ಚರ್ಚೆ ಮಾಡುತ್ತೇವೆ. ನಂತರವೇ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಸರ್ಕಾರದ ಮಟ್ಟದಲ್ಲಿ ಯಾವುದೂ ಕೂಡ ಈವರೆಗೂ ಚರ್ಚೆಯಾಗಿಲ್ಲ. ಇವೆಲ್ಲವೂ ಊಹಾಪೆÇೀಹಗಳು. ಅಂತಿಮವಾಗಿ ಸರ್ಕಾರ ಜನರ ಅಭಿಪ್ರಾಯದಂತೆಯೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಮುಂದೆ ನೋಡೋಣ ಎಂದು ಸೂಚ್ಯವಾಗಿ ಹೇಳಿದರು.

ನಾವು ಯಾವುದೇ ಒತ್ತಡಕ್ಕೆ ಮಣಿಯದೆ ವಾರಾಂತ್ಯದ ಲಾಕ್‍ಡೌನ್‍ನನ್ನು ತೆರವುಗೊಳಿಸಿದ್ದೇವೆ. ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ನೌಕರರು, ಆಟೋರಿಕ್ಷಾ, ಓಲಾ, ಊಬರ್ ಟ್ಯಾಕ್ಸಿ, ಸರಕು ಸಾಗಾಣಿಕೆ, ಬೀದಿ ಬದಿ ವ್ಯಾಪಾರಿಗಳು, ಗುಡಿ ಕೈಗಾರಿಕೆಗಳು ಸೇರಿದಂತೆ ಯಾರೊಬ್ಬರಿಗೂ ಹೊರೆಯಾಗಬಾರದೆಂಬ ಕಾರಣಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಎಂದು ಸಮರ್ಥಿಸಿಕೊಂಡರು.

ನಮಗೆ ವೀಕೆಂಡ್ ಕಫ್ರ್ಯೂ ತೆರವುಗೊಳಿಸುವಂತೆ ಯಾವುದೇ ಒತ್ತಡವಿರಲಿಲ್ಲ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ, ತಜ್ಞರು, ವೈದ್ಯರು, ಸಚಿವರು ಸೇರಿದಂತೆ ಈ ವಲಯದಲ್ಲಿ ಅನುಭವ ಇರುವವರ ಅಭಿಪ್ರಾಯ ಪಡೆದೇ ಈ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ಸರ್ಕಾರ ಒತ್ತಡಕ್ಕೆ ಮಣಿಯುವುದಿಲ್ಲ ಎಂದರು.
ಜೀವನವೂ ನಡೆಯಬೇಕು ಜೀವವೂ ಉಳಿಯಬೇಕು. ಕೋವಿಡ್ ಸದ್ಯಕ್ಕೆ ಯಾರನ್ನೂ ಕೂಡ ಬಿಟ್ಟಿಲ್ಲ. ನಾವು ಎಚ್ಚರಿಕೆಯಿಂದ ಇದ್ದು ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಅನಗತ್ಯವಾಗಿ ತಿರುಗಾಟ ನಡೆಸುವುದು, ಮಾಸ್ಕ್ ಹಾಕದೇ ಇರುವುದು, ದೈಹಿಕ ಅಂತರ ಕಾಪಾಡದೇ ನಿರ್ಲಕ್ಷ್ಯ ವಹಿಸುವುದು ಬೇಡ. ನೀವು ಬದುಕಿ ಬೇರೆಯವರನ್ನೂ ಬದುಕಲು ಬಿಡಿ ಎಂದು ಸಿಎಂ ಮನವಿ ಮಾಡಿದರು.

ಸರ್ಕಾರ ಏನೇ ನಿರ್ಧಾರ ಕೈಗೊಂಡರೂ ಅದು ಸಾರ್ವಜನಿಕರ ಹಿತದೃಷ್ಟಿಗೆ ಒಳಪಟ್ಟಿರುತ್ತದೆ. ಒಂದು ಮತ್ತು ಎರಡನೇ ಅಲೆಯಲ್ಲಿ ಸಾಕಷ್ಟು ಕಹಿ ಅನುಭವಗಳಾ ಗಿವೆ. ಮೂರನೇ ಅಲೆಯಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ ಚೇತರಿಸಿ ಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಕಡಿಮೆ ಇದೆ. ಐಸಿಯು, ಆಕ್ಸಿಜನ್ ಸಮಸ್ಯೆ ಇಲ್ಲ. ಕೋವಿಡ್ ಲಸಿಕೆ ಪಡೆದು ಕೊಂಡಿರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿಲ್ಲ ಎಂದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಕೊರೊನಾ ಪಾಸಿಟಿವ್ ಬಂದಿರುವ ಸುದ್ದಿ ತಿಳಿದಿದೆ. ಪ್ರಸ್ತುತ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಸೋಂಕು ಅಷ್ಟೊಂದು ತೀವ್ರತೆ ಬೀರಿಲ್ಲ ಎಂಬ ನಂಬಿಕೆ ನನಗಿದೆ. ಅವರ ಕುಟುಂಬದವರು, ವೈದ್ಯರ ಜತೆಯೂ ಮಾತನಾಡುತ್ತೇನೆ ಎಂದರು.

Translate »