ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ
News

ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ

January 31, 2022

ನವದೆಹಲಿ, ಜ. 30- ಸೋಮವಾರದಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಮತ್ತೊಮ್ಮೆ ವೇದಿಕೆ ಸಜ್ಜಾಗಿದೆ. ಪೆಗಾಸಸ್ ವಿವಾದ, ರೈತರ ಸಮಸ್ಯೆಗಳು ಮತ್ತು ಪೂರ್ವ ಲಡಾಕ್‍ನಲ್ಲಿ ಚೀನಾದ ಆಕ್ರಮಣಗಳಂತಹ ವಿಷಯಗಳನ್ನು ಸರ್ಕಾರದ ವಿರುದ್ಧ ಅಸ್ತ್ರಗಳಾಗಿ ಪ್ರಯೋಗಿಸಲು ಪ್ರತಿ ಪಕ್ಷಗಳು ಸಜ್ಜಾಗಿವೆ.

ಜಂಟಿ ಸದನವನ್ನು ಉದ್ದೇಶಿಸಿ ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದೊಂದಿಗೆ ಅಧಿ ವೇಶನ ಆರಂಭವಾಗ ಲಿದೆ. ಕೋವಿಡ್-19 ಸಾಂಕ್ರಾಮಿಕದ ಪರಿಸ್ಥಿತಿ ಹಿನ್ನೆಲೆಯಲ್ಲಿ ಸೆಂಟ್ರಲ್ ಹಾಲ್ ಹಾಗೂ ಉಭಯ ಸದನಗಳ ಚೇಂಬರ್‍ಗಳಲ್ಲಿ ಸಂಸದರ ಆಸನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೈಹಿಕ ಅಂತರ ಕಾಯ್ದುಕೊಂಡು ಕೂರಬೇಕಾದ ಕಾರಣ, ಲೋಕ ಸಭೆ ಮತ್ತು ರಾಜ್ಯ ಸಭೆ ಕಲಾಪಗಳನ್ನು ಪಾಳಿಗಳಲ್ಲಿ ನಡೆಸಲಾಗುತ್ತದೆ. ಅಲ್ಲದೆ 2 ಹಂತಗಳಲ್ಲಿ ಅಧಿವೇಶನ ನಡೆಯಲಿದೆ. ಅಧಿವೇಶನದ ಮೊದಲ ಭಾಗವು ಜನವರಿ 31ರಿಂದ ಫೆಬ್ರವರಿ 11ರವರೆಗೆ ನಡೆಯಲಿದ್ದು, ನಂತರ ವಿವಿಧ ಇಲಾಖೆಗಳಿಗೆ ಬಜೆಟ್ ಹಂಚಿಕೆಗಳನ್ನು ಪರಿಶೀಲಿಸಲು ಬಿಡುವು ನೀಡಲಾಗುತ್ತದೆ. ಮಾರ್ಚ್ 14ರಂದು ಅಧಿವೇಶನ ಪುನಾರಂಭವಾಗಲಿದ್ದು, ಏಪ್ರಿಲ್ 8 ರಂದು ಅಂತ್ಯಗೊಳ್ಳಲಿದೆ. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಬುಧವಾರದಿಂದ ಕೈಗೆತ್ತಿಕೊಳ್ಳಲಾಗುತ್ತದೆ. ಫೆಬ್ರುವರಿ 7ರಂದು ಪ್ರಧಾನಿ ನರೇಂದ್ರ ಮೋದಿ ಚರ್ಚೆಗೆ ಉತ್ತರಿಸುವ ನಿರೀಕ್ಷೆಯಿದೆ. ಸುಗಮ ಕಲಾಪಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮತ್ತು ರಾಜ್ಯಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ಎಲ್ಲಾ ಪಕ್ಷಗಳ ಸದನ ನಾಯಕರೊಂದಿಗೆ ಸೋಮವಾರ ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ.

Translate »